×
Ad

ರಾಜ್ಯಾದ್ಯಂತ ಏಕರೂಪದ ಹೊಸ ವೇಳಾಪಟ್ಟಿ ಜಾರಿಗೊಳಿಸಿದ ಶಿಕ್ಷಣ ಇಲಾಖೆ: ಇನ್ಮುಂದೆ ಶನಿವಾರ ಬೆಳಗ್ಗೆ 8.30ರಿಂದ ಶಾಲೆ

Update: 2026-06-26 21:13 IST

ಸಾಂದರ್ಭಿಕ ಚಿತ್ರ | PC : Gemini AI

ಬೆಂಗಳೂರು : ಶಿಕ್ಷಣ ಇಲಾಖೆಯು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಿಹಿಸುದ್ದಿ ನೀಡಿದೆ. ಇನ್ನು ಮುಂದೆ ಶನಿವಾರದ ತರಗತಿಗಳ ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆ ತರಲಾಗಿದ್ದು, ಇಡೀ ರಾಜ್ಯಾದ್ಯಂತ ಎಲ್ಲ ಶಾಲೆಗಳಿಗೂ ಅನ್ವಯವಾಗುವಂತೆ ಏಕರೂಪದ ಹೊಸ ಸಮಯವನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ.

ಶಾಲಾ ಶಿಕ್ಷಣ ಇಲಾಖೆಯ ಹೊಸ ಆದೇಶದ ಪ್ರಕಾರ, ಇನ್ನು ಮುಂದೆ ಶನಿವಾರದ ದಿನದಂದು ಬೆಳಗ್ಗೆ 8.30 ರಿಂದ ಮಧ್ಯಾಹ್ನ 12:30 ರವರೆಗೆ ತರಗತಿಗಳು ನಡೆಯಲಿವೆ. ಇಲ್ಲಿಯವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ಸಮಯ ಇತ್ತು. ಕೆಲವು ಶಾಲೆಗಳಲ್ಲಿ ಬೆಳಗ್ಗೆ 8ರಿಂದ 12 ಗಂಟೆಯವರೆಗೆ ತರಗತಿಗಳಿದ್ದರೆ, ಇನ್ನೂ ಕೆಲವು ಕಡೆ 7.30ರಿಂದ 11.30ರವರೆಗೆ ಶಾಲೆ ನಡೆಯುತ್ತಿತ್ತು.

ಈ ಗೊಂದಲಕ್ಕೆ ತೆರೆ ಎಳೆದಿರುವ ಶಿಕ್ಷಣ ಇಲಾಖೆ, ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಕಡ್ಡಾಯವಾಗಿ ಒಂದೇ ಸಮಯವನ್ನು ಪಾಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸರಕಾರ ಈಗಾಗಲೇ ಆನ್‍ಲೈನ್ ಹಾಜರಾತಿಯನ್ನು ಕಡ್ಡಾಯಗೊಳಿಸಿದೆ. ಶಿಕ್ಷಕರು ಯಾವುದೇ ತಾಂತ್ರಿಕ ಒತ್ತಡವಿಲ್ಲದೆ ನಿಗದಿತ ಸಮಯಕ್ಕೆ ಸರಿಯಾಗಿ ಹಾಜರಾತಿಯನ್ನು ದಾಖಲಿಸಲು ಈ ಹೊಸ ವೇಳಾಪಟ್ಟಿ ಮತ್ತು ಹೆಚ್ಚುವರಿ ಸಮಯವು ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News