×
Ad

ಕರಾವಳಿಗೂ ಬಂದ ತೆಂಗಿನಕಾಯಿ ಗೆರಟೆ ವ್ಯಾಪಾರ!

ಟೆಂಪೋಗಳಲ್ಲಿ ಮನೆಮನೆಗಳಿಗೆ ತೆರಳಿ ಖರೀದಿ

Update: 2026-03-09 08:20 IST

ಉಡುಪಿ: ಒಂದು ಕಾಲದಲ್ಲಿ ಅಡುಗೆ ಕೋಣೆಯ ಒಲೆಗೆ ಮಾತ್ರ ಸೀಮಿತವಾಗಿದ್ದ ತೆಂಗಿನಕಾಯಿ ಚಿಪ್ಪಿ(ಗೆರಟೆ)ಗೂ ಇದೀಗ ಬೆಲೆ ಬಂದಿದೆ!. ನಿರುಪಯುಕ್ತ ಎಂಬಂತೆ ಮನೆಯ ತೋಟದಲ್ಲಿ ಎಸೆಯುತ್ತಿದ್ದ ತೆಂಗಿನ ಚಿಪ್ಪು ಉದ್ಯಮದ ಸರಕಾಗಿದೆ. ಇದಕ್ಕೆ ಬೇಡಿಕೆ ಎಷ್ಟು ಹೆಚ್ಚಾಗಿದೆ ಅಂದರೆ ಗೆರಟೆ ಇದೆಯೇ ಎಂದು ಮನೆಮನೆಗೆ ಕೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಾಗಿದೆ.

ಇದೆಲ್ಲ ಇತ್ತೀಚೆಗೆ ದಿನಗಳ ಬೆಳವಣಿಗೆ. ಕರಾವಳಿ ಜನತೆಯಲ್ಲಿ ಈ ಹೊಸ ಬೆಳವಣಿಗೆ ಆಶ್ಚರ್ಯದ ಜೊತೆಗೆ ಕುತೂಹಲ ಕೂಡ ಮೂಡಿಸಿದೆ. ತಮಿಳುನಾಡು, ಕೇರಳದಲ್ಲಿದ್ದ ಈ ವ್ಯಾಪಾರ ಇದೀಗ ನಮ್ಮ ಮನೆಯ ಬಾಗಿಲಿಗೂ ಕಾಲಿಟ್ಟಿದೆ. ಒಂದೆಡೆ ಇದು ಕೃಷಿಕರಿಗೆ ಲಾಭ ತಂದುಕೊಟ್ಟರೆ, ಇನ್ನೊಂದೆಡೆ ಗೃಹಿಣಿಯರ ಆದಾಯ ಮೂಲವಾಗಿದೆ.

ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿಯ ವಿವಿಧೆಡೆ ತಮಿಳುನಾಡು, ಕೇರಳ ಹಾಗೂ ಸ್ಥಳೀಯರು ಕೂಡ ಈ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮ ಗ್ರಾಮಗಳ ಮನೆಮನೆಗಳಿಗೆ ತೆರಳಿ ಗೂಡ್ಸ್ ರಿಕ್ಷಾ ಟೆಂಪೋಗಳ ಮೂಲಕ ತೆಂಗಿನಕಾಯಿ ಗೆರಟೆಯನ್ನು ಖರೀದಿಸಲಾಗುತ್ತಿದೆ. ಒಂದು ಕೊಟ್ಟರೂ ಸ್ವೀಕರಿಸುತ್ತಾರೆ, ಟನ್‌ಗಟ್ಟಲೆ ಕೊಟ್ಟರೂ ಪಡೆಯುತ್ತಾರೆ.

ಆದಾಯದ ಹೊಸ ಮೂಲ: ಒಮ್ಮಿಂದೊಮ್ಮೆಗೆ ಹುಟ್ಟಿ ಕೊಂಡಿರುವ ಈ ಗೆರಟೆ ವ್ಯಾಪಾರ ಕರಾವಳಿಗರಿಗೆ ಹೊಸ ಆದಾಯದ ಮೂಲವಾಗಿ ಪರಿಣಮಿಸಿದೆ.

ಈ ವ್ಯಾಪಾರ ಕೇರಳ ಮತ್ತು ತಮಿಳುನಾಡಿನಲ್ಲಿ ಹೆಚ್ಚಾಗಿತ್ತು. ಕರ್ನಾಟಕದ ಹಾಸನ, ತುಮಕೂರು ಕಡೆ ಕೂಡ ಇತ್ತು. ಆದರೆ ಈಗ ಕರಾವಳಿಗೂ ವ್ಯಾಪಿಸಿ ರುವುದು ಎಲ್ಲ ಕಡೆಗಳಲ್ಲಿ ಕಂಡುಬರುತ್ತಿದೆ. ಹಿಂದೆ ತೆಂಗಿನ ಚಿಪ್ಪನ್ನು ಎಲ್ಲ ಕಡೆ ಬೇಕಾ ದಷ್ಟು ಪ್ರಮಾಣದಲ್ಲಿ ದೊರೆಯುತ್ತಿತ್ತು. ಈಗ ಅದರ ಲಭ್ಯತೆ ಕಡಿಮೆ ಆಗಿರುವುದರಿಂದ ಹೊಸ ರಾಜ್ಯ ದವರು ಕರಾವಳಿ ಕಡೆಗೂ ಕಾಲಿಡುವಂತಾಗಿದೆ.

ಒಂದು ಇಡೀ ಚಿಪ್ಪಿ(ಎರಡು ಭಾಗ)ಗೆ ಒಂದು ರೂ.ನಂತೆ ಅಥವಾ ತೂಕದ ಆಧಾರದ ಮೇಲೆ ಒಂದು ಕೆ.ಜಿ.ಗೆ 20ರಿಂದ 25 ರೂ. ನೀಡಿ ಖರೀದಿಸಲಾಗುತ್ತಿದೆ. ಬೇಡಿಕೆಯಷ್ಟು ಚಿಪ್ಪು ಸಿಗದಿರುವುದರಿಂದ ಇದರ ಬೆಲೆ ಏರಿಕೆ ಆಗುತ್ತಲೇ ಇದೆ. ಕೆಲವು ಕಡೆ 30 ರೂ. ನೀಡಿಯೂ ಖರೀದಿಸುತ್ತಾರೆ. ಹೀಗೆ ಖರೀದಿಸಿದ ಚಿಪ್ಪನ್ನು ಮಂಗಳೂರು ಮೂಲಕ ಕೇರಳ, ತಮಿಳುನಾಡಿನ ಫ್ಯಾಕ್ಟರಿಗಳಿಗೆ ಕಳುಹಿಸುತ್ತಾರೆ.

ಚಿಪ್ಪು ಬೇಡಿಕೆಗೆ ಕಾರಣ: ತೆಂಗಿನ ಕಾಯಿಯನ್ನು ಎಳನೀರಿನ ಹಂತದಲ್ಲೇ ಬಳಸುವ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಚೆನ್ನಾಗಿ ಒಣಗಿದ ಕಾಯಿಯ ಚಿಪ್ಪು ಸಿಗುವ ಪ್ರಮಾಣ ಕಡಿಮೆಯಾಗಿದೆ. ತಮಿಳುನಾಡು ಮತ್ತು ಕೇರಳದ ಕೆಲವು ಇದ್ದಿಲು ಫ್ಯಾಕ್ಟರಿಗಳು ಚಿಪ್ಪು ಸಿಗದೆ ಮುಚ್ಚಿವೆ.

ತಮಿಳುನಾಡು, ಕೇರಳದ ಚಿಪ್ಪಿನಲ್ಲಿ ಶೇ.80 ಕಾರ್ಬನ್ ಅಂಶವಿದ್ದರೆ, ಕರ್ನಾಟಕದ ಚಿಪ್ಪಿನಲ್ಲಿ ಶೇ.95ರಷ್ಟು ಕಾರ್ಬನ್ ಇರುತ್ತದೆ. ಆದುದರಿಂದ ಇಲ್ಲಿನ ಚಿಪ್ಪಿಗೆ ಹೆಚ್ಚಿನ

ಬೇಡಿಕೆ ಬಂದಿದೆ. ತಮಿಳುನಾಡು ಮತ್ತು ಕೇರಳದಲ್ಲಿ ತೆಂಗಿನ ಬೆಳೆ ಹೆಚ್ಚಾಗಿದ್ದು, ಅಲ್ಲಿನ ಗೆರಟೆ ಹೆಚ್ಚಾಗಿ ಇದ್ದಿಲಿಗೆ ಬಳಕೆಯಾಗುತ್ತಿದೆ. ಹಾಗಾಗಿ ಕರ್ನಾಟಕದ ಕೆಲವು ಭಾಗಗಳಲ್ಲಿ ಚಿಪ್ಪುಗಳನ್ನು ಸಂಗ್ರಹಿಸಲಾಗುತ್ತಿದೆ.

ಚಿಪ್ಪಿನಿಂದ ಕಲ್ಲಿದ್ದಲು ತಯಾರಿಸುವ ಫ್ಯಾಕ್ಟರಿಗಳು ತಮಿಳುನಾಡು ಮತ್ತು ಕೇರಳದಲ್ಲಿ ಹೆಚ್ಚಾಗಿವೆ. ಇಲ್ಲಿ ತಯಾ ರಿಸಿದ ಇದ್ದಿಲಿಗೆ ಆಯಾ ರಾಜ್ಯಗಳಲ್ಲದೆ, ರಾಜಸ್ಥಾನ, ಗುಜರಾತ್‌ಗಳಲ್ಲೂ ಬೇಡಿಕೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

ಗೆರಟೆಯ ಉಪಯೋಗ: ಗೆರಟೆ ಇದ್ದಿಲು ತಯಾರಿಕೆಯಲ್ಲಿ ಪ್ರಮುಖ ಮೂಲ ವಸ್ತುವಾಗಿದೆ. ಈ ತೆಂಗಿನ ಗೆರಟೆಯ ಇದ್ದಿಲನ್ನು ಕಮ್ಮಾರಿಕೆ, ಇಸ್ತ್ರಿ ಪೆಟ್ಟಿಗೆಗೆ ಬಳಸಲಾಗುತ್ತದೆ.

ಹಲವಾರು ಸೌಂದರ್ಯವರ್ಧಕ ಕ್ರೀಮ್, ತಲೆಕೂದಲು ಕಪ್ಪು ಮಾಡುವ ಕ್ರೀಮ್, ಆಯುರ್ವೇದ ಮತ್ತು ಟೂತ್ ಪೇಸ್ಟ್‌ಗಳಲ್ಲಿ ಇದ್ದಿಲು ಬಳಕೆಯಾಗುತ್ತದೆ. ನೀರಿನ ಫಿಲ್ಟರ್‌ಗಳಲ್ಲಿ ಇದರ ಬಳಕೆ ಹೆಚ್ಚಾಗುತ್ತಿದೆ. ಸೌಂದರ್ಯ ವರ್ಧಕಗಳ ಉತ್ಪಾದನೆಗೆ ವಿದೇಶಕ್ಕೂ ಇದ್ದಿಲು ರವಾನೆಯಾಗುತ್ತದೆ. ಗೃಹಾಲಂಕಾರ ವಸ್ತುಗಳ ತಯಾರಿಕೆಯಲ್ಲೂ ಗೆರಟೆ ಯಥೇಚ್ಛವಾಗಿ ಬಳಕೆಯಾಗುತ್ತದೆ.

‘ಗೆರಟೆ ಚಿಪ್ಪಿಗೆ ಉತ್ತಮ ಬೇಡಿಕೆ ಇದೆ. ಜಿಲ್ಲೆಯಲ್ಲಿ ಸಂಗ್ರಹಿಸಿದ ಚಿಪ್ಪನ್ನು ಲಾರಿಗಳ ಮೂಲಕ ಕೇರಳ, ತಮಿಳುನಾಡಿಗೆ ರವಾನಿಸಲಾಗುತ್ತದೆ. ಅಲ್ಲಿ ಕಾರ್ಖಾನೆಯಲ್ಲಿ ಇದ್ದಿಲು ತಯಾರಿಸಿ ಬೇರೆ-ಬೇರೆ ಕಡೆಗೆ ಮಾರಾಟ ಮಾಡಲಾಗುತ್ತದೆ. ಕರಾವಳಿಯಲ್ಲೂ ಇದಕ್ಕೆ ಸಂಬಂಧಿಸಿದ ಕಾರ್ಖಾನೆಗಳು ಕೆಲವು ಕಡೆ ನಿರ್ಮಾಣವಾಗುತ್ತಿದೆ.

-ಸೈಯದ್ ಮುಸ್ತಾಕ್, ಗೆರಟೆ ವ್ಯಾಪಾರಿ, ಕಣ್ಣೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಝೀರ್ ಪೊಲ್ಯ

contributor

Similar News