ಗಿಣಿಗೇರಾ-ರಾಯಚೂರು ರೈಲು ಮಾರ್ಗ ಶೀಘ್ರ ಪೂರ್ಣಗೊಳಿಸಲು ಸಂಸದ ಜಿ.ಕುಮಾರ ನಾಯಕರಿಂದ ಮನವಿ
ರಾಯಚೂರು: ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಮುಕುಲ್ ಸರನ್ ಮಾಥುರ್ ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿಯಾದ ರಾಯಚೂರು–ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ.ಕುಮಾರ ನಾಯಕರವರು, ಗಿಣಿಗೇರಾ–ರಾಯಚೂರು ರೈಲು ಮಾರ್ಗವನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವ ಕುರಿತು ವಿವರವಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮವನ್ನು ಕ್ರಾಸಿಂಗ್ ಸ್ಟೇಷನ್ ಆಗಿ ಅಭಿವೃದ್ಧಿಪಡಿಸುವುದು ಹಾಗೂ ರಾಯಚೂರು ತಾಲೂಕಿನ ಮಮದಾಪುರವನ್ನು ‘ಗ್ರೇಟರ್ ರಾಯಚೂರು’ ರೈಲು ನಿಲ್ದಾಣವಾಗಿ ರೂಪಿಸುವ ಕುರಿತು ಸಂಸದರು ಪ್ರಸ್ತಾಪಿಸಿದರು. ಜೊತೆಗೆ ಗೂಡ್ಸ್ ಸೈಡಿಂಗ್ ವ್ಯವಸ್ಥೆ ಹಾಗೂ ಜಂಕ್ಷನ್ ಮೂಲಕ ರಾಯಚೂರು ರೈಲ್ವೇ ಬೈಪಾಸ್ ನಿರ್ಮಾಣದ ಅಗತ್ಯತೆಯ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಸಿದರು.
ಇದಕ್ಕೆ ಸ್ಪಂದಿಸಿದ ಪ್ರಧಾನ ವ್ಯವಸ್ಥಾಪಕ ಶ್ರೀ ಮುಕುಲ್ ಸರನ್ ಮಾಥುರ್ ಅವರು, ಗಿಣಿಗೇರಾ–ರಾಯಚೂರು ರೈಲು ಮಾರ್ಗದ ಕಾರ್ಯಗತಗೊಳಿಸುವಿಕೆಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ ಕುರ್ಡಿ ಮತ್ತು ಮಮದಾಪುರ ಸಂಬಂಧಿಸಿದ ಪ್ರಸ್ತಾವನೆಗಳನ್ನು ತಮ್ಮ ತಂಡದೊಂದಿಗೆ ಪರಿಶೀಲಿಸಿ ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ತಿಳಿಸಿದರು.
ಈ ಸಭೆಯಲ್ಲಿ ನೈರುತ್ಯ ರೈಲ್ವೆಯ ಪ್ರಿನ್ಸಿಪಲ್ ಚೀಫ್ ಕಮರ್ಶಿಯಲ್ ಮ್ಯಾನೇಜರ್ ಶ್ರೀ ಸತ್ಯ ಪ್ರಕಾಶ್ ಶಾಸ್ತ್ರಿ, ಪ್ರಿನ್ಸಿಪಲ್ ಚೀಫ್ ಆಪರೇಟಿಂಗ್ ಮ್ಯಾನೇಜರ್ ಶ್ರೀ ಬಿ. ಪ್ರಶಾಂತ್ ಕುಮಾರ್ ಹಾಗೂ ಚೀಫ್ ಎಂಜಿನಿಯರ್ (ಕನ್ಸ್ಟ್ರಕ್ಷನ್) ಶ್ರೀ ವೆಂಕಟೇಶ್ವರ ರಾವ್ ಅವರು ಉಪಸ್ಥಿತರಿದ್ದರು.