‘ಕರ್ನಾಟಕ ಬಂದ್’ ನಿಂದ ಸರಕಾರದ ಬೊಕ್ಕಸಕ್ಕೆ 400 ಕೋಟಿ ರೂ. ನಷ್ಟ: ಎಫ್ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ
ಬೆಂಗಳೂರು, ಸೆ.29: ‘ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುತ್ತಿರುವುದನ್ನು ಖಂಡಿಸಿ ನಡೆದ ಕರ್ನಾಟಕ ಬಂದ್ನಿಂದಾಗಿ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳಿಂದ ಬರುವ 400 ಕೋಟಿ ರೂ. ಗಳಷ್ಟು ಸರಕಾರಕ್ಕೆ ನಷ್ಟವಾಗಿದೆ’ ಎಂದು ಎಫ್ಕೆಸಿಸಿಐ (Federation of Karnataka Chambers of Commerce and Industry) ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಡೆದ ಕರ್ನಾಟಕ ಬಂದ್ ಶಾಂತಿಯುತವಾಗಿದ್ದು, ಇದಕ್ಕೆ ಕರ್ನಾಟಕದಾದ್ಯಂತ ಇರುವ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ವಲಯದ ಸುಮಾರು ಶೇ.70 ರಷ್ಟು ಸಂಸ್ಥೆಗಳು ಬೆಂಬಲ ನೀಡಿದ್ದವು ಎಂದರು.
ಈ ಬಂದ್ಗೆ ಎಫ್ಕೆಸಿಸಿಐ ಸಂಪೂರ್ಣ ಬೆಂಬಲ ನೀಡಿತ್ತು. ಈ ಬಂದ್ನಿಂದಾಗಿ ಸರಕಾರದ ಬೊಕ್ಕಸಕ್ಕೆ ಸುಮಾರು 400 ಕೋಟಿ ರೂ. ಗಳಷ್ಟು ನಷ್ಟವಾಗಿದೆ. ಆದರೂ, ಕರ್ನಾಟಕ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಮತ್ತು ನಾಡು, ನುಡಿ, ನೆಲ, ಜಲ, ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು ಎನ್ನುವ ದೃಷ್ಟಿಯಿಂದ ಇದು ಅನಿವಾರ್ಯವಾಗಿತ್ತು ಎಂದು ತಿಳಿಸಿದ್ದಾರೆ.