×
Ad

ಈ.ಡಿ ಭ್ರಷ್ಟಾಚಾರದ ವಿರುದ್ಧ ಸಮರ ಸೇನಾನಿಯಾಗಿರಬಹುದು, ಕಾನೂನು ಪ್ರಕಾರವೇ ನಡೆದುಕೊಳ್ಳಬೇಕು : ಹೈಕೋರ್ಟ್‌

Update: 2026-07-15 22:47 IST

ಬೆಂಗಳೂರು : ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸಹೋದರಿ ಮಹಾದೇವಿ ಹಾಗೂ ಭಾವಮೈದುನ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ. ವೈ. ಮಂಜುನಾಥ್‌ ಮತ್ತಿತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಶೋಧ ಮತ್ತು ಜಪ್ತಿ ಸಂಬಂಧಿತ ಪ್ರಕ್ರಿಯೆಯಲ್ಲಿ ಆತುರದ ಕ್ರಮಕ್ಕೆ ಮುಂದಾಗದಂತೆ ಜಾರಿ ನಿರ್ದೇಶನಾಲಯಕ್ಕೆ (ಈ.ಡಿ) ಹೈಕೋರ್ಟ್ ನಿರ್ದೇಶಿಸಿದೆ.

ಇದೇ ವೇಳೆ, ನೀವು (ಈ.ಡಿ) ಭ್ರಷ್ಟಾಚಾರದ ವಿರುದ್ಧ ಸಮರ ಸೇನಾನಿಯಾಗಿರಬಹುದು. ಆದರೆ, ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು ಎಂದು ತೀಕ್ಷ್ಣವಾಗಿ ನುಡಿದಿದೆ.

ಬೆಂಗಳೂರು ಮತ್ತು ಗೋವಾ ಈ.ಡಿ ಅಧಿಕಾರಿಗಳು ಜೂನ್‌ 23ರಂದು ಬೆಳಗಾವಿ ಸೇರಿ ಅರ್ಜಿದಾರರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ನಡೆಸಿರುವ ಶೋಧ ಮತ್ತು ಜಪ್ತಿ ಪ್ರಕ್ರಿಯೆ ಪ್ರಶ್ನಿಸಿ ಡಾ. ಮಂಜುನಾಥ್‌ ಮತ್ತವರ ಸಂಬಂಧಿಗಳು ಪ್ರತ್ಯೇಕವಾಗಿ ಸಲ್ಲಿಸಿರುವ ಮೂರು ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ನೀವು ಭ್ರಷ್ಟಾಚಾರದ ವಿರುದ್ಧ ಸಮರ ಸೇನಾನಿಯಾಗಿರಬಹುದು. ಆದರೆ, ಕಾನೂನಿನ ಅನ್ವಯ ನಡೆಯಬೇಕು. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಉತ್ಸಾಹ ಇದ್ದರೆ ಕಾನೂನಿನ ಪ್ರಕಾರ ನಡೆಯಬೇಕು. ಆಗ ಯಾವುದೇ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ. ಆದರೆ, ನೀವು ಇಲ್ಲಿಗೆ ಬಂದು ಮೇಲ್ನೋಟಕ್ಕೆ ಸಮರ್ಥನೀಯವಲ್ಲದ ಕ್ರಿಯೆಯನ್ನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿತಲ್ಲದೆ, ಮುಂದಿನ ವಿಚಾರಣೆವರೆಗೆ ಈ.ಡಿ ಪ್ರಕರಣದಲ್ಲಿ ಮುಂದುವರಿಯಬಾರದು ಎಂದು ನಿರ್ದೇಶಿಸಿ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ವಿಚಾರಣೆಯ ವೇಳೆ ನ್ಯಾಯಪೀಠ, ಹಣ ವರ್ಗಾವಣೆಯಾಗಿರಬೇಕು, ಸಂಪರ್ಕ ಕಾಣಬೇಕು. ಇಲ್ಲಿ ಸಂಬಂಧವೇ ಇಲ್ಲದ ವ್ಯಕ್ತಿಗಳಿದ್ದಾರೆ. ಅಷ್ಟು ಸರಳವಾಗಿ ನೀವು ಅವರನ್ನು ಎಳೆದು ತರಲಾಗದು. ಯಾರ ಮನೆಯನ್ನಾದರೂ ಈ.ಡಿ ಶೋಧಿಸಬಹುದು. ಆದರೆ, ಪ್ರೆಡಿಕೇಟ್‌ ಅಪರಾಧ ಇರಬೇಕು. ಆ ಪ್ರಕರಣದಲ್ಲಿ ವ್ಯಕ್ತಿ ಆರೋಪಿಯಾಗಿರಬೇಕು, ಇಲ್ಲವೇ ಆ ವ್ಯಕ್ತಿಯನ್ನು ಸಂಪರ್ಕಿಸುವ ಹಣ ವರ್ಗಾವಣೆಯಾಗಿರಬೇಕು. ಇಲ್ಲಿನ ವ್ಯಕ್ತಿಗಳು ಯಾರು ಮತ್ತು ಜಗದೀಶ್‌ ನಾಯಕ್‌ ಯಾರು? ಎಂದು ಪ್ರಶ್ನಿಸಿತು.

ಮುಂದುವರಿದು, 25 ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವುದು ಅಪರಾಧ ಪ್ರಕ್ರಿಯೆಯಾಗುತ್ತದೆಯೇ? ಲಂಚ ಪಡೆದ ವ್ಯಕ್ತಿಯ ವಿರುದ್ಧ ಈ.ಡಿ ಮುಂದುವರಿಯಬಹುದು. ಇದಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಗಳ ವಿರುದ್ಧ ಹೇಗೆ ಈ.ಡಿ ಹೋಗುತ್ತದೆ? ಲೋಕಾಯುಕ್ತ ರೂಪದಲ್ಲಿ ಒಳ್ಳೆಯ ಸಂಸ್ಥೆ ಇದೆ. ಲೋಕಾಯುಕ್ತ ಕೆಲಸವನ್ನು ಈ.ಡಿ ಮಾಡುತ್ತದೆಯೇ? ಎಂದು ಪ್ರಶ್ನಿಸಿತು.

ಮಹಾದೇವಿ ಮತ್ತು ಮಂಜುನಾಥ್ ಪರ ಹಾಜರಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು, ಇಲ್ಲಿ ಪ್ರೆಡಿಕೇಟ್‌ ಅಪರಾಧವೇ ಇಲ್ಲ. ಜಾರಿ ನಿರ್ದೇಶನಾಲಯದ ಪತ್ರಿಕಾ ಪ್ರಕಟಣೆಯು ಪಿಎಂಎಲ್‌ಎ ಅಡಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದರು. ಮತ್ತೊಬ್ಬ ಅರ್ಜಿದಾರರ ಪರ ಹಿರಿಯ ವಕೀಲ ಕೆ.ಎನ್‌‌ ಫಣೀಂದ್ರ ಅವರು, ಅರ್ಜಿದಾರರ ಕಚೇರಿ ಮತ್ತು ಮನೆಗಳಲ್ಲಿ ಶೋಧ ಮತ್ತು ಜಪ್ತಿ ನಡೆದಿದೆ. ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ನಿರ್ಬಂಧಿಸಬೇಕು ಎಂದು ಮನವಿ ಮಾಡಿದರು.

ಜಾರಿ ನಿರ್ದೇಶನಾಲಯದ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಮಧು ರಾವ್‌ ಅವರು, ತನಿಖೆಯ ಸಂದರ್ಭದಲ್ಲಿ ಪತ್ತೆಯಾದ ಅಂಶಗಳ ಆಧಾರದಲ್ಲಿ ಈ.ಡಿ ಕ್ರಮಕೈಗೊಂಡಿದೆ. ಈ ಸಂಬಂಧ ಮಾಹಿತಿ ಪಡೆಯಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಅರ್ಜಿದಾರರ ವಾದವೇನು?

ನಮ್ಮ ವಿರುದ್ಧ ಷೆಡ್ಯೂಲ್‌ ಅಪರಾಧವಿಲ್ಲದೇ ಇರುವುದರಿಂದ ಜಾರಿ ನಿರ್ದೇಶನಾಲಯ ನಮ್ಮ ವಿರುದ್ಧ ಪಿಎಂಎಲ್‌ಎ ಸೆಕ್ಷನ್‌ 17ರ ಅಡಿ ಆರಂಭಿಸಿರುವ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಜಗದೀಶ್‌ ನಾಯಕ್‌ ಎಂಬ ವ್ಯಕ್ತಿ 25 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಇದರ ಭಾಗವಾಗಿ ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್‌ 7ಎ ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ನಾವು ಆರೋಪಿಗಳೂ ಅಲ್ಲ, ಅದಕ್ಕೆ ಸಂಬಂಧವನ್ನೂ ಹೊಂದಿಲ್ಲ. ಅದಾಗ್ಯೂ, ಇದನ್ನು ಈಡಿ ಅಪರಾಧ ಪ್ರಕ್ರಿಯೆಯಾಗಿ ಮುಂದು ಮಾಡುತ್ತಿರುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News