×
Ad

ಸಾವಿರಾರು ಕೋಟಿ ರೂ. ಹೂಡಿಕೆ ಮಾಡಿದರೂ, ಸುರಕ್ಷಿತ ರಸ್ತೆ ನಿರ್ಮಿಸಲು ಏಕೆ ಸಾಧ್ಯವಾಗುತ್ತಿಲ್ಲ?

Update: 2026-07-09 13:06 IST

ಒಂದೇ ಮಳೆಗೆ ಮುಂಬೈ ಸಂಕಷ್ಟದಲ್ಲಿದೆ. ಡಬಲ್ ಇಂಜಿನ್‌ನ ಅವಸ್ಥೆ ಎಂಥದು ಎಂಬುದು ಎದ್ದುಕಾಣುತ್ತಿದೆ.

ಮುಂಬೈ ಮತ್ತು ಪುಣೆ ನಡುವೆ ಸುಮಾರು 7,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಎಕ್ಸ್‌ಪ್ರೆಸ್‌ವೇ ಮೇ 1ರಂದು ಉದ್ಘಾಟನೆಯಾದ ಬಳಿಕ ಎಂಟೇ ವಾರಗಳಲ್ಲಿ ಮೊದಲ ಮಳೆಗೆ ರಸ್ತೆಯಲ್ಲೇ ಪ್ರವಾಹ ಸೃಷ್ಟಿಯಾಗಿದೆ. ಸಾವಿರಾರು ಕೋಟಿ ಹೂಡಿಕೆ ಮಾಡಿದರೂ, ಸುರಕ್ಷಿತ ರಸ್ತೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲವೇ?

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿನ ಮಿಸ್ಸಿಂಗ್ ಲಿಂಕ್ ಸುರಂಗ ಕುಸಿತಕ್ಕೆ ಮಳೆಯನ್ನು ಮಾತ್ರ ದೂಷಿಸಬಹುದೇ? ಅಥವಾ ಅಂತಹ ರಸ್ತೆಗಳನ್ನು ವಿನ್ಯಾಸಗೊಳಿಸಲು ಬಳಸುವ ತಂತ್ರಜ್ಞಾನ ಮತ್ತು ತಿಳಿವಳಿಕೆಯ ಬಗ್ಗೆಯೂ ಪ್ರಶ್ನೆಯಿದೆಯೇ?

ಇದರಲ್ಲಿ ಹಣ ದುರುಪಯೋಗವಾಗಿದೆಯೇ ಅಥವಾ ತಿಳಿವಳಿಕೆಯ ಕೊರತೆಯಿದೆಯೇ ಎಂಬುದು ಮುಂಬೈ ಮತ್ತು ಪುಣೆಯ ಜನರ ಪ್ರಶ್ನೆಯಾಗಿದೆ.

7,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಎಕ್ಸ್‌ಪ್ರೆಸ್‌ವೇ, ಒಂದೇ ಮಳೆಯಲ್ಲಿ ಕುಸಿದು ಬೀಳುವಷ್ಟು ಕಳಪೆಯಾಗಿತ್ತೇ? ಹಾಗಾದರೆ, ಸಾವಿರಾರು ಕೋಟಿ, ನೂರಾರು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ಮುಂಬೈನ ಮೂಲಸೌಕರ್ಯದ ಗುಣಮಟ್ಟ ಎಂಥದ್ದು?

ಮುಂಬೈನಲ್ಲಿ ಮಾತ್ರವಲ್ಲ, ದೇಶಾದ್ಯಂತ ಮೂಲಸೌಕರ್ಯದ ಹೆಸರಿನಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ದುರುಪಯೋಗ ಮಳೆಗಾಲದಲ್ಲಿ ಮಾತ್ರವೇ ಬಟಾಬಯಲಾಗುತ್ತದೆ.

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಹೊತ್ತಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿಕೆ ಗಮನಿಸಿದರೆ, ಇದಕ್ಕಿಂತ ಬಲಿಷ್ಠವಾದ ಬೇರೆ ಯಾವುದೇ ಸೇತುವೆ ಇಲ್ಲ ಎಂದು ಯಾರಿಗಾದರೂ ಅನ್ನಿಸುತ್ತಿತ್ತು.

ಆದರೆ ಅದರ ಅಸಲಿಯತ್ತು ಏನೆಂಬುದು ಒಂದೇ ಮಳೆಗೆ ಬಯಲಿಗೆ ಬಂದಿದೆ.

ರಸ್ತೆಯ ಕೆಲವು ಸ್ಥಳಗಳಲ್ಲಿ ಆಗಲೇ ಗುಂಡಿಗಳು ಗೋಚರಿಸುತ್ತಿವೆ. ಇದು ರಸ್ತೆಯನ್ನು ಸರಿಯಾಗಿ ನಿರ್ಮಿಸಲಾಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.

ಸರಕಾರ ತನ್ನ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಭಾರೀ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಆದರೆ, ಎರಡು ತಿಂಗಳಿಗೂ ಮೊದಲೇ ಸುರಂಗ ಕುಸಿಯುತ್ತದೆ.

ಈಗ ಆ ರಸ್ತೆಯನ್ನು ಮುಚ್ಚಬೇಕಾಗಿದೆ.

ಏಳು ದೇಶಗಳ ಸಹಾಯದಿಂದ ಮತ್ತು ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ ಮೊದಲ ಮಳೆಯನ್ನು ಏಕೆ ತಡೆದುಕೊಳ್ಳಲಿಲ್ಲ? ಅದನ್ನು ಏಕೆ ಮುಚ್ಚಬೇಕಾಯಿತು?

ಏಳು ದೇಶಗಳಿಂದ ಸಹಾಯ ಪಡೆಯಲಾಯಿತು. ಆದರೂ, ನಿರ್ಮಾಣ ಕಂಪೆನಿ ಭಾರತದ್ದು ಎಂದು ಹೇಳಲಾಯಿತು.

ಸೇತುವೆಯ ಗಾಳಿ ತಡೆದುಕೊಳ್ಳುವ ಸಾಮರ್ಥ್ಯ ಪರೀಕ್ಷಿಸಲು ಡೆನ್ಮಾರ್ಕ್ ತಜ್ಞರನ್ನು ಕರೆಸಲಾಯಿತು. ಕೇಬಲ್‌ಗಳನ್ನು ಮಲೇಶ್ಯದಿಂದ ತರಲಾಯಿತು. ಅವುಗಳನ್ನು ಆಸ್ಟ್ರಿಯಾದಿಂದ ಪರೀಕ್ಷಿಸಲಾಯಿತು. ಆದರೂ ಅದರ ಅವಸ್ಥೆ ಈಗ ಹೀಗಾಗಿದೆ.

ಮಳೆ ಎಲ್ಲರ ರಹಸ್ಯಗಳನ್ನು ಬಹಿರಂಗಪಡಿಸುತ್ತಿದೆ.

ಈ ಸೇತುವೆಯನ್ನು ಚಂಡಮಾರುತವನ್ನು ತಡೆದುಕೊಳ್ಳುವಂತೆ ಕಟ್ಟಲಾಗಿದೆ ಎನ್ನಲಾಯಿತು. ಆದರೆ ಅದು ಪಶ್ಚಿಮ ಘಟ್ಟಗಳ ಮಳೆಯನ್ನೇ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ.

ಇತ್ತೀಚಿನ ದಿನಗಳಲ್ಲಿ ಸರಕಾರಗಳು ಸೇತುವೆಗಳನ್ನು ಸರಿಯಾಗಿ ನಿರ್ಮಿಸುವುದಕ್ಕಿಂತಲೂ ಹೆಚ್ಚು ಮಾತನಾಡುವುದು, ತೋರಿಸಿಕೊಳ್ಳುವುದೇ ಆಗಿದೆ.

ಚಂಡಮಾರುತವನ್ನು ತಡೆದುಕೊಳ್ಳುವಂತೆ ಕಟ್ಟಲಾಗಿದ್ದರೆ, ಮಳೆಯನ್ನು ಮರೆಯಲಾಗಿತ್ತೆ?

ಈ ಸೇತುವೆ ಒಂದೇ ಮಳೆಯನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲವೆಂದರೆ, ಸುರಂಗ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಹೇಗೆ ಹೇಳಿದರು?

ವಿವಿಧ ಸ್ಥಳಗಳಲ್ಲಿ ಎಕ್ಸ್‌ಪ್ರೆಸ್‌ವೇ ಪ್ರವಾಹಕ್ಕೆ ಒಳಗಾಯಿತು ಎಂದಾದರೆ, ಎಕ್ಸ್‌ಪ್ರೆಸ್‌ವೇಯ ಗುಣಮಟ್ಟವೇ ಹೀಗಿದೆಯೆ?

ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಅನಿಲ್ ಕುಮಾರ್ ಅವರು ಇದನ್ನು ಆಕ್ಟ್ ಆಫ್ ಗಾಡ್ ಎಂದು ಕರೆದರು.

2016ರಲ್ಲಿ ಕೋಲ್ಕತಾದಲ್ಲಿ ಸೇತುವೆ ಕುಸಿದು ಬಿದ್ದಾಗ ಮಮತಾ ಬ್ಯಾನರ್ಜಿ ಅದನ್ನು ಆಕ್ಟ್ ಆಫ್ ಗಾಡ್ ಎಂದು ಕರೆದರು. ಆದರೆ ಪ್ರಧಾನಿ ಮೋದಿ ಅದನ್ನು ಆಕ್ಟ್ ಆಫ್ ಫ್ರಾಡ್ ಎಂದಿದ್ದರು. ಹಾಗಾದರೆ, ಮುಂಬೈನಲ್ಲಿ ಈಗ ಆಗಿರುವುದು ಆಕ್ಟ್ ಆಫ್ ಫ್ರಾಡ್ ಅಲ್ಲವೆ?

ಪ್ರಪಂಚದಾದ್ಯಂತದ ಅನೇಕ ನಗರಗಳಲ್ಲಿ ಮಳೆ ಮತ್ತು ಬಿರುಗಾಳಿಗಳ ಸಮಯದಲ್ಲಿ ಎಲ್ಲವೂ ಸ್ಥಗಿತಗೊಳ್ಳುತ್ತದೆ. ಅಲ್ಲಿಯೂ ರಸ್ತೆಗಳು ಜಲಾವೃತವಾಗುತ್ತವೆ.

ಆದರೆ, ಆ ನಗರಗಳಲ್ಲಿ ಕಂಡುಬರುವ ಸುರಕ್ಷತೆ ಮತ್ತು ರಕ್ಷಣಾ ಕ್ರಮಗಳು ಭಾರತದ ಯಾವುದೇ ನಗರದಲ್ಲಿ ಕಂಡುಬರುವುದಿಲ್ಲ.

ಧಾರಾವಿ ಒಳಗೆ ಉದ್ದವಾದ ಪೈಪ್‌ಲೈನ್‌ಗಳನ್ನು ಹಾಕಲಾಗಿದೆ. ಇಲ್ಲಿನ ಚರಂಡಿಗಳು ಮಳೆನೀರಿನಿಂದ ತುಂಬಿ ಹರಿಯುತ್ತಿವೆ ಮತ್ತು ಮನೆಗಳಿಗೆ ನೀರು ನುಗ್ಗುತ್ತಿದೆ.

ಇಲ್ಲಿನ ನಿವಾಸಿಗಳು ಮೊದಲು ಮಳೆನೀರನ್ನು ಮೀಠಿ ನದಿಗೆ ಹರಿಸುವ ಚರಂಡಿ ಇತ್ತು ಎಂದು ಹೇಳುತ್ತಾರೆ.

ಇದು ಮಳೆಗಾಲದ ದಿನಗಳಲ್ಲಿ ಮನೆಗಳಿಗೆ ನೀರು ನುಗ್ಗುವುದನ್ನು ಕಡಿಮೆ ಮಾಡಿತ್ತು.

ಆದರೆ ಮೆಟ್ರೋ ನಿರ್ಮಾಣವಾದಾಗಿನಿಂದ, ಮೀಠಿ ನದಿ ನಾಲೆಗೆ ಸಂಪರ್ಕ ಕಡಿತಗೊಂಡಿದೆ.

ಈಗಾಗಲೇ ಇದ್ದ ನಾಲೆಯನ್ನು ಮುಚ್ಚಲಾಗಿದೆ ಮತ್ತು ಅದರ ಸ್ಥಳದಲ್ಲಿ ಮೆಟ್ರೋ ಹೊಸದನ್ನು ನಿರ್ಮಿಸುತ್ತಿದೆ ಎಂಬುದು ಜನರ ದೂರು.

ಅದು ಪೂರ್ಣಗೊಳ್ಳಲು ಇನ್ನೂ ಕೆಲವು ತಿಂಗಳುಗಳು ಬೇಕಾಗುತ್ತವೆ.

ಡುಂಗರ್ಖಾನಾ ಎಂದು ಕರೆಯಲ್ಪಡುವ ಪ್ರದೇಶ ಧಾರಾವಿ ಮೆಟ್ರೋ ನಿಲ್ದಾಣದ ಪಕ್ಕದಲ್ಲಿದೆ. ಅಲ್ಲಿ ಮೆಟ್ರೋ ನಿಲ್ದಾಣಕ್ಕಾಗಿ ಹೊಂಡಗಳನ್ನು ಅಗೆಯಲಾಗಿದ್ದು, ಜನರ ಸ್ಥಿತಿ ಇಂದು ಭೀಕರವಾಗಿದೆ.

ಅಡಿಪಾಯಕ್ಕಾಗಿ ಅಗೆದ ಹೊಂಡಗಳಿಂದ ನೀರನ್ನು ಹೊರಗೆ ಬಿಟ್ಟಾಗ, ಇಡೀ ಮಾರ್ಗ ಮುಚ್ಚಿಹೋಗಿತ್ತು ಮತ್ತು ಇಡೀ ಮಾಹಿಮ್ ನಿಲ್ದಾಣ ಜಲಾವೃತವಾಗಿತ್ತು.

ಜನರು ಮೂರು ದಿನಗಳ ಕಾಲ ನೀರಿನಲ್ಲಿ ಮುಳುಗಿದ್ದರು.

ಇದೆಲ್ಲವೂ ಅಭಿವೃದ್ಧಿಯ ಹೆಸರಲ್ಲಿ ನಡೆಯುತ್ತಿದೆ.

ತಿಂಗಳುಗಳ ಕಾಲ ಇಂಥ ಪರಿಸ್ಥಿತಿಯಲ್ಲಿ ನಾವು ಹೇಗೆ ಬದುಕಬೇಕು ಎಂಬುದು ಅಲ್ಲಿನ ಜನರ ಪ್ರಶ್ನೆಯಾಗಿದೆ.

ಮುಂಬೈನ ಒಂದು ಮಗ್ಗುಲಿನ ಇಂಥ ಕಷ್ಟಗಳ ಬಗ್ಗೆ ದೇಶಕ್ಕೆ ತಿಳಿಯುವುದು ಹಾಗಿರಲಿ, ಮುಂಬೈನಲ್ಲಿಯೇ ಚರ್ಚೆಯಾಗುವುದಿಲ್ಲ. ಚರ್ಚೆಗಳೆಲ್ಲ ಎತ್ತರದ ಕಟ್ಟಡಗಳಿಂದ ಆವೃತವಾದ ಪ್ರದೇಶಗಳ ಸುತ್ತಲೇ ಇರುತ್ತವೆ.

ಮುಂಬೈನಲ್ಲಿ ಪ್ರತೀ ವರ್ಷ ಭ್ರಷ್ಟಾಚಾರದ ಬಗ್ಗೆ ಚರ್ಚಿಸಲಾಗುತ್ತದೆ. ಪ್ರತೀ ವರ್ಷವೂ ಮಳೆಯ ಹೊತ್ತಲ್ಲಿ ಮತ್ತಿದೇ ಕಥೆ ಪುನರಾವರ್ತನೆಯಾಗುತ್ತದೆ.

ಮುಂಬೈನ ಮಧ್ಯಮ ವರ್ಗ ತಮ್ಮದೇ ನಗರದಲ್ಲಿನ ಸಾಮಾನ್ಯ ಜನರ ನೋವನ್ನು ನಿರ್ಲಕ್ಷಿಸುತ್ತದೆ.

ಅವರು ಕೊಳೆಗೇರಿಗಳ ಬಗ್ಗೆ ಕಡಿಮೆ ಮಾತನಾಡುತ್ತಾರೆ.ಆದ್ದರಿಂದ, ಮಳೆಯಿಂದ ಉಂಟಾಗುವ ವಿನಾಶ ಮತ್ತು ಅದರ ಹಿಂದಿನ ಭ್ರಷ್ಟಾಚಾರ ಹೆಚ್ಚು ಚರ್ಚೆಯಾಗದೇ ಮರೆಯಾಗಿಬಿಡುತ್ತದೆ.

ಪ್ರತೀ ವರ್ಷ ಮಳೆಗಾಲದಲ್ಲಿ ರಬ್ಬರ್ ಕಾರ್ಖಾನೆಗಳಿಂದ ರಾಸಾಯನಿಕಗಳು ಮಿಶ್ರಣವಾಗುವ ಬಿಳಿ ಬಣ್ಣದ ನೀರು ಮನೆಗಳಿಗೂ ನುಗ್ಗುತ್ತದೆ ಎಂದು ಜನರು ಹೇಳುತ್ತಾರೆ. ಆದರೆ ಇದರ ಬಗ್ಗೆ ಮುಂಬೈನ ಮಾಧ್ಯಮಗಳು ಮಾತಾಡುವುದಿಲ್ಲ.

ಈ ರೀತಿಯ ರಾಸಾಯನಿಕಗಳಿಂದ ಕಲುಷಿತಗೊಂಡ ನೀರು ವರ್ಷಪೂರ್ತಿ ಜನರ ಆರೋಗ್ಯ ಕೆಡಿಸುತ್ತದೆ. ಅವರು ಜೀವಮಾನದುದ್ದಕ್ಕೂ ಕಾಯಿಲೆಗಳನ್ನು ಅನುಭವಿಸುವ ಸ್ಥಿತಿ ಬರುತ್ತದೆ.

ಈ ಇಡೀ ಪ್ರದೇಶ ಪ್ರವಾಹಕ್ಕೆ ಸಿಲುಕಿದೆ ಮತ್ತು ಮೆಟ್ರೋ ನಿಲ್ದಾಣದ ಬಳಿಕ ಎಲ್ಲರೂ ಬಳಲುವಂತಾಗಿದೆ ಎಂದು ಜನರು ದೂರುತ್ತಿದ್ದಾರೆ.

ಮುಂಬೈ ಅನ್ನು ವಿಶ್ವದ ಅತಿದೊಡ್ಡ ನಗರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಆದರೆ, ಪ್ರತೀ ವರ್ಷ ಮಳೆಗಾಲದಲ್ಲಿ ಅದರ ಸ್ಥಿತಿ ನೋಡಿದರೆ, ಈ ನಗರ ಎಷ್ಟೊಂದು ಮಟ್ಟಿಗೆ ಭ್ರಷ್ಟಾಚಾರದ ಬಲಿಪಶುವಾಗಿದೆ ಎಂಬುದು ಬಹಿರಂಗಗೊಳ್ಳುತ್ತದೆ.

ದುರಂತವೆಂದರೆ, ಈ ನಗರ ಭ್ರಷ್ಟ ಶಕ್ತಿಗಳೊಂದಿಗೆ ರಾಜಿ ಮಾಡಿಕೊಂಡಿದೆ.

ಈ ನಗರದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಈ ಭ್ರಷ್ಟಾಚಾರದ ರಾಜಕೀಯ ಜಾಲದಿಂದ ಲಾಭ ಪಡೆಯುತ್ತಾರೆ.

ಇದೆಲ್ಲವೂ ಬದಲಾಗಲು ಸಾಧ್ಯವಿಲ್ಲ ಎಂದಲ್ಲ.

ಸಾಮಾನ್ಯ ಜನರ ಕಾಲನಿಗಳನ್ನು ನೋಡಬೇಕಾಗಿದೆ.

ಮಳೆಯಿಂದಾಗಿ ಆದಾಯ ಕಡಿತಗೊಂಡವರ ಕಷ್ಟಗಳಿಗೆ ಕಿವಿಗೊಡಬೇಕಾಗಿದೆ. ಉಳಿತಾಯವೇ ಇಲ್ಲವಾದವರ ಜೊತೆಗೆ ಮಾತನಾಡಬೇಕಾಗಿದೆ.

ಯಾವುದೇ ಬಡವರು ಚರಂಡಿ ನೀರಿನಲ್ಲಿ ವಾಸಿಸಲು ಸಾಧ್ಯವಿಲ್ಲ. ಆದರೆ ಯಾರೂ ಅವರ ಮಾತನ್ನು ಕೇಳುತ್ತಿಲ್ಲವಾದ ಕಾರಣ ಅವರು ಅಸಹಾಯಕರಾಗಿದ್ದಾರೆ.

ಮುಂಬೈನ ಜನರು ಸಾಮಾನ್ಯ ಜನರ ಪರವಾಗಿ ಮಾತನಾಡಲು ಪ್ರಾರಂಭಿಸುವ ದಿನ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಬದಲಾಗಬಹುದು.

ಆದರೆ ಜನರಿಗೆ ಚರ್ಚಿಸಲು ಬೇರೆಯೇ ವಿಷಯಗಳನ್ನು ಮಡಿಲ ಮೀಡಿಯಾಗಳು, ಐಟಿ ಸೆಲ್‌ಗಳು ಪ್ರತಿದಿನ ಕೊಡುತ್ತವೆ.

ಒಂದೋ ಯಾವುದೇ ಉಪಯೋಗಕ್ಕೆ ಬಾರದ ಅಥವಾ ತೀರಾ ಹಸಿ ಹಸಿ ಸುಳ್ಳನ್ನೇ ಜನರಿಗೆ ದಂಡಿಯಾಗಿ ಪ್ರತಿದಿನ, ಪ್ರತಿಕ್ಷಣ ವಾಟ್ಸ್‌ಆ್ಯಪ್ ಮೂಲಕ ತಲುಪಿಸಿ ಅವರನ್ನು ಬಿಝಿಯಾಗಿಡಲಾಗುತ್ತಿದೆ.

ಜನರ ಜೀವನಕ್ಕೆ ನೇರವಾಗಿ ಸಂಬಂಧಿಸಿದ ರಸ್ತೆ, ನೀರು, ವಿದ್ಯುತ್, ಬೆಲೆ ಏರಿಕೆ, ನಿರುದ್ಯೋಗ, ಸುರಕ್ಷತೆ ಇತ್ಯಾದಿಗಳನ್ನು ಬಿಟ್ಟು ಉಳಿದೆಲ್ಲ ನಿಷ್ಪ್ರಯೋಜಕ ವಿಷಯಗಳನ್ನು ಇಲ್ಲಿ ಧಾರಾಳವಾಗಿ ಚರ್ಚಿಸಲಾಗುತ್ತಿದೆ

ಹೀಗಿರುವಾಗ ಮುಂಬೈ ಅಥವಾ ಈ ದೇಶದ ಯಾವುದೇ ಮಹಾ ನಗರ ಯಾವತ್ತಾದರೂ ಭ್ರಷ್ಟಾಚಾರದಿಂದ ಮುಕ್ತವಾಗಬಹುದು ಎಂದು ನಿರೀಕ್ಷಿಸುವುದು ಸಾಧ್ಯವೆ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎನ್. ಕೇಶವ್

contributor

Similar News