ಅಪ್ರಸ್ತುತ ವಿಷಯಗಳಿಗೆ ಸಲ್ಲದ ಆದ್ಯತೆ
ಕುಡಿಯುವ ನೀರು, ಉಸಿರಾಡುವ ಗಾಳಿ, ತಿನ್ನುವ ಆಹಾರ, ಕಾಯಿಲೆ ವಾಸಿಗಾಗಿ ಸೇವಿಸುವ ಔಷಧಿಗಳು ಇವ್ಯಾವೂ ಸುರಕ್ಷಿತವಾಗಿ ಉಳಿದಿಲ್ಲ. ಪ್ರತಿಯೊಂದೂ ಹಣ ಮತ್ತು ಲಾಭದ ದೃಷ್ಟಿಯಿಂದ ನಡೆದಿರುವುದರಿಂದ ಇವುಗಳಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.
ಬಹುತ್ವ ಭಾರತವನ್ನು ಬಾಧಿಸುತ್ತಿರುವ ಸಾವಿರಾರು ಸಮಸ್ಯೆಗಳು ಈಗ ಚರ್ಚೆಗೆ ಬರುತ್ತಲೇ ಇಲ್ಲ. ದೇಶಕ್ಕೆ ಹೊಸ ದಿಕ್ಕು ತೋರಿಸಬೇಕಾದ ಬಹುತೇಕ ರಾಜಕೀಯ ಪಕ್ಷಗಳು ಅಧಿಕಾರ ರಾಜಕಾರಣದ ಸುತ್ತ ಗಿರಕಿ ಹೊಡೆಯುತ್ತಿವೆ. ಕೇಂದ್ರದ ಅಧಿಕಾರ ಸೂತ್ರ ಹಿಡಿದವರಿಂದಂತೂ ಏನನ್ನೂ ನಿರೀಕ್ಷಿಸಲಾಗದು. ಸದಾ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಒಂದಿಲ್ಲೊಂದು ವಿವಾದವನ್ನು ಹುಟ್ಟು ಹಾಕುತ್ತಲೇ ಇರುತ್ತಾರೆ. ಇದಕ್ಕೆ ಒಂದೇ ಒಂದು ಸಣ್ಣ ಉದಾಹರಣೆ ಅಂದರೆ ವಂದೇ ಮಾತರಂ ಗೀತೆಯನ್ನೂ ಸ್ವಾರ್ಥಕ್ಕಾಗಿ ಬಳಸಿಕೊಂಡಿರುವುದು. ಸ್ವಾತಂತ್ರ್ಯ ದಿನದಂದು ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಹಾಡುವಾಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಅದನ್ನು ಅರ್ಧಕ್ಕೆ ನಿಲ್ಲಿಸುವಂತೆ ಸೂಚಿಸಿದರೆಂದು ಅವರ ಸುತ್ತ ಸುಳ್ಳಿನ ಕಟ್ಟು ಕತೆಗಳ ಕೋಟೆಯನ್ನೇ ನಿರ್ಮಿಸಿದರು. ಹದಿನೈದು ದಿನಗಳ ಕಾಲ ಸಂಸತ್ ಅಧಿವೇಶನಕ್ಕೆ ಬರದೇ ನಾಪತ್ತೆಯಾಗಿದ್ದ ಗೃಹ ಸಚಿವ ಅಮಿತ್ ಶಾ ಅವರು ಹೋದಲ್ಲಿ ಬಂದಲ್ಲಿ ಇದನ್ನೇ ಹೇಳುತ್ತ ಇದನ್ನು ದೇಶ ದ್ರೋಹ ಎಂಬಂತೆ ಬಿಂಬಿಸುತ್ತಿದ್ದಾರೆ.
ಇದಕ್ಕೆ ಪದೇ ಪದೇ ಸ್ಪಷ್ಟೀಕರಣ ನೀಡುತ್ತಿರುವ ಕಾಂಗ್ರೆಸ್ ನಾಯಕರು ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರೂ, ವಲ್ಲಭಬಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್ ಸಮ್ಮುಖದಲ್ಲೇ 1937ನೇ ಇಸವಿಯಲ್ಲಿ ನಡೆದ ಅಂದಿನ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಂಡ ನಿರ್ಣಯದ ಪ್ರಕಾರ ವಂದೇ ಮಾತರಂ ಗೀತೆಯ ಎರಡೇ ಚರಣಗಳನ್ನು ಹಾಡಲು ತೀರ್ಮಾನಿಸಲಾಗಿದೆ. ಅದನ್ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಡಲಾಗಿದೆ ಎಂದು ಹೇಳುತ್ತಲೇ ಇದ್ದಾರೆ. ಇದು ಹಳೆಯ ಕತೆ, ಅದನ್ನು ಮೊದಲಿನಿಂದಲೂ ಪೂರ್ಣವಾಗಿ ಹಾಡುವುದಿಲ್ಲ. ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೂ ಇದನ್ನೇ ಹಾಡಿದ್ದಾರೆ. ಅವರ ವಿರುದ್ಧವೂ ಪ್ರಕರಣವನ್ನು ದಾಖಲಿಸಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸವಾಲು ಹಾಕಿದ್ದಾರೆ. ಕೇರಳಂನಲ್ಲಿ ನಡೆದ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲೂ ಇದನ್ನೇ ಹಾಡಲಾಯಿತು. ಇದು ಬಿಜೆಪಿ ನಾಯಕರಿಗೂ ಗೊತ್ತು. ಆದರೂ ಅಯೋಧ್ಯೆಯ ರಾಮ ಮಂದಿರದ ಹುಂಡಿಯ ಹಣದ ಲೂಟಿಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬೇಕಂತಲೇ ಗೊಂದಲ ಮೂಡಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದವರಿಂದ ಭಾರತದ 140 ಕೋಟಿ ಜನರು ದೇಶ ಭಕ್ತಿಯ ಪಾಠ ಕಲಿಯಬೇಕಾದ ಪ್ರಸಂಗ ಬಂದಿದೆ.
ಆರೆಸ್ಸೆಸ್ ಎಂದೂ ಒಪ್ಪದ, ಗೌರವಿಸದ ರವೀಂದ್ರನಾಥ ಟಾಗೋರ್ ಅವರು ಬರೆದ ಜನಗಣಮನ... ಗೀತೆ ರಾಷ್ಟ್ರಗೀತೆ ಎಂದು ಮೊದಲಿನಿಂದಲೂ ಗೌರವಿಸಲಾಗಿದೆ. ಅದರ ಜೊತೆಗೆ ವಂದೇ ಮಾತರಂ ಕೂಡ ಇದೆ. 1950ರ ಜನವರಿ 25ರಂದು ನಡೆದ ಸಂವಿಧಾನ ರಚನಾ ಸಮಿತಿಯ ಸಭೆಯಲ್ಲಿ ದೇಶದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಜನಗಣ ಮನ ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ರಾಷ್ಟ್ರೀಯ ಗೀತೆ ಎಂದು ಹೇಳಿದ್ದರು. ಎಪ್ಪತ್ತು ವರ್ಷಗಳಿಂದ ಜನಗಣಮನ ಜೊತೆಗೆ ವಂದೇ ಮಾತರಂ ನ ಎರಡು ಚರಣಗಳನ್ನು ಮಾತ್ರ ಹಾಡುತ್ತಾ ಬರಲಾಗಿದೆ. ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಈಗ ಕಪಟ ನಿದ್ರೆಯಿಂದ ಎದ್ದಿದ್ದಾರೆ.
ನಾನು ಈಗ ಅದರ ಬಗ್ಗೆ ಬರೆಯಲು ಹೊರಟಿಲ್ಲ. ಜನಸಾಮಾನ್ಯರನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಯ ಬಗ್ಗೆ ಬರೆಯುತ್ತಿರುವೆ. ರಸ್ತೆ ಬದಿಯ ಡಬ್ಬಿ ಅಂಗಡಿಗಳಲ್ಲಿ ಮಾತ್ರವಲ್ಲ ಪಂಚತಾರಾ ಹೋಟೆಲ್ಗಳು ಸೇರಿದಂತೆ ಬೆಂಗಳೂರು ಮತ್ತು ಇತರ ಮಹಾ ನಗರಗಳಲ್ಲಿ ಅಪಾಯಕಾರಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಸಂಗತಿ ಬಯಲಿಗೆ ಬಂದಿತು. ಜನಸಾಮಾನ್ಯರ ಜೀವವನ್ನು ರಕ್ಷಿಸಬೇಕಾದ ಔಷಧಿಗಳೇ ಈಗ ಜೀವವನ್ನು ತೆಗೆಯುವ ಮಾರಕ ವಿಷವಾಗಿ ಪರಿಣಮಿಸಿರುವುದು ಆತಂಕವನ್ನು ಉಂಟು ಮಾಡುತ್ತಿದೆ. ಇತ್ತೀಚೆಗೆ ಸುದ್ದಿಯಲ್ಲಿ ಇರುವ ಬೆಂಗಳೂರಿನ ಹೊರವಲಯದ ಬಿಡದಿಯಲ್ಲಿ ಬಟಾ ಬಯಲಾಗಿರುವ ಭಾರೀ ಪ್ರಮಾಣದ ನಕಲಿ ಔಷಧಿಗಳ ಮರು ಪ್ಯಾಕಿಂಗ್ ದಂಧೆ ನಮ್ಮ ಆರೋಗ್ಯ ವ್ಯವಸ್ಥೆಯ ಕುರೂಪದ ಮೇಲೆ ಬೆಳಕು ಚೆಲ್ಲುತ್ತದೆ. ಸುಮಾರು 4.91 ಕೋಟಿ ರೂ. ಮೌಲ್ಯದ ನಕಲಿ ಔಷಧಿ ಪತ್ತೆಯಾಗಿದೆ. ಕ್ಯಾನ್ಸರ್ನಂಥ ಮಾರಕ ಕಾಯಿಲೆಗಳಿಗೆ ಬಳಸುವ ಕಳಪೆ ಔಷಧಿಗಳನ್ನು ನೇರವಾಗಿ ಆಸ್ಪತ್ರೆಗಳು ಹಾಗೂ ರೋಗಿಗಳಿಗೆ ಪೂರೈಸಲಾಗುತ್ತಿತ್ತು.
ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ದಂಧೆಯಲ್ಲಿ ನಕಲಿ ಔಷಧಿಗಳು, ಇಂಜೆಕ್ಷನ್ಗಳು, ಪ್ಯಾಕಿಂಗ್ ಯಂತ್ರಗಳು ಪತ್ತೆಯಾಗಿವೆ. 600 ರೂ. ಕಿಮ್ಮತ್ತಿನ ಔಷಧಿಗೆ 6,000 ರೂ. ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲ, ಅವಧಿ ಮೀರಿದ ಔಷಧಿಗಳಿಗೆ ಹೊಸ ತಾರೀಕಿನ ಲೇಬಲ್ ಅಂಟಿಸಿ ಮಾರುಕಟ್ಟೆಗೆ ಪೂರೈಸಲು ಮಸಲತ್ತು ನಡೆದಿತ್ತು.
ರಾಜಧಾನಿ ಬೆಂಗಳೂರಿನ ನೆರಳಿನಲ್ಲೇ ಕೋಟ್ಯಂತರ ರೂ. ವಹಿವಾಟು ಹೊಂದಿರುವ ಅಂತರ್ರಾಜ್ಯ ನಕಲಿ ಜಾಲ ಪತ್ತೆಯಾಗಿರುವುದು ಆಡಳಿತ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ. ಕರ್ನಾಟಕ ಮಾತ್ರವಲ್ಲ ಹಿಮಾಚಲ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲೂ ಈ ಜಾಲ ಸಕ್ರಿಯವಾಗಿದೆ. ಇದರಲ್ಲಿ ಪ್ರಭಾವೀ ಕೈಗಳಿದ್ದರೆ ಅಚ್ಚರಿ ಪಡಬೇಕಾಗಿಲ್ಲ.
ಜನಸಾಮಾನ್ಯರು ಜೀವ ಉಳಿಸಿಕೊಳ್ಳಲು ಡಾಕ್ಟರ್ ಮತ್ತು ಔಷಧಿಯನ್ನು ನಂಬುತ್ತಾರೆ. ಹಣ ಕೊಟ್ಟು ಖರೀದಿಸುತ್ತಾರೆ. ಆದರೆ ಖದೀಮರು ಕಳಪೆ ಔಷಧಿಗಳನ್ನು ನಕಲಿ ಲೇಬಲ್ ಅಂಟಿಸಿ ಮಾರಾಟ ಮಾಡುತ್ತಾರೆ. ಈ ನಕಲಿ ಔಷಧಿಗಳಲ್ಲಿ ಯಾವುದೇ ರೋಗ ವಾಸಿಯಾಗುವ ಅಂಶಗಳು ಇರುವುದಿಲ್ಲ. ಅಂಟಿಸಿದ ಲೇಬಲ್ಗಳ ಮೇಲಿದ್ದ ಕ್ಯೂಆರ್ ಕೋಡ್ಗಳು ಸಹ ಕಾರ್ಯ ನಿರ್ವಹಿಸುವುದಿಲ್ಲ. ತೀವ್ರ ನಿಗಾ ಕೊಠಡಿಗಳಲ್ಲಿ (ಐಸಿಯು) ಇರುವ ರೋಗಿಗಳಿಗೆ ಇಂಥ ನಕಲಿ ಇಂಜೆಕ್ಷನ್ಗಳನ್ನು ನೇರವಾಗಿ ಸಾಗಿಸಲಾಗುತ್ತದೆ. ಇದರಿಂದ ಆಗಬಹುದಾದ ಅನಾಹುತವನ್ನು ಊಹೆ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ಔಷಧಿ ಹಾಗೂ ಸೌಂದರ್ಯವರ್ಧಕ ಕಾಯ್ದೆ 1940ರ 17 ಬಿ ಮತ್ತು 27ರ ವಿಧಿಯ ಪ್ರಕಾರ ನಕಲಿ ಔಷಧಿಗಳ ತಯಾರಿಕೆ, ದಾಸ್ತಾನು ಮತ್ತು ವಿತರಣೆ ಅತ್ಯಂತ ಗಂಭೀರ ಅಪರಾಧವಾಗಿದೆ. ಈ ಕಾಯ್ದೆಯ ಅಡಿಯಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ ಕನಿಷ್ಠ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.
ಜನರ ಜೀವದ ಜೊತೆಗೆ ಚೆಲ್ಲಾಟವಾಡುವ ಈ ಜಾಲದಲ್ಲಿ ಶಾಮೀಲಾಗಿರುವ ಭಾರೀ ಸುಸಜ್ಜಿತ ಆಸ್ಪತ್ರೆಗಳು, ಫಾರ್ಮಾಸ್ಯುಟಿಕಲ್ ಕಂಪೆನಿಗಳು, ಪ್ರಭಾವಿ ವೈದ್ಯರು ಮತ್ತು ಔಷಧಿಗಳ ಮಾರಾಟ ಮಾಡುವ ಪ್ರತಿನಿಧಿಗಳು (ರೆಪ್ರೆಸೆಂಟೇಟಿವ್ಗಳು) ಸೇರಿದಂತೆ ಪ್ರತಿಯೊಬ್ಬರ ಮೇಲೂ ತನಿಖೆ ನಡೆದು ಶಿಕ್ಷೆಯಾಗಬೇಕು. ಆಗ ಮಾತ್ರ ಕಾನೂನಿನ ಬಗ್ಗೆ ಭಯ ಹುಟ್ಟಲು ಸಾಧ್ಯವಾಗುತ್ತದೆ. ಸರಕಾರದ ಪ್ರಭಾವಿ ವ್ಯಕ್ತಿಗಳ ವಶೀಲಿ ಇದ್ದರೆ ಪಾರಾಗಬಹುದು ಎಂಬ ಭಂಡ ಧೈರ್ಯವೇ ಇದಕ್ಕೆ ಕಾರಣ.
ಈಗಂತೂ ಜನರಿಗೆ ಬದುಕಲು ಅವಶ್ಯವಿರುವ ಯಾವುದೂ ಸಿಗುತ್ತಿಲ್ಲ. ನಾವು ತಿನ್ನುವ ಆಹಾರ ಧಾನ್ಯಗಳನ್ನು ಬೆಳೆಯುವಾಗಲೇ ವಿಪರೀತ ರಾಸಾಯನಿಕ ಗೊಬ್ಬರ, ಕೀಟನಾಶಕ ಹಾಕಿ ಬೆಳೆಯುತ್ತಾರೆ ಇದರಿಂದ ಭೂಮಿಯ ಸತ್ವವೂ ಹಾಳಾಗುತ್ತದೆ. ಇದನ್ನು ಸೇವಿಸುವವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಕುಡಿಯುವ ನೀರು, ಉಸಿರಾಡುವ ಗಾಳಿ, ತಿನ್ನುವ ಆಹಾರ, ಕಾಯಿಲೆ ವಾಸಿಗಾಗಿ ಸೇವಿಸುವ ಔಷಧಿಗಳು ಇವ್ಯಾವೂ ಸುರಕ್ಷಿತವಾಗಿ ಉಳಿದಿಲ್ಲ. ಪ್ರತಿಯೊಂದೂ ಹಣ ಮತ್ತು ಲಾಭದ ದೃಷ್ಟಿಯಿಂದ ನಡೆದಿರುವುದರಿಂದ ಇವುಗಳಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.
ಮುಂಚೆ ಮಾರಾಟವಾಗುವ ವಸ್ತು, ಪದಾರ್ಥಗಳು ಹಾಗೂ ಔಷಧಿಗಳಲ್ಲಿ ಸಣ್ಣಪುಟ್ಟ ದೋಷ ಕಂಡು ಬಂದರೆ ಜನರು ಪ್ರತಿಭಟಿಸುತ್ತಿದ್ದರು. ಆದರೆ ಇಂಥ ಅನ್ಯಾಯಗಳ ವಿರುದ್ಧ ಪ್ರತಿಭಟನೆಗಳು ವಿರಳವಾಗುತ್ತಿವೆ. ಹೀಗಾಗಿ ಇಂಥ ಅಕ್ರಮಗಳನ್ನು ಮಾಡಿ ಹಣ ಮಾಡುವವರಿಗೆ ಇದು ಸುವರ್ಣ ಕಾಲ. ಇದರ ಬದಲಾಗಿ ಕೋಮು ದ್ವೇಷದ, ಜನಾಂಗ ದ್ವೇಷದ ಬೆಂಕಿ ಹಚ್ಚುವ ಕೆಲಸ ನಡೆಯುತ್ತಲೇ ಇದೆ. ತಮ್ಮ ಸ್ವಾರ್ಥ ಸಾಧಕ ರಾಜಕೀಯಕ್ಕಾಗಿ ಹೊಸ, ಹೊಸ ವಿವಾದಗಳನ್ನು ಹುಟ್ಟು ಹಾಕುತ್ತಲೇ ಇದ್ದಾರೆ.
ಒಂದು ಕಾಲದಲ್ಲಿ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಚಳವಳಿಯ ಕೇಂದ್ರವಾಗಿದ್ದ ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನ ವಿವಾದವನ್ನು ಕೆರಳಿಸಿ ರಾಜಕೀಯ ಲಾಭ ಮಾಡಿಕೊಂಡವರು ಈಗ ಹೊಸ ವಿವಾದವನ್ನು ಹುಟ್ಟು ಹಾಕುತ್ತಿದ್ದಾರೆ. ಹಳೆ ಹುಬ್ಬಳ್ಳಿಯ ಆಸಾರಹೊಂಡ ಪ್ರದೇಶದಲ್ಲಿ ಇರುವ ಭವಾನಿ ಶಂಕರ ನಾರಾಯಣ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ನೆಲದಡಿ ಪುಷ್ಕರಣಿ ಇದೆ, ಅದು ಮುಚ್ಚಿ ಹೋಗಿದೆ, ಅದರ ಮೇಲೆ ಸಿಸಿ ರಸ್ತೆ ಮಾಡಲು ಸರಕಾರ ಮುಂದಾಗಿರುವುದು ಸರಿಯಲ್ಲ ಎಂದು ಕೋಮುವಾದಿ ಸಂಘಟನೆಗಳು ನಡೆಸಿರುವ ಹೋರಾಟದ ಹೆಸರಿನ ಗಲಾಟೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ಶಾಸಕರಾದ ಮಹೇಶ ಟೆಂಗಿನಕಾಯಿ ಮತ್ತು ಅರವಿಂದ ಬೆಲ್ಲದ ನೇರವಾಗಿ ಪಾಲ್ಗೊಂಡಿದ್ದಾರೆ. ಇದನ್ನು ಇನ್ನೊಂದು ಈದ್ಗಾ ವಿವಾದವನ್ನಾಗಿ ಮಾಡುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ಇಲ್ಲಿ ಯಾವುದೇ ದೇವಸ್ಥಾನದ ಹೊಂಡವಿರಲಿಲ್ಲವೆಂದು ಪುರಾತತ್ವ ಇಲಾಖೆ ವರದಿಯನ್ನು ನೀಡಿದರೂ ಅದನ್ನು ಇವರು ಒಪ್ಪುತ್ತಿಲ್ಲ. ಇವರಾರೂ ಆಹಾರದಲ್ಲಿ ದುರ್ಮಿಶ್ರಣದ ಬಗ್ಗೆ ನಕಲಿ ಔಷಧಿಗಳ ಬಗ್ಗೆ ಎಂದೂ ಧ್ವನಿ ಎತ್ತುವುದಿಲ್ಲ. ಬೇರಾವುದೂ ಬೇಡ, ಒಂದು ಕಾಲದಲ್ಲಿ ರಾಜ್ಯದ ಎರಡನೇ ರಾಜಧಾನಿ ಎಂದು ಹೆಸರಾಗಿದ್ದ ಹುಬ್ಬಳ್ಳಿಯ ಇಂದಿನ ದುರವಸ್ಥೆ ನೋಡಲು ನೀವು ಅಲ್ಲಿಗೆ ಬರಬೇಕು. ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ, ಅಂದಗೆಟ್ಟ ಕಿತ್ತೂರು ಚೆನ್ನಮ್ಮ ಸರ್ಕಲ್, ರಸ್ತೆಯ ಅವ್ಯವಸ್ಥೆ ಇಂಥ ಅಧ್ವಾನಗಳನ್ನು ಮುಚ್ಚಿ ಹಾಕಿ ಹಿಂದೂ ಮುಸ್ಲಿಮ್ ವಿಭಜನೆಯ ಮೂಲಕ ಬಹುಸಂಖ್ಯಾತ ಓಟ್ ಬ್ಯಾಂಕ್ ನಿರ್ಮಿಸಿ ಮತ್ತೆ ಲೋಕಸಭೆ ಮತ್ತು ವಿಧಾನ ಸಭೆಗಳಿಗೆ ಗೆದ್ದು ಬರುವುದು ಇವರ ಹುನ್ನಾರ. ಈ ನಡುವೆ ದಿಲ್ಲಿಯಲ್ಲಿ ನಡೆದ ಜೆನ್ ಝಿ ಮಾದರಿಯ ಯುವಕರ ಹೊಸ ಪೀಳಿಗೆಯೊಂದು ಬರುತ್ತಿದೆ. ಅವರು ಮಾತ್ರ ವಿನಾಶದ ಅಂಚಿನಲ್ಲಿರುವ ಈ ಬಹುತ್ವ ಭಾರತವನ್ನು ಕಾಪಾಡಬಲ್ಲರು.