×
Ad

ಭಾವೈಕ್ಯದ ಸಂಕೇತ ‘ಹಾಜಿ ಮಸ್ತಾನ್’

► ಸಂದಲ ಹೊರಡುವುದು ಬ್ರಾಹ್ಮಣರ ಮನೆಯಿಂದ ►ಗಲೀಫ್ ಬರುವುದು ಲಿಂಗಾಯತರಿಂದ ►ಉರೂಸ್ ನಿಮಿತ್ತ ಎಲ್ಲಾ ಜಾತಿ ಧರ್ಮದವರಿಂದ ರೋಜಾ

Update: 2026-02-02 14:39 IST

ತಿಕೋಟಾ: ಬರದ ನಾಡು... ಬೆಂಗಾಡು... ಎಂಬ ವಿಶೇಷಣ ಹೊತ್ತಿದ್ದ ವಿಜಯಪುರ ಜಿಲ್ಲೆಯ ಚಿತ್ರಣವನ್ನು ಮೊದಲ ಬಾರಿಗೆ ಬದಲಿಸಿದ್ದು ತಿಕೋಟಾ. ಕಳೆದ ವಿಧಾನಸಭಾ ಅವಧಿಯಲ್ಲಿ ಬಬಲೇಶ್ವರ ಮತಕ್ಷೇತ್ರದ ಶಾಸಕರು ಹಾಗೂ ಜಲಸಂಪನ್ಮೂಲ ಸಚಿವರಾದ ಡಾ.ಎಂ.ಬಿ.ಪಾಟೀಲರ ನೀರಾವರಿ ಕ್ರಾಂತಿಯಿಂದ ವಿಜಯಪುರ ಜಿಲ್ಲೆಯಲ್ಲಿ ಈಗ ಮಲೆನಾಡನ್ನು ಮೀರಿುಸುವಂತೆ ಹಸಿರು ಕಂಗೊಳಿಸುತ್ತಿದೆ.

ಈ ಭಾಗದಲ್ಲಿ ಬೆಳೆಯುವ ಬೀಜ ರಹಿತ ಕಪ್ಪು ದ್ರಾಕ್ಷಿ ವಿದೇಶಕ್ಕೆ ರಫ್ತಾಗುವ ಮೂಲಕ ಬಿಸಿಲ ನಾಡನ್ನು ಹಣ್ಣಿನ ನಾಡು ಎಂದು ಪರಿವರ್ತಿಸಿತು. ಹಸಿರು ದ್ರಾಕ್ಷಿಯಿಂದ ತಯಾರಿಸುವ ಒಣ ದ್ರಾಕ್ಷಿ (ಮಣೂಕ) ದೇಶದ ಎಲ್ಲೆಡೆ ಸಿಹಿಯಿಂದಲೇ ಖ್ಯಾತಿ ಪಡೆದಿದೆ. ದಾಳಿಂಬೆಯೂ ಅಷ್ಟೇ ಹೆಸರುವಾಸಿ. ಬಾಳೆ, ಬಾರೆ ಹಣ್ಣುಗಳಿಂದಲೂ ತಿಕೋಟಾ ಖ್ಯಾತಿ ಪಡೆದಿದೆ.

ಭಾರತದ ಪ್ರಪ್ರಥಮ ಸರ್ಕಸ್ ಕಂಪನಿ ಆರಂಭಿಸಿದ ವಿಷ್ಣುಪಂತ ಛತ್ರೆ ಹಾಗೂ ಕಾಶೀನಾಥ ಛತ್ರೆ, ಚೌಡಕಿ ಪದದ ಗೌರವ್ವ ಮಾದರ, ನಾಡಿನ ಖ್ಯಾತ ಪ್ರವಚನಕಾರ ಕರ್ನಾಟಕ ಕಲಾ ತಿಲಕ ದಾನಪ್ಪ ಜತ್ತಿ ತಿಕೋಟಾದ ಹೆಮ್ಮೆಯ ಮಕ್ಕಳು. ಕಪ್ಪು ಕಲ್ಲಿನ ತಾಜ್‌ಮಹಲ್ ಎಂದೇ ಖ್ಯಾತಿಯಾಗಿರುವ ಇಬ್ರಾಹಿಂ ರೋಜಾದ ಶಿಲ್ಪಿ ಸಂದಲ್ ಮಲೀಕ್‌ನ ಸಮಾಧಿಯೂ ಇಲ್ಲಿಯೇ ಇರುವುದು ವಿಶೇಷ.

ಮಹಾರಾಷ್ಟ್ರದ ಕುರುಂದವಾಡ ಸಂಸ್ಥಾನದಲ್ಲಿ ತಿಕೋಟಾ ತಾಲೂಕು ಕೇಂದ್ರವಾಗಿತ್ತು ಎಂಬುದು ಐತಿಹ್ಯ. ಇದೀಗ 2018ರ ಜನವರಿಯಿಂದ ಮತ್ತೆ ಗತವೈಭವ ಪಡೆದಿದ್ದು, ವಿಜಯಪುರ ಜಿಲ್ಲೆಯ ತಾಲೂಕು ಕೇಂದ್ರವಾಗಿ ಕಾರ್ಯಾಚರಿಸುತ್ತಿದೆ.

ಹಲವು ವಿಶೇಷಗಳನ್ನೇ ತನ್ನೊಡಲಲ್ಲಿಟ್ಟುಕೊಂಡಿರುವ ತಿಕೋಟಾ ಹಿಂದೂ-ಮುಸ್ಲಿಂ ಸಾಮರಸ್ಯದ ಕೇಂದ್ರ ತಾಣ. ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಹಾಜಿ ಮಸ್ತಾನ್ ಉರೂಸ್ ಹಿಂದೂ-ಮುಸ್ಲಿಮರ ಭಾವೈಕ್ಯದ ಪ್ರತೀಕವಾಗಿದೆ. ತಿಕೋಟಾ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಹಿಂದೂಗಳು ಇದರಲ್ಲಿ ಭಾಗಿಯಾಗುತ್ತಾರೆ.

ಇಸ್ಲಾಮಿಕ್ ತಿಂಗಳಾದ ದುಲ್ ಹಜ್‌ನಲ್ಲಿ ಇಲ್ಲಿ ಉರೂಸ್ ನಡೆಯುತ್ತದೆ. ಉರೂಸ್ ನಿಮಿತ್ತ ದುಲ್ ಹಜ್ ತಿಂಗಳ ಒಂದರಿಂದ 20 ದಿನ ಎಲ್ಲ ಜಾತಿ, ಧರ್ಮದವರು ರೋಜಾ (ಉಪವಾಸ ವ್ರತಾಚಾರಣೆ) ನಡೆಸುವುದು ಇಲ್ಲಿನ ವೈಶಿಷ್ಟ್ಯ.

ಉರೂಸ್(ಪುಣ್ಯತಿಥಿ)ನ ಮೊದಲ ದಿನ ಸಂದಲ್ (ಗಂಧ) ಹೊರಡುವುದು ಬ್ರಾಹ್ಮಣರಾದ ರಾಮರಾವ್ ದೇಸಾಯಿ ಮನೆಯಿಂದ. ಮರು ದಿನ ನೈವೇದ್ಯದ ಜತೆ ಗಲೀಫ್ (ವಸ್ತ್ರ) ಬರುವುದು ಲಿಂಗಾಯತರಾದ ಡಾ. ಮಲ್ಲನಗೌಡ ಪಾಟೀಲರ ಮನೆಯಿಂದ. ಉರೂಸ್‌ನ ಮೂರನೇ ದಿನ ಕುಸ್ತಿ, ಬಯಲಾಟ, ಕವಾಲಿ, ಕರ್ಬಲಾ ಹಾಡುಗಳು ಸೇರಿದಂತೆ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮ ಕೂಡಾ ನಡೆಯುತ್ತವೆ. ಅಸಂಖ್ಯಾತ ಹಿಂದೂ-ಮುಸ್ಲಿಮರು ಉರೂಸಿನಲ್ಲಿ ಭಾಗಿಯಾಗಿ ಸಂಭ್ರಮ ಹೆಚ್ಚಿಸುತ್ತಾರೆ. ಇಲ್ಲಿ ಜಾತಿ, ಮತ, ಪಂಥ, ಪಂಗಡಗಳ ಸೋಂಕಿಲ್ಲ. ಮೇಲು-ಕೀಳೆಂಬ ಭೇದ ಭಾವವಿಲ್ಲ. ಎಲ್ಲರೂ ಭಕ್ತಿ-ಶ್ರದ್ಧೆಯಿಂದ ಒಂದು ಗೂಡುತ್ತಾರೆ.

ಸೂಫಿ ಸಂತ ಹಾಜಿ ಮಸ್ತಾನ್:

ಹಾಜಿ ಮಸ್ತಾನ್ ಸ್ವಧರ್ಮದ ಬಗ್ಗೆ ಪ್ರೀತಿ ಮತ್ತು ಪರಧರ್ಮಗಳ ಬಗ್ಗೆ ಗೌರವವಿದ್ದ ಇಸ್ಲಾಂ ಧರ್ಮದ ಸೂಫಿ ಸಂತ. ಸಾಧನೆಯ ಬಲದಿಂದ ಸಿದ್ಧ ಪುರುಷನಾಗಿದ್ದ. ‘ಲೋಕವೇ ನನ್ನ ಮನೆ, ಮನು ಕುಲವೇ ನನ್ನ ಕುಟುಂಬ’ ಎಂಬ ವಿಶಾಲ ತತ್ವದಿಂದ ಎಲ್ಲರ ಕಲ್ಯಾಣವನ್ನೇ ಬಯಸಿದ ಸಂತ ಶ್ರೇಷ್ಠನಾಗಿದ್ದ. ಇಸ್ಲಾಂ ಧರ್ಮದ ಪಂಚಸೂತ್ರಗಳಲ್ಲಿ ಕೊನೆಯದಾದ ಹಜ್ ಯಾತ್ರೆ ಇಂದಿನ ವೈಜ್ಞಾನಿಕ ಯುಗದಲ್ಲಿ ಸುಲಭ ಎನಿಸಿರಬಹುದು. ಆದರೆ ಹಿಂದಿನ ಕಾಲದಲ್ಲಿ ಸಾಮಾನ್ಯರಿಗೆ ಅಸಾಧ್ಯವಾದ ಕೆಲಸ. ಅದು ಹಾಜಿ ಮಸ್ತಾನ್ ಅವರಂಥ ಆಧ್ಯಾತ್ಮಿಕ ಸಾಧಕರಿಗೆ ಸುಲಭ ಮಾತ್ರದಲ್ಲಿ ಸಾಧ್ಯವಾಗುತ್ತಿತ್ತು. ತಮ್ಮ ಯೋಗ ಸಾಧನೆಯಿಂದಲೇ ಇವರು ಹಜ್ ಯಾತ್ರೆ ಮಾಡಿ ಬಂದಿದ್ದರು ಎಂಬುದು ಇಲ್ಲಿನ ಪ್ರತೀತಿ.

ಇವರ ದರ್ಗಾದ ಪಕ್ಕದಲ್ಲಿ ಬಡಕಲ್ಲ ಸಾಹೇಬರ ಸಮಾಧಿ ದರ್ಗಾ ಇದೆ. ದಿಗಂಬರರಾಗಿದ್ದ ಇವರ ನಿಜನಾಮ ಸಂಗೀನ್ ಶಾ ವಲಿ. ಇವರ ಶಿಷ್ಯ ನೂರಜಿ ಸಾಬ್ ಬಡಕಲ್ಲನಿಂದಾಗಿ ಗುರುವಿಗೆ ಬಡಕಲ್ಲ ಸಾಹೇಬ ಹೆಸರು ಬಂದಿದೆ. ಇವರ ಸಮಾಧಿಗೆ ಇನ್ನೂ ಮೇಲ್ಛಾವಣಿ ಆಗಿಲ್ಲ. ಏಳು ನದಿ ನೀರನ್ನು ಒಂದೇ ದಿನದಲ್ಲಿ ತಂದು ಇಲ್ಲಿ ಮೇಲ್ಛಾವಣಿ ಕಟ್ಟಬೇಕೆಂಬ ಐತಿಹ್ಯವಿದೆ. ಅಂತಹ ದಿನ ಇನ್ನೂ ಬಾರದಿರುವುದರಿಂದ ಇಲ್ಲಿ ಇನ್ನೂ ಮೇಲ್ಛಾವಣಿ ಆಗಿಲ್ಲ.

ಹಾಜಿ ಮಸ್ತಾನ್ ದರ್ಗಾ ಕಟ್ಟಿಸಿದವರು ಹಿಂದೂಗಳಾದ ಪೀರಶೆಟ್ಟಿ ಮನೆತನದವರು. ಉರೂಸಿನ ಪ್ರಥಮ ಸಂದಲ ಏರಿಸುವ ಗೌರವದ ಸ್ಥಾನ ಅವರಿಗಿದೆ. ಮೊದಲು ಬಡಕಲ ಸಾಹೇಬರ ದರ್ಗಾಕ್ಕೆ ಹೋಗಿ ನಂತರ ಹಾಜಿ ಮಸ್ತಾನ್ ದರ್ಗಾಕ್ಕೆ ಹೋಗುವುದು ಪರಂಪರೆಯಾಗಿ ಇಂದಿಗೂ ಚಾಚೂ ತಪ್ಪದೆ ಮುಂದುವರಿದಿದೆ. ಉರೂಸಿಗೆ ಬರುವ ಜನರಿಗಾಗಿ ದರ್ಗಾದ ಹಿಂಬದಿ ಇರುವ ಕೆರೆಗೆ ಈ ಬಾರಿಯೂ ಕೂಡಾ ಕೃಷ್ಣಾ ನದಿಯ ನೀರು ತುಂಬಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News