ಬೆಂಗಳೂರು : ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ಎಸ್ಐಆರ್ ವಿರೋಧಿ ಒಕ್ಕೂಟ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಹೋರಾಟದಲ್ಲಿ ಭಾಗವಹಿಸಿದ್ದ ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು ಎಸ್ಐಆರ್ ಸಂತ್ರಸ್ತರು, ಹೋರಾಟಗಾರರು, ಚಿಂತಕರನ್ನು ಪೊಲೀಸರು ವಶಕ್ಕೆ ಪಡೆದರು.

ಪ್ರೀಡಂ ಪಾರ್ಕಿನಲ್ಲಿ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಆಗಮಿಸುವಂತೆ ಚುನಾವಣಾ ಆಯೋಗದ ಪ್ರತಿನಿಧಿಗಳಿಗೆ ಎಸ್ಐಆರ್ ವಿರೋಧಿ ಒಕ್ಕೂಟದಿಂದ ಆಹ್ವಾನ ನೀಡಲಾಗಿತ್ತು. ಆದರೆ, ಚುನಾವಣಾ ಆಯೋಗದಿಂದ ಸಂಬಂಧಫಟ್ಟವರು ಸ್ಥಳಕ್ಕೆ ಬಾರದ ಕಾರಣ ಪ್ರಕಾಶ್ ರಾಜ್ ನೇತೃತ್ವದಲ್ಲಿ ಸಂತ್ರಸ್ತರು ಆಯೋಗಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಚುನಾವಣಾ ಆಯೋಗ ಮುತ್ತಿಗೆ ಹೋರಾದಲ್ಲಿ ನಟ ಕಿಶೋರ್ ಕುಮಾರ್, ಹಿರಿಯ ಸಾಹಿತಿಗಳಾದ ಎಲ್ಎನ್ ಮುಕುಂದರಾಜ್, ದಸಂಸ ಹಿರಿಯ ನಾಯಕರಾದ ಎನ್.ವೆಂಕಟೇಶ್, ಜನಶಕ್ತಿ ರಾಜ್ಯಾಧ್ಯಕ್ಷರಾದ ನೂರ್ ಶ್ರೀಧರ್ ಸೇರಿದಂತೆ ರಾಜ್ಯದ ದಲಿತ, ರೈತ, ಮಹಿಳಾ ಮತ್ತು ಭಾಷಾ ಚಳವಳಿಯ ಹಲವಾರು ಮುಖಂಡರು ಭಾಗವಹಿಸಿದ್ದರು.

ಹಕ್ಕೊತ್ತಾಯಗಳು:

1. ಯಾವೊಬ್ಬ ಮತದಾರರನ್ನೂ ಸಾಕಷ್ಟು ಸಮರ್ಥ ಕಾರಣವಿಲ್ಲದೆ ಮತದಾರರ ಪಟ್ಟಿಯಿಂದ ಹೊರದಬ್ಬಬಾರದು. ಡಿಲೀಟ್ ಮಾಡಲಾಗಿರುವ ಮಾತದಾರರಿಗೂ ಅಪೀಲ್ ಸಲ್ಲಿಸಿ ಸೇರ್ಪಡೆಗೊಳ್ಳಲು ಅವಕಾಶ ವಿಸ್ತರಿಸಬೇಕು. ಅರ್ಹ ಮತದಾರರನ್ನೂ ಒಳತರಲು ಪ್ರತಿ ಬೂತಿನ ಪ್ರತಿ ಮನೆಯನ್ನೂ ತಲುಪುವ ವಿಶೇಷ ಡ್ರೈವ್ ನಡೆಸಬೇಕು.

2. ಪ್ರತಿ ಬೂತಿನಲ್ಲಿ ಬೇರೆಕಡೆಯಿಂದ ಶಿಫ್ಟ್ ಆಗಿಬಂದು ಈಗ ಇಲ್ಲಿ ನೆಲೆಸಿರುವ ಮತದಾರರಿಗೆ ಫಾರಂ 8 ಕೊಟ್ಟು ಈಗ ವಾಸಿಸುತ್ತಿರುವ ವಿಳಾಸಕ್ಕೆ ತಮ್ಮ ಮತವನ್ನು ವರ್ಗಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು.

3. ನೋಟೀಸ್ ನೀಡುತ್ತಿರುವ 43 ಲಕ್ಷಮತದಾರರ ಹೆಸರುಗಳನ್ನು ಕಾರಣದ ಸಮೇತ ಪ್ರಕಟಿಸಬೇಕು. ಅವರನ್ನು ಅಪರಾಧಿಗಳಂತೆ ನಡೆಸಿಕೊಳ್ಳಬಾರದು. ಎರಡು ದಾಖಲೆಗಳಿಗಿಂತ ಹೆಚ್ಚು ದಾಖಲೆ ಕೇಳಬಾರದು.

4. ಗ್ರಾಮ ಮತ್ತು ವಾರ್ಡ್ ಸಭೆಗಳನ್ನು ಕ್ರಮಬದ್ಧವಾಗಿ, ಸಾಕಷ್ಟು ಪ್ರಚಾರ ನೀಡಿ, ಅರ್ಥಪೂರ್ಣ ರೀತಿಯಲ್ಲಿ ನಡೆಸಬೇಕು.

5. ಕರ್ನಾಟಕದ ಚುನಾವಣೆಗಳಿಗೆ ಇನ್ನು ಸಾಕಷ್ಟು ಸಮಯ ಇರುವುದರಿಂದ ಅವಸರ ಮಾಡದೆ ಅಬ್ಜೆಕ್ಷನ್ ಮತ್ತುಅಪೀಲ್ ಅವಧಿಯನ್ನು ಆರು ತಿಂಗಳಕಾಲ ವಿಸ್ತರಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor