×
Ad

ನಿಡಗಟ್ಟದ ನೀರಿನ ಬವಣೆ ನೀಗಿಸಿದ ನೂರುಲ್ಲಾ

ಸ್ವಂತ ಖರ್ಚಿನಲ್ಲಿ ಕೊಳವೆ ಬಾವಿ ಕೊರೆಸಿ ನೀರು ಪೂರೈಕೆ

Update: 2026-06-18 14:30 IST

ಹೊಸಕೋಟೆ : ತಾಲೂಕಿನ ಮುಗಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡಗಟ್ಟ ಗ್ರಾಮದಲ್ಲಿ ಉಂಟಾಗಿದ್ದ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಗ್ರಾಪಂನ ಮಾಜಿ ಉಪಾಧ್ಯಕ್ಷ ನೂರುಲ್ಲಾ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಕೊಳವೆ ಬಾವಿ ಕೊರೆಸಿದ್ದಾರೆ.

ಸುಮಾರು 1,400 ಜನಸಂಖ್ಯೆ ಹೊಂದಿರುವ ನಿಡಗಟ್ಟ ಗ್ರಾಮದಲ್ಲಿ ಕೆಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಸಮಸ್ಯೆ ನಿವಾರಣೆಗೆ ಶಾಸಕರ ಅನುದಾನದಲ್ಲಿ ನಾಲ್ಕು ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದರೂ ನೀರು ದೊರೆಯದೇ ಅವು ವಿಫಲವಾಗಿವೆ.

ಪ್ರಸ್ತುತ ಗ್ರಾಮ ಪಂಚಾಯತ್‌ನ ಒಂದು ಹಾಗೂ ಖಾಸಗಿಯವರ ಎರಡು ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆಯಾದರೂ ಗ್ರಾಮಕ್ಕೆ ಅಗತ್ಯವಿರುವಷ್ಟು ನೀರು ದೊರೆಯುತ್ತಿಲ್ಲ.

ಈ ಹಿನ್ನೆಲೆಯಲ್ಲಿ ನೂರುಲ್ಲಾ ಅವರು ತಮ್ಮ ಸ್ವಂತ ಹಣದಲ್ಲಿ ಹೊಸ ಕೊಳವೆ ಬಾವಿ ಕೊರೆಸಿ ಗ್ರಾಮಕ್ಕೆ ಉಚಿತವಾಗಿ ನೀರು ನೀಡುವ ಮೂಲಕ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಅವರ ಈ ಸಮಾಜಮುಖಿ ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಅಧಿಕಾರಿಗಳ ಮೆಚ್ಚುಗೆ: ಗ್ರಾಮದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿರುವುದನ್ನು ಅರಿತು ನೂರುಲ್ಲಾ ಅವರು ಸ್ವಂತ ಹಣದಲ್ಲಿ ಕೊಳವೆ ಬಾವಿ ಕೊರೆಸಿಕೊಟ್ಟಿರುವುದು ಶ್ಲಾಘನೀಯ. ಇದರಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ ಎಂದು ಮುಗಬಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಕೇಶ್ ತಿಳಿಸಿದ್ದಾರೆ.

ಗ್ರಾಮಸ್ಥರ ಪ್ರಶಂಸೆ: ನಮ್ಮ ಗ್ರಾಮದಲ್ಲಿ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಸರಕಾರದ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ನೂರುಲ್ಲಾ ಅವರು ಸದಸ್ಯ ಹಾಗೂ ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿಯೂ ತಮ್ಮ ಸ್ವಂತ ಕೊಳವೆ ಬಾವಿಯನ್ನು ಗ್ರಾಮದ ಬಳಕೆಗೆ ಬಿಟ್ಟಿದ್ದರು. ಇದೀಗ ಮತ್ತೆ ತಮ್ಮ ಹಣದಲ್ಲಿ ಕೊಳವೆ ಬಾವಿ ಕೊರೆಸಿರುವುದು ಗ್ರಾಮಸ್ಥರಿಗೆ ದೊಡ್ಡ ನೆರವಾಗಿದೆ ಎಂದು ಗ್ರಾಮಸ್ಥ ಅಣ್ಣಪ್ಪ ಹೇಳಿದ್ದಾರೆ.

ಗ್ರಾಮಸ್ಥರು ನನ್ನನ್ನು ಸದಸ್ಯನಾಗಿ ಆಯ್ಕೆ ಮಾಡಿ ಗೌರವ ನೀಡಿದ್ದಾರೆ. ಸಮಾಜ ಸೇವೆಯೇ ನನ್ನ ಧ್ಯೇಯ. ಹೀಗಾಗಿ ಗ್ರಾಮದ ನೀರಿನ ಸಮಸ್ಯೆ ನಿವಾರಣೆಗೆ ಕೊಳವೆ ಬಾವಿ ಕೊರೆಸಿದ್ದೇನೆ.

-ನೂರುಲ್ಲಾ, ನಿಡಗಟ್ಟ ಗ್ರಾಪಂ

ಮಾಜಿ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾರಾಯಣಸ್ವಾಮಿ ಸಿ.ಎಸ್.

contributor

Similar News