ಮಾರ್ಗಮಧ್ಯ ಅಸ್ವಸ್ಥಗೊಂಡ ಚಾಲಕ, ಬಿಎಂಟಿಸಿ ಬಸ್ ಚಲಾಯಿಸಿದ ಎಸಿಪಿ: ವೀಡಿಯೊ ವೈರಲ್
ಬೆಂಗಳೂರು: ಆರೋಗ್ಯ ಸಮಸ್ಯೆಯಿಂದ ಬಿಎಂಟಿಸಿ ಚಾಲಕ ಅಸ್ವಸ್ಥಗೊಂಡಿದ್ದರಿಂದ ನಗರದಲ್ಲಿ ನಡುರಸ್ತೆಯಲ್ಲೇ ನಿಲ್ಲಿಸಲಾಗಿದ್ದ ಬಸ್ಸನ್ನು ಸಹಾಯಕ ಪೊಲೀಸ್ ಕಮಿಷನರ್ ರಾಮಚಂದ್ರಪ್ಪ, ತಾವೇ ಚಲಾಯಿಸಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿರುವ ಘಟನೆ ಕಂಡುಬಂದಿದೆ.
ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೋಮವಾರ ಶಿವಾಜಿನಗರ-ಕಾಡುಗೋಡಿ ಮಾರ್ಗವಾಗಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಚಾಲಕ ಮಾರ್ಗ ಮಧ್ಯೆದಲ್ಲಿಯೇ ಅಸ್ವಸ್ಥಗೊಂಡ ಪರಿಣಾಮ ಬಸ್ ಚಾಲನೆ ಮಾಡಲು ಸಾಧ್ಯವಾಗದ ಸ್ಥಿತಿಗೆ ಚಾಲಕ ತಲುಪಿದ್ದರು. ಹೀಗಾಗಿ ಚಾಲಕ ಓಲ್ಡ್ ಏರ್ಪೋರ್ಟ್ ಕಮಾಂಡ್ ಆಸ್ಪತ್ರೆ ಬಳಿ ಬಸ್ ನಿಲ್ಲಿಸಿದ್ದ. ಎರಡು ದಿನಗಳ ವಿರೋಧ ಪಕ್ಷಗಳ ನಾಯಕರ ಸಭೆ ಹಿನ್ನೆಲೆ ನಗರಕ್ಕೆ ವಿವಿಐಪಿಗಳ ಆಗಮನ ಹಿನ್ನೆಲೆ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿ ಎಸಿಪಿ ರಾಮಚಂದ್ರಪ್ಪ ಅವರು ಭದ್ರತೆಗೆ ನಿಯೋಜನೆಗೊಂಡಿದ್ದರು.
ಈ ವೇಳೆ ರಸ್ತೆ ಮಧ್ಯ ನಿಂತಿದ್ದ ಬಿಎಂಟಿಸಿ ಬಸ್ ಅನ್ನು ಗಮನಿಸಿದ ರಾಮಚಂದ್ರಪ್ಪ, ಚಾಲಕನನ್ನು ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕಳುಹಿಸಿ, ಬಳಿಕ ಬಸ್ ಅನ್ನು ಸುಮಾರು ಒಂದು ಕಿ.ಮೀ ದೂರದ ಬಸ್ ನಿಲ್ದಾಣದವರೆಗೆ ಸ್ವತಃ ಚಾಲನೆ ಮಾಡಿಕೊಂಡಿ ಹೋಗಿದ್ದಾರೆ.
ಎಸಿಪಿ ರಾಮಚಂದ್ರಪ್ಪ ಅವರು ಬಸ್ ಚಲಾಯಿಸುವ ವೀಡಿಯೊ ಹಂಚಿಕೊಂಡಿರುವ ಹಲವರು, ಅಧಿಕಾರಿಯ ರಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.