×
Ad

ಅದ್ದೂರಿ ‘ಬೆಂಗಳೂರು ಕಂಬಳ’ : ಲಕ್ಷಾಂತರ ಜನರು ಭಾಗಿ

Update: 2023-11-26 21:42 IST

ಬೆಂಗಳೂರು: ರಾಜಧಾನಿಯ ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ ಸಮಿತಿಯ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆದ ‘ನಮ್ಮ ಕಂಬಳ’ ಕೂಟದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು.

ಕರಾವಳಿ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಜನಪ್ರಿಯ ಕಂಬಳ ಕ್ರೀಡೆಯನ್ನು ಬೆಂಗಳೂರಿನಲ್ಲಿ ಅಂತಿಮ ದಿನವಾದ ರವಿವಾರ ರಾಜ್ಯವಷ್ಟೇ ಅಲ್ಲದೆ ಹೊರರಾಜ್ಯಗಳಿಂದ ಬಂದ ಲಕ್ಷಾಂತರ ಜನರು ವೀಕ್ಷಣೆ ಮಾಡಿದರು. ಅಲ್ಲದೆ ಆಸ್ಟ್ರೇಲಿಯಾ ಸೇರಿದಂತೆ ನಗರದಲ್ಲಿ ವಾಸಿಸುವ ಹಲವು ವಿದೇಶಿಗರು ಕಂಬಳ ವೀಕ್ಷಿಸಿದ್ದು, ವಿಶೇಷವಾಗಿತ್ತು. ವಿದೇಶಿಗರಿಗೆಂದೇ ವಿಶೇಷ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕಂಬಳದ ಬೆತ್ತಗಳಿಗೆ ಭಾರೀ ಬೇಡಿಕೆ: ಬೆಂಗಳೂರಿಗರಿಂದ ಕಂಬಳದ ಬೆತ್ತಗಳಿಗೆ ಭಾರೀ ಬೇಡಿಕೆಯಿತ್ತು. ಕಂಬಳದ ತುಂಬಾ ತುಳುನಾಡಿನ ಸಾಂಪ್ರದಾಯಿಕ ಉಡುಪಾದ ಪಂಚೆ, ಟವೆಲ್ಲನ್ನು ತಲೆಗೆ ಪೇಟವಾಗಿ ಸುತ್ತಿಕೊಂಡು ಅದರೊಟ್ಟಿಗೆ ಒಂದು ಬೆತ್ತದ ಅಲಂಕಾರಿಕ ಬೆತ್ತವನ್ನು ಹಿಡಿದು ಸಾಗುತ್ತಿದ್ದ ದೃಶ್ಯ ಗಮನಸೆಳೆಯುತ್ತಿತ್ತು.

ಕರಾವಳಿ ಭಾಗದಲ್ಲಿ ಕೋಣಗಳ ಸಾಕಾಣಿಕೆಗೆ ಬೇಕಾದ ಪರಿಕರಗಳ ಮಾರಾಟ ಮಳಿಗೆಗಳು ಹಾಗೂ ಇತರೆ ಮಳಿಗೆಗಳಲ್ಲಿ ಬೆತ್ತಗಳನ್ನು ಮಾರಲಾಗುತ್ತಿತ್ತು. ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಭಾಗದ ಜನರು ತಮ್ಮ ಮನೆಯಲ್ಲಿ ಒಂದು ಬೆತ್ತ ಇಟ್ಟುಕೊಳ್ಳಬೇಕು ಎಂದು ನಾಗರ ಬೆತ್ತವನ್ನು ಖರೀದಿಸುತ್ತಿದ್ದರು. ಮತ್ತೆ ಕೆಲವರು ತುಳುನಾಡಿನ ಕುಟುಂಬ ನಮ್ಮದು. ನಮ್ಮ ಮನೆಗೆ ಬೆತ್ತವೊಂದು ಬೇಕು ಎಂದು ವಿಚಾರಿಸಿ ಖರೀದಿಸುತ್ತಿದ್ದರು.

ಈ ಬೆತ್ತಗಳು 800 ರೂ.ನಿಂದ 2ಸಾವಿರ ರೂ.ವರೆಗೆ ಮಾರಾಟವಾದವು. ಅಷ್ಟು ಮಾತ್ರವಲ್ಲ ಕೋಣಗಳನ್ನು ಓಡಿಸುವವರೆಗೆ ನಾನಾ ಸ್ಪರ್ಧೆಗಳಲ್ಲಿ ಚಿನ್ನವನ್ನು ಬಹುಮಾನವಾಗಿ ನೀಡಲಾಗಿತ್ತು. ಈ ಚಿನ್ನವನ್ನು ಬೆತ್ತದ ಹಿಡಿಪಟ್ಟಿಯಾಗಿ ಬಳಸುವುದರ, ಜತೆಗೆ ಬೆಳ್ಳಿಯ ಹಿಡಿಪಟ್ಟಿಗಳುಳ್ಳ ಬೆತ್ತಗಳು ಕೂಡ ವಿಶೇಷವಾಗಿದ್ದವು. ಆದರೆ, ಚಿನ್ನ, ಬೆಳ್ಳಿ ಹಿಡಿಪಟ್ಟಿಯ ಬೆತ್ತಗಳನ್ನು ಬೆಂಗಳೂರು ಕಂಬಳದಲ್ಲಿ ಮಾರಾಟ ಮಾಡುತ್ತಿರಲಿಲ್ಲ. ದಾರದ ಹಿಡಿಯುಳ್ಳ ಬೆತ್ತಗಳನ್ನು ಮಾರಾಟ ಮಾಡಲಾಗುತ್ತಿತ್ತು.

ಕೋಣ ಓಡಿಸುವವರು ಸ್ಟಾರ್‌ ಗಳು: ಸಿನಿಮಾದಲ್ಲಿ ಹೀರೋಗಳು ಡಯೆಟ್ ಮಾಡುತ್ತಾರೆ.  ಹತ್ತಾರು ವರ್ಷಗಳ ಕಾಲ ಅವರು ಯೌವ್ವನವಾಗಿ ಕಾಣುತ್ತಾರೆ. ಅದಕ್ಕೆ ಸಾಕಷ್ಟು ಶ್ರಮ ಪಡುತ್ತಾರೆ. ಕಂಬಳ ಕರೆಯಲ್ಲಿ ಓಡುವವರು ನಟರಿಗೆ ಒಂದು ಕೈ ಮೇಲು. ನಾವು ಕೂಡ ನಿತ್ಯ ವಾಕಿಂಗ್ ಮಾಡುತ್ತೇವೆ. ಕಂಬಳದ ಸಮಯದಲ್ಲಿ ಮಾಂಸಾಹಾರ ತ್ಯಜಿಸುತ್ತೇವೆ. ಊಟ, ತಿಂಡಿಗಳನ್ನು ಲೆಕ್ಕಾಚಾರದಲ್ಲಿ ತಿನ್ನುತ್ತೇವೆ.

ದೇಹ ತೂಕ ಮತ್ತು ಆರೋಗ್ಯ ಸಮತೋಲನದಲ್ಲಿಟ್ಟುಕೊಳ್ಳಲು ಸಾಕಷ್ಟು ಶ್ರಮಿಸುತ್ತೇವೆ. ಹೀಗಾಗಿಯೇ ಹಗ್ಗದ ಓಟ, ನೇಗಿಲು ಓಟ, ಅಡ್ಡ ಹಲಗೆ ಓಟ, ಕೆನೆ ಹಲಗೆ ಓಟಗಳಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಲು ಸಾಧ್ಯವಾಗುವುದು. ಇದಕ್ಕಾಗಿ ನಾವು ಪ್ರಾಣವನ್ನು ಪಣಕ್ಕಿಡಬೇಕಾದ ಸಂದರ್ಭಗಳೂ ಇರುತ್ತವೆ ಎಂದು ತಡಂದಲೆ ಮೂಡಾಯಿಬೆಟ್ಟು ತಂಡದ ವಿಶ್ವನಾಥ್ ಹೇಳುತ್ತಾರೆ.

ನಾನು ಐಟಿಐ ಓದಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದೇನೆ. ಆದರೆ ಕಂಬಳದ ವೇಳೆ ಕೋಣಗಳಿಗೆ ಎಣ್ಣೆ ಹಚ್ಚುವುದು, ಬಿಸಿನೀರು ಸ್ನಾನ ಮಾಡಿಸುವುದು, ಹುಲ್ಲು, ಹುರುಳಿ ಬೇಯಿಸಿ ರುಬ್ಬಿ ಕೊಡುವುದು ಇತ್ಯಾದಿಗಳನ್ನು ಮಾಡುತ್ತೇನೆ. ಸ್ಪರ್ಧೆಗಳಲ್ಲಿ ಕೋಣ ಓಡಿಸುವುದಿಲ್ಲ. ಆದರೆ ಊರಿನಲ್ಲಿ ಕೋಣಗಳನ್ನು ಹಿಡಿದು ಕೃಷಿ ಕೆಲಸ ಮಾಡುತ್ತೇನೆ. ಅದುವೇ ನನಗೆ ಕಂಬಳ. ನಮ್ಮ ಈ ಸಂಪ್ರದಾಯವನ್ನು ಎಂದಿಗೂ ಬಿಡುವುದಿಲ್ಲ. ಇದೀಗ ಬೆಂಗಳೂರಿನ ಕಂಬಳ ನಮಗೆ ಹೊಸದು. ಇದು ಒಂದು ವಿಶೇಷ ಅನುಭವ ಕೊಟ್ಟಿದೆ. ಕಂಬಳ ಮತ್ತು ಕೋಣಗಳು ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಿವೆ ಎಂದು ಪುತ್ತೂರಿನ ಬಲಯ್ ತಿಂಗಳಾಡಿ ತಂಡದ ಸದಸ್ಯ ರೋಷನ್ ತಿಳಿಸಿದರು.

ತಾರೆಯರ ಮೆರುಗು: ಕಂಬಳ ಕೂಟಕ್ಕೆ ಸಿನಿಮಾ ಕಲಾವಿದರಾದ ರಕ್ಷಿತ್ ಶೆಟ್ಟಿ, ಉಪೇಂದ್ರ, ರಮೇಶ್ ಅರವಿಂದ್, ಮುಖ್ಯಮಂತ್ರಿ ಚಂದ್ರು, ಅರ್ಜುನ್ ಜನ್ಯ, ಬೃಂದಾ ಆಚಾರ್ಯ, ಬಹುಭಾಷಾ ತಾರೆ ಪೂಜಾ ಹೆಗ್ಡೆ ಸೇರಿದಂತೆ ಹಲವರು ಆಗಮಿಸಿ ಕೂಟದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದರು.

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News