Photo Credit : X 

ತಾಷ್ಕೆಂಟ್: ಉಝ್ಬೆಕಿಸ್ತಾನದ ರಾಜಧಾನಿ ತಾಷ್ಕೆಂಟ್‌ನ ದೋಸ್ತ್‌ಲಿಕ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಎಎಫ್‌ಸಿ ಅಂಡರ್-20 ಏಷ್ಯನ್ ಕಪ್ 2027ರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತವು ಸಿರಿಯಾ ವಿರುದ್ಧ 1-0 ಅಂತರದ ಗೆಲುವು ದಾಖಲಿಸಿದೆ. ಇದರೊಂದಿಗೆ ಅದು ತನ್ನ ಅಭಿಯಾನವನ್ನು ಸಕಾರಾತ್ಮಕ ಮನೋಭಾವದೊಂದಿಗೆ ಆರಂಭಿಸಿದೆ.

ಪಂದ್ಯದ 86ನೇ ನಿಮಿಷದಲ್ಲಿ ಸಿಂಗಮಯುಮ್ ಶಾಮಿ ಗಳಿಸಿದ ಕೊನೆಯ ಕ್ಷಣದ ಗೋಲು ಭಾರತದ ಗೆಲುವಿಗೆ ಕಾರಣವಾಯಿತು. ‘ಕಟ್‌ಬ್ಯಾಕ್’ ಮೂಲಕ ಬಂದ ಚೆಂಡನ್ನು ಅವರು ಸಲೀಸಾಗಿ ಗೋಲುಪೆಟ್ಟಿಗೆಗೆ ಸೇರಿಸಿದರು.

ಇದಾದ ಕೆಲವೇ ನಿಮಿಷಗಳಲ್ಲಿ ಓಮಾಂಗ್ ದೊದುಮ್ ನೀಡಿದ ಕ್ರಾಸ್ ಅನ್ನು ಗುನ್‌ಲೈಬಾ ವಾಂಗ್ಖೇರಕ್ಪಮ್ ಗೋಲು ಪೆಟ್ಟಿಗೆಗೆ ಕಳುಹಿಸಿದರು.ಆದರೆ ರೆಫರಿ ಅದನ್ನು ಆಫ್‌ಸೈಡ್ ಎಂದು ತೀರ್ಪು ನೀಡಿದರು.

ಮುಂದಿನ ವರ್ಷ ಚೀನಾದಲ್ಲಿ ನಡೆಯಲಿರುವ ಈ ಖಂಡ ಮಟ್ಟದ ಪಂದ್ಯಾವಳಿಯಲ್ಲಿ ಸ್ಥಾನ ಪಡೆಯಲು ಉಭಯ ತಂಡಗಳು ಪ್ರಯತ್ನಿಸುತ್ತಿವೆ. ಎಂಟು ಗುಂಪುಗಳ ಅಗ್ರಸ್ಥಾನಿಗಳು ಮತ್ತು ಅತ್ಯುತ್ತಮ ಏಳು ರನ್ನರ್-ಅಪ್ ತಂಡಗಳು ಮಾತ್ರ ಫೈನಲ್ಸ್‌ಗೆ ಅರ್ಹತೆ ಪಡೆಯಲಿವೆ.

ಭಾರತ ಮತ್ತು ಸಿರಿಯಾ ’ಬಿ’ ಗುಂಪಿನಲ್ಲಿದ್ದು, ಬಾಂಗ್ಲಾದೇಶ ಮತ್ತು ಉಝ್ಬೆಕಿಸ್ತಾನ ಕೂಡ ಇದೇ ಗುಂಪಿನಲ್ಲಿವೆ.

2006ರ ನಂತರ ಇದೇ ಮೊದಲ ಬಾರಿ ಅಂಡರ್-20 ಏಷ್ಯನ್ ಕಪ್‌ಗೆ ಅರ್ಹತೆ ಪಡೆಯುವ ಗುರಿ ಹೊಂದಿರುವ ಕೋಚ್ ಮಹೇಶ್ ಗಾವಳಿ ಉಸ್ತುವಾರಿಯ ಭಾರತ ತಂಡವು ಮುಂದಿನ ಪಂದ್ಯದಲ್ಲಿ ಆತಿಥೇಯ ಉಝ್ಬೆಕಿಸ್ತಾನ ತಂಡವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor