ಬಳಗನೂರು | ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ
ಜಲಾಲ್ ನಾಯಕ
ರಾಯಚೂರು: ಸಾಲಭಾದೆ ತಾಳಲಾರದೆ ರೈತನೊರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಂಧನೂರು ತಾಲೂಕಿನ ಬನ್ನಿಗನೂರು ಗ್ರಾಮದಲ್ಲಿ ಬುಧವಾರ ನಡೆದಿದೆ.
ಮೃತನನನ್ನು ಜಲಾಲ್ ನಾಯಕ (34) ಎಂದು ಗುರುತಿಸಲಾಗಿದೆ.
ಜಲಾಲ್ ನಾಯಕ ಎಸ್ ಬಿಐ ಬ್ಯಾಂಕ್ ನಲ್ಲಿ 2 ಲಕ್ಷ ರೂ. ಹಾಗೂ ಖಾಸಗಿ ವ್ಯಕ್ತಿಗಳ ಬಳಿಯಲ್ಲಿ 7 ಲಕ್ಷ ರೂ. ಸಾಲ ಮಾಡಿದ್ದ ಎನ್ನಲಾಗಿದೆ. ಖಾಸಗಿ ವ್ಯಕ್ತಿಗಳ ಬಳಿಯಲ್ಲಿ ಬಡ್ಡಿ ಕಟ್ಟುತ್ತಾ ಸಾಲ ತೀರಿಸಲಾಗದೇ ಮಾನಸಿಕವಾಗಿ ನೊಂದಿದ್ದ ಎಂದು ತಿಳಿದು ಬಂದಿದೆ. ಬೆಳಿಗ್ಗೆ ಯಾರು ಇಲ್ಲದ ವೇಳೆ ಜಮೀನಿನಲ್ಲಿ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿದ್ದಾನೆ. ಬಳಿಕ ವಿಷಯ ತಿಳಿದ ಕುಟುಂಬಸ್ಥರು ಸಿಂಧನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಮೃತನ ತಾಯಿ ಲಕ್ಷ್ಮೀ ಅವರು ಬಳಗನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜಲಾಲ್ ನಾಯಕನ ಕುಟುಂಬಕ್ಕೆ ಬನ್ನಿಗನೂರು ಸೀಮಾಂತರದಲ್ಲಿ ಸರ್ವೆ ನಂಬರ್ 106 ರಲ್ಲಿ 2 ಎಕರೆ ಹಾಗೂ 156 ಸರ್ವೆ ನಂಬರ್ ನಲ್ಲಿ 1 ಎಕರೆ ಜಮೀನು ಇದ್ದು, ಜಲಾಲ್ ನಾಯಕ ಬನ್ನಿಗನೂರು ಸೀಮಾಂತರದ ಸರ್ವೆ ನಂಬರ್ 156ರ ಒಂದು ಎಕರೆಯಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದ ಹಾಗೂ ಇದೇ ವರ್ಷ 26 ಎಕರೆ ಇತರೆ ಲೀಜ್ ಗೆ ಹೊಲ ಹಾಕಿಕೊಂಡಿದ್ದ. ಸಾಲದ ಚಿಂತೆಯಲ್ಲಿ ಮುಳುಗಿದ್ದ ಆತನಿಗೆ ನಾವೆಲ್ಲರೂ ಧೈರ್ಯ ಹೇಳುತ್ತಿದ್ಧೆವು. ಜಲಾಲ್ ನಾಯಕ ಇದ್ದಕ್ಕಿದ್ದಂತೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.