ಎಸ್ಐಆರ್ ಪ್ರಕ್ರಿಯೆ | ಮ್ಯಾಪಿಂಗ್ ಪೂರ್ಣಗೊಂಡರೂ ಮತ ರದ್ದು ಸಾಧ್ಯತೆ : ಡಿ.ಕೆ.ಶಿವಕುಮಾರ್
ಬೆಂಗಳೂರು : ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆ ಆರಂಭವಾಗಿ ಮ್ಯಾಪಿಂಗ್ ಪೂರ್ಣಗೊಂಡರೂ, ಮತ ರದ್ದುಗೊಳ್ಳುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗುರುವಾರ ಇಲ್ಲಿನ ಕ್ವೀನ್ಸ್ ರಸ್ತೆಯ ಇಂದಿರಾ ಗಾಂಧಿ ಭವನದ ಭಾರತ ಜೋಡೋ ಸಭಾಂಗಣದದಲ್ಲಿ ಗದಗ ಜಿಲ್ಲೆ ರೋಣ ವಿಧಾನಸಭೆ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ್ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲವರು ಮ್ಯಾಪಿಂಗ್ ಆಗಿದೆ ಎಂದು ಸುಮ್ಮನಾಗುತ್ತಾರೆ. ಇದು ಅವರ ಲೆಕ್ಕಕ್ಕೆ ಆಗುವ ಮ್ಯಾಪಿಂಗ್ ಇದರಿಂದ ನಿಮ್ಮ ಮತ ಉಳಿಯುವುದಿಲ್ಲ. ಶೇ.99ರಷ್ಟು ಮ್ಯಾಪಿಂಗ್ ಆದರೂ ಶೇ.50ರಷ್ಟು ಮತ ತೆಗೆದುಹಾಕುವ ಸಾಧ್ಯತೆ ಇದೆ ಎಂದರು.
ಈಗಾಗಲೇ ಪಶ್ಚಿಮ ಬಂಗಾಳದಲ್ಲಿ, ತಮಿಳುನಾಡಿನಲ್ಲಿ ಏನಾಗಿದೆ ಎಂದು ನಿಮಗೆಲ್ಲಾ ಅರಿವಿದೆ. ಕಾಂಗ್ರೆಸ್ ಕಾರ್ಯಕರ್ತರು ಮೊದಲು ಮನೆ ಮನೆಗೆ ಹೋಗಿ ವಾಸ ದೃಢೀಕರಣ ಪತ್ರ, ಪಿಂಚಣಿ ಪ್ರಮಾಣ ಪತ್ರ ಸೇರಿದಂತೆ ಎಲ್ಲ ದಾಖಲೆ ನೀಡಿದಾಗ ಮಾತ್ರ ಮತದಾನದ ಹಕ್ಕು ಉಳಿಯುತ್ತದೆ.ಒಟ್ಟಾರೆ, ಪ್ರತಿಯೊಬ್ಬರ ಮತದಾನದ ಹಕ್ಕನ್ನು ರಕ್ಷಿಸಿ, ಜನರ ಮನಸ್ಸು ಗೆಲ್ಲಬೇಕು ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.