Raichur | ಬಸವೇಶ್ವರ ಪುತ್ಥಳಿ ಪಕ್ಕದ ಕಾಮಗಾರಿ ತೆರವಿಗೆ ಒತ್ತಾಯ
ರಾಯಚೂರು : ನಗರದ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿಯ ಟ್ರಾಫಿಕ್ ಸಿಗ್ನಲ್ ಬಳಿ ನಡೆಯುತ್ತಿರುವ ಕಟ್ಟಡ ಕಾಮಗಾರಿಯಿಂದ ಪುತ್ಥಳಿ ಸಾರ್ವಜನಿಕರಿಗೆ ಕಾಣದಂತಾಗುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ ತೆರವುಗೊಳಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿ ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ, ಸಾರ್ವಜನಿಕರಿಗೆ ಬಸವೇಶ್ವರರ ಪುತ್ಥಳಿ ಸ್ಪಷ್ಟವಾಗಿ ಕಾಣುವ ಉದ್ದೇಶದಿಂದ ವೃತ್ತದ ಮಧ್ಯಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ. ಆದರೆ ಇದೀಗ ಪುತ್ಥಳಿಯ ಪಕ್ಕದಲ್ಲೇ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿಯಿಂದ ಪುತ್ಥಳಿ ಮುಚ್ಚಿಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಲಾಗಿದೆ.
ಈಗಾಗಲೇ ಪುತ್ಥಳಿ ಪ್ರದೇಶವನ್ನು ಸುಂದರವಾಗಿ ಅಭಿವೃದ್ಧಿಪಡಿಸಿ ಆಕರ್ಷಕ ತಾಣವನ್ನಾಗಿ ರೂಪಿಸಲಾಗಿದೆ. ಇಂತಹ ಸಂದರ್ಭದಲ್ಲಿ ಸಿಗ್ನಲ್ ಬಳಿ ನಿರ್ಮಾಣವಾಗುತ್ತಿರುವ ಭಾಗವನ್ನು ತೆರವುಗೊಳಿಸಿ, ಹಿಂದಿನಂತೆಯೇ ಪುತ್ಥಳಿ ಪ್ರದೇಶವನ್ನು ಯಥಾಸ್ಥಿತಿಗೆ ತರಲು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪೂರ, ಶರಣ ಭೂಪಾಲ ನಾಡಗೌಡ, ಅಶೋಕ ಪಾಟೀಲ, ಶಿವನಗೌಡ ಮಾ.ಪಾ. ವಿನೋದ ಕುಮಾರ, ಸೋಮನಾಥರೆಡ್ಡಿ, ಹರವಿ ನಾಗನಗೌಡ ಸೇರಿದಂತೆ ಅನೇಕರು ಇದ್ದರು.