×
Ad

ನನ್ನನ್ನು ಜೈಲಿಗೆ ಕಳುಹಿಸುವ ಎಚ್‌ಡಿಕೆ ಅವರ ಪ್ರಯತ್ನ ಮುಂದುವರಿಯಲಿ, ನಾನು ಸಿದ್ಧನಿದ್ದೇನೆ : ಡಿ.ಕೆ.ಶಿವಕುಮಾರ್

Update: 2026-07-15 19:56 IST

ಬೆಂಗಳೂರು : ‘ಬೇರೆ ಯಾವ ನಾಯಕರು ಬೆಳೆಯಬಾರದು ಎನ್ನುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮನಸ್ಥಿತಿ ನನಗೆ ಅರಿವಿದ್ದು, ನನ್ನನ್ನು ಜೈಲಿಗೆ ಕಳುಹಿಸುವ ಅವರ ಪ್ರಯತ್ನ ಮುಂದುವರಿಯಲಿ, ಅದಕ್ಕೂ ನಾನು ಸಿದ್ಧನಿದ್ದೇನೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿಮಗೆ ಆಸೆ ಇದ್ದರೆ ನಿಮ್ಮ ಪ್ರಯೋಗಗಳು ನನ್ನ ಮೇಲೆ ಆಗಲಿ. ಈಗಾಗಲೇ ನನ್ನ ಮೇಲೆ ಪ್ರಕರಣಗಳನ್ನು ದಾಖಲಿಸುವ ಪ್ರಯೋಗಗಳು ನಡೆಯುತ್ತಿವೆ. ಜೈಲಿಗೆ ಹೋಗುವ ದಿನ ಹತ್ತಿರ ಬಂದಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇದಕ್ಕೂ ನಾನು ಸಿದ್ಧವಾಗಿದ್ದೇನೆ ಎಂದು ತಿಳಿಸಿದರು.

ನಾನು ಕೃಷ್ಣನ ಜನ್ಮ ಸ್ಥಳದಲ್ಲಿ ಇದ್ದವನು. ಅಲ್ಲಿಗೆ ಕುಮಾರಸ್ವಾಮಿಯೂ ಬಂದು ಭೇಟಿ ಮಾಡಿದ್ದರು. ಆದರೆ, ನಿಮ್ಮ ಪ್ರಯತ್ನ ಹೋರಾಟ, ನಿಮ್ಮ ಶ್ರಮ ಎಲ್ಲವೂ ನನಗೆ ಗೊತ್ತಿದೆ. ಬೇರೆ ಯಾವ ನಾಯಕರು ಬೆಳೆಯಬಾರದು ಎಂಬ ನಿಮ್ಮ ಮನಸ್ಥಿತಿ ನನಗೆ ಅರಿವಿದೆ. ಆದರೂ ನಿಮ್ಮ ಹಿರಿತನಕ್ಕೆ ನಮಸ್ಕರಿಸುವುದು ನನ್ನ ಧರ್ಮ. ನಾನು ಕೊಡುವ ಗೌರವ ನಿಮ್ಮಿಂದ ಸ್ವೀಕರಿಸಲು ಆಗದಿದ್ದರೆ ಅದು ನಿಮ್ಮ ಪಾಡು. ನಾನು ಯಾರಿಗೂ ಕೆಟ್ಟದ್ದು ಬಯಸುವವನಲ್ಲ, ನಿಮಗೂ ಕೆಟ್ಟದ್ದನ್ನು ಬಯಸುವುದಿಲ್ಲ. ನನ್ನನ್ನು ಜೈಲಿಗೆ ಕಳಿಸಬೇಕು ಎಂಬ ಸಂಕಲ್ಪ ಮಾಡಿದ್ದಿರೋ ಅದನ್ನು ಮುಂದುವರಿಸಿ ಎಂದು ಅವರು ಹೇಳಿದರು.

ಆ ಜೈಲಿಗೆ ಹೋಗಿ ಬಂದೇ ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಕೂತಿದ್ದೇನೆ. ನಾನು ಜೈಲಿಗೆ ಹೋದಾಗ ಜನ ಹೇಗೆ ನನ್ನ ಪರವಾಗಿ ನಿಂತರು ಎಂಬುದನ್ನು ನಾನು ಕಣ್ಣಾರೆ ನೋಡಿದ್ದೇನೆ. ನಾನು ಜೈಲಿಗೆ ಹೋಗಿದ್ದ ಪ್ರಕರಣ ಎರಡೂವರೆ ವರ್ಷಗಳಲ್ಲಿ ವಜಾವಾಗಿದೆ. ಸುಪ್ರೀಂ ಕೋರ್ಟ್ ಪಾದಕ್ಕೆ ನಾನು ಇಲ್ಲಿಂದಲೇ ನಮಿಸುತ್ತೇನೆ. ಆ ಜೈಲಿನ ಕೋಣೆಯಲ್ಲಿ ನಾನು ನನ್ನ ಕುಟುಂಬ ಅನುಭವಿಸಿದ ನೋವು ನಮಗೆ ಮಾತ್ರ ಗೊತ್ತು. ನನಗಾಗಿ ರಾಜ್ಯದ ನನ್ನ ತಾಯಂದಿರು, ಯುವಕರು ಕಣ್ಣೀರು ಹಾಕಿ, ಪ್ರಾರ್ಥಿಸಿ ನನ್ನನ್ನು ಜೈಲಿಂದ ಹೊರಗೆ ಕರೆತಂದು ಈ ಸ್ಥಾನದಲ್ಲಿ ಕೂರಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಇಳಿ ವಯಸ್ಸಿನಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಬಂದು ಧರಣಿ ಕೂರಿಸಿ, ಅವರ ಮನಸ್ಸು ನೋಯಿಸಲು ನನಗೆ ಇಷ್ಟವಿಲ್ಲ. ನಮ್ಮ ತಾಯಂದಿರು ಯಾವ ಅಧಿಕಾರಿಗಳಿಗೆ ಪೊರಕೆ ಏಟು ಹೊಡೆಯುವ ಅಗತ್ಯವಿಲ್ಲ. ನಾನು ಅವರ ಬದುಕಿಗೆ ಕೈಹಾಕಿ ತಪ್ಪು ಮಾಡಿದ್ದರೆ, ಅವರು ನನಗೆ ಬೇಕಾದರೆ ಹೊಡೆಯಲಿ, ನಾನು ಹೊಡೆಸಿಕೊಳ್ಳಲು ಸಿದ್ಧನಿದ್ದೇನೆ ಎಂದು ಅವರು ಹೇಳಿದರು.

ಹೈಕಮಾಂಡ್ ಮೆಚ್ಚಿಸಲು ಈ ತೀರ್ಮಾನಕ್ಕೆ ಬಂದಿದ್ದೀರಿ ಎಂದು ಎಚ್.ಡಿ.ದೇವೇಗೌಡ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಅವರು ನನಗೆ ತೋರುತ್ತಿರುವ ಪ್ರೀತಿ. ನೀವು 2006ರಲ್ಲಿ ಈ ಯೋಜನೆ ಮಾಡಿದಾಗ, ಯಾವ ಹೈಕಮಾಂಡ್‍ಗೆ ಮೆಚ್ಚಿಸಲು ಹೋಗಿದ್ದಿರಿ? ಅವರು ಹಾಸನದಿಂದ ಇಲ್ಲಿಗೆ ಬಂದು ಯಾವ ವರ್ಷದಲ್ಲಿ ಎಲ್ಲೆಲ್ಲಿ ಜಮೀಜು ತೆಗೆದುಕೊಂಡರು ಎಂಬ ಪಟ್ಟಿಬೇಕಾ? ಎಂದರು.

ಈ ಯೋಜನೆ ನಿಲ್ಲಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಜಮೀನು ನೀಡುತ್ತಾರೋ ಅವರಿಂದ ಜಮೀನಿನಲ್ಲಿ ನಾವು ಸರಕಾರದ ಯೋಜನೆ ಮಾಡುತ್ತೇವೆ. ಈ ಯೋಜನೆಯನ್ನು ಯಾಕೆ ಕೈಬಿಡೋಣ? ನಾನು ಈ ಯೋಜನೆಯನ್ನು ಯಾಕೆ ಡಿನೋಟಿಫೈ ಮಾಡಲಿ? ಈಗಾಗಲೇ ಜಮೀನು ಕೊಟ್ಟವರಿಗೆ ಮತ್ತೆ ಅಲ್ಲಿ ವ್ಯವಸಾಯ ಮಾಡಲು ಅವಕಾಶ ನೀಡಲು ಸಾಧ್ಯವೇ? ಈ ಯೋಜನೆಯ ಪ್ರತಿಯೊಂದು ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು ಎಂದು ಹೇಳಿದರು.

ರೈತರ ಮೇಲಿನ ಪ್ರಕರಣ ಕುರಿತು ಮಾಹಿತಿ ನೀಡಿದ ಅವರು, ಯಾವ ರೈತರ ಮೇಲೂ ಪ್ರಕರಣ ದಾಖಲಾಗಿಲ್ಲ. ಇದರಿಂದ ಗಾಬರಿಯಾಗುವುದು ಬೇಡ. ಕಾನೂನು ಪ್ರಕ್ರಿಯೆ ನಡೆಯಲಿದೆ. ಈ ಹಿಂದೆ ಇವರು 2 ಸಾವಿರ ಜನರ ಮೇಲೆ ಎಫ್‍ಐಆರ್ ಹಾಕಿಸಿದ್ದು ಇದೆ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News