ಕೊಟ್ಟೂರಿನಲ್ಲಿ ನೇರಳೆ ಹಣ್ಣಿಗೆ ಭಾರೀ ಬೇಡಿಕೆ
ಕೊಟ್ಟೂರು: ವಿಜಯನಗರ ಜಿಲ್ಲೆಯ ಕೊಟ್ಟೂರು ಮತ್ತಿತರೆಡೆ ಬೆಳೆಯುತ್ತಿರುವ ನೇರಳೆ ಹಣ್ಣಿಗೆ ಭಾರೀ ಬೇಡಿಕೆ ಕಂಡು ಬಂದಿದೆ. ಈ ಹಣ್ಣಿಗೆ ರೋಗ ನಿರೋಧಕ ಶಕ್ತಿ ಇದೆ ಎಂದು ಹೇಳಲಾಗುತ್ತಿದ್ದು, ಇದನ್ನು ಖರೀದಿಸಲು ಜನರು ಹಾತೊರೆಯುತ್ತಿದ್ದಾರೆ.
ಮಧುಮೇಹದಿಂದ ಬಳಲುತ್ತಿರುವವರಿಗೆ ನೇರಳೆ ಹಣ್ಣು ಉತ್ತಮವಾಗಿದ್ದು, ರಕ್ತ ಶುದ್ಧೀಕರಣ ಗೊಳಿಸುವ ಗುಣವನ್ನೂ ಹೊಂದಿದೆ. ಆದ್ದರಿಂದಲೇ ಹಣ್ಣಿನ ದರವನ್ನು ಲೆಕ್ಕಿಸದೆ ಜನರು ಕೊಂಡು ಕೊಳ್ಳುತ್ತಿರುವುದು ಎಲ್ಲೆಂದರಲ್ಲಿ ಕಂಡು ಬರುತ್ತಿದೆ.
ಮೊದ ಮೊದಲು ಅರಣ್ಯ ಪ್ರದೇಶದಲ್ಲಿ ಈ ಹಣ್ಣು ಬೆಳೆಯುತ್ತಿತ್ತು. ಆದರೆ ಈಗ ಇದರ ಮಹತ್ವ ಹೆಚ್ಚಾಗುತ್ತಿದ್ದಂತೆ ಕೆಲವರು ಇದನ್ನು ತಮ್ಮ ಕೃಷಿ ಭೂಮಿಯಲ್ಲಿ ಬೆಳೆಯಲು ಆರಂಭಿಸಿದ್ದಾರೆ.
ನೇರಳ ಹೆಣ್ಣಿನ ದರ ಕಳೆದ ವರ್ಷಕ್ಕಿಂತ ಈ ವರ್ಷ ದುಪ್ಪಟ್ಟಾಗಿದೆ. ಕೆಜಿಗೆ 160 ರೂ.ಗಳಿಂದ 200 ರೂ. ವರೆಗೆ ಮಾರಾಟವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಜಿಗೆ 240ರಿಂದ 320 ರೂ.ವರೆಗೆ ಮಾರಾಟವಾಗುತ್ತಿದೆ. ಇದನ್ನು ಹೆಚ್ಚಾಗಿ ಬಳ್ಳಾರಿ, ಮಹಾರಾಷ್ಟ್ರದಿಂದ ತರಿಸಿ ಇಲ್ಲಿ ಮಾರಾಟ ಮಾಡಲಾಗುತ್ತಿದೆ.
ನೇರಳೆ ಹಣ್ಣನ್ನು ನಾವು ಮರಗಳಿದ್ದವರಿಂದ ಖರೀದಿ ಮಾಡಿಕೊಂಡು ಮಾರಾಟ ಮಾಡುತ್ತೇವೆ. ಸದ್ಯಕ್ಕೆ ನೇರಳ ಹಣ್ಣು ಮಾರಾಟ ಮಾಡುವುದೇ ನಮ್ಮ ದಿನನಿತ್ಯ ಬದುಕಿನ ಆಸರೆಯಾಗಿದೆ.
-ರೇಣುಕಮ್ಮ, ವ್ಯಾಪಾರಿ ಕೊಟ್ಟೂರು