RSS, VHP, ಬಜರಂಗದಳವನ್ನು ‘ಭಯೋತ್ಪಾದಕ ಸಂಘಟನೆ’ಗಳೆಂದು ಘೋಷಿಸಿ: RSS ಮಾಜಿ ಕಾರ್ಯಕರ್ತ ಯಶವಂತ್ ಸಹದೇವ್ ಶಿಂಧೆ ಆಗ್ರಹ
Photo Credit : thewire.in
ಮಂಗಳೂರು, ಆ.10: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮಾಜಿ ಪ್ರಚಾರಕ ಯಶವಂತ್ ಸಹದೇವ್ ಶಿಂಧೆ ಅವರು RSS, ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗದಳವನ್ನು ‘ಭಯೋತ್ಪಾದಕ ಸಂಘಟನೆಗಳು’ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಅವರು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. 2000ರ ದಶಕದಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ RSS ಮುಖ್ಯಸ್ಥ ಮೋಹನ್ ಭಾಗವತ್, RSS ನಾಯಕ ಇಂದ್ರೇಶ್ ಕುಮಾರ್ ಮತ್ತು VHP ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಸೇರಿದಂತೆ ಸಂಘಟನೆಗಳ ಹಿರಿಯ ನಾಯಕರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಆಗಸ್ಟ್ ಆರಂಭದಲ್ಲಿ ಶಿಂಧೆ ಕಳುಹಿಸಿರುವ ಪತ್ರದಲ್ಲಿ, 2000ರ ದಶಕದ ಬಾಂಬ್ ಸ್ಫೋಟಗಳಲ್ಲಿ ಹಿಂದೂ ಬಲಪಂಥೀಯರು ಭಾಗಿಯಾಗಿದ್ದರು ಎಂದು ಅವರು ಮತ್ತೆ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಹಲವು ವರ್ಷಗಳಿಂದ ಆರೋಪ ಮಾಡುತ್ತಿದ್ದಾರೆ. ಆದರೆ, ಈ ಪ್ರಕರಣಗಳಲ್ಲಿ ಆರೋಪಿಗಳನ್ನು ನ್ಯಾಯಾಲಯಗಳು ಅಂತಿಮವಾಗಿ ಖುಲಾಸೆಗೊಳಿಸಿವೆ.
1990ರಿಂದ ಪೂರ್ಣಾವಧಿ RSS ಕಾರ್ಯಕರ್ತರಾಗಿದ್ದ ಶಿಂಧೆ, ‘ಬಾಂಬ್ ತಯಾರಿಕೆ ಮತ್ತು ತರಬೇತಿ ತಂಡಕ್ಕೆ ಸೇರಲು’ ಕೇಳಿಕೊಂಡ ಬಳಿಕ ಸಂಘಟನೆಯನ್ನು ತೊರೆದಿದ್ದಾಗಿ ಹೇಳಿದ್ದಾರೆ.
ಬಾಂಬ್ ತಯಾರಿಕೆ ತರಬೇತಿ ಪಡೆದಿದ್ದಾಗಿ ಹೇಳಿಕೆ
2022ರ ಆಗಸ್ಟ್ ನಲ್ಲಿ ಮಹಾರಾಷ್ಟ್ರದ ನಾಂದೇಡ್ ನ ವಿಶೇಷ ಕೇಂದ್ರೀಯ ತನಿಖಾ ದಳ (CBI) ನ್ಯಾಯಾಲಯದ ಮುಂದೆ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ, ಈಗ VHP ಪ್ರಧಾನ ಕಾರ್ಯದರ್ಶಿಯಾಗಿರುವ ಮಿಲಿಂದ್ ಪರಾಂಡೆ ಸೇರಿದಂತೆ RSS ಮತ್ತು VHP ಸದಸ್ಯರು ದೇಶದ ವಿವಿಧೆಡೆ ಸರಣಿ ಬಾಂಬ್ ಸ್ಫೋಟಗಳನ್ನು ಯೋಜಿಸಿದ್ದ ಸಭೆಗಳಲ್ಲಿ ಭಾಗವಹಿಸಿದ್ದರು ಎಂದು ಶಿಂಧೆ ಹೇಳಿಕೊಂಡಿದ್ದರು.
2003ರಲ್ಲಿ ಸುಮಾರು 20 ಮಂದಿಯೊಂದಿಗೆ ಪರಾಂಡೆ ಅವರ ಮಾರ್ಗದರ್ಶನದಲ್ಲಿ ತಮಗೆ ಬಾಂಬ್ ತಯಾರಿಸುವ ತರಬೇತಿ ನೀಡಲಾಗಿತ್ತು ಎಂದೂ ಅವರು ಅಫಿಡವಿಟ್ ನಲ್ಲಿ ಹೇಳಿದ್ದರು.
2006ರ ಎಪ್ರಿಲ್ ನಲ್ಲಿ ನಡೆದ ನಾಂದೇಡ್ ಸ್ಫೋಟ ಪ್ರಕರಣದ ವಿಚಾರಣೆಯ ಭಾಗವಾಗಿ ಈ ಅಫಿಡವಿಟ್ ಸಲ್ಲಿಸಲಾಗಿತ್ತು. RSS ಕಾರ್ಯಕರ್ತ ಲಕ್ಷ್ಮಣ್ ರಾಜ್ಕೊಂಡ್ವಾರ್ ಅವರ ಮನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಅವರ ಪುತ್ರ ನರೇಶ್ ಹಾಗೂ VHP ಕಾರ್ಯಕರ್ತ ಎಂದು ಹೇಳಲಾಗಿದ್ದ ಹಿಮಾಂಶು ಪನ್ಸೆ ಮೃತಪಟ್ಟಿದ್ದರು. ಇದು ‘ಬಾಂಬ್ ಜೋಡಿಸುವ ಕಾರ್ಯಾಚರಣೆ’ಯಾಗಿದ್ದು, ಬಹುಶಃ ಔರಂಗಾಬಾದ್ನ ಮಸೀದಿಯನ್ನು ಗುರಿಯಾಗಿಸಿಕೊಂಡಿರಬಹುದು ಎಂದು CBI ಹೇಳಿತ್ತು.
ಈ ಪ್ರಕರಣದಲ್ಲಿ ಶಿಂಧೆ ಅವರನ್ನು ಸಾಕ್ಷಿಯನ್ನಾಗಿ ಮಾಡಲು ಪ್ರಯತ್ನಿಸಲಾಗಿತ್ತು. ಆರಂಭದಲ್ಲಿ ಅವರ ಅಫಿಡವಿಟ್ ಅನ್ನು ಆಗಿನ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ಎ.ಆರ್. ಧಮೇಚಾ ಅವರು ಪರಿಗಣಿಸಿದ್ದರು. ಆದರೆ, ಮುಂದಿನ ವಿಚಾರಣೆಗೆ ಮುನ್ನ ಅವರನ್ನು ಹಠಾತ್ತನೆ ವರ್ಗಾಯಿಸಲಾಯಿತು. ಬಳಿಕ ಅಧಿಕಾರ ವಹಿಸಿಕೊಂಡ ನ್ಯಾಯಾಧೀಶರು ಶಿಂಧೆ ಅವರ ಅರ್ಜಿಯನ್ನು ತಿರಸ್ಕರಿಸಿದರು.
2025ರ ಜನವರಿ 4ರಂದು ನಾಂದೇಡ್ನ ವಿಚಾರಣಾ ನ್ಯಾಯಾಲಯವು ಪ್ರಕರಣದಲ್ಲಿ ಉಳಿದಿದ್ದ ಎಲ್ಲ ಒಂಭತ್ತು ಆರೋಪಿಗಳನ್ನು ಖುಲಾಸೆಗೊಳಿಸಿತು.
ಮಸೀದಿಗಳ ಮೇಲೆ ದಾಳಿ ಆರೋಪ
ನಂತರ ನೀಡಿದ ಹಲವು ಸಂದರ್ಶನಗಳಲ್ಲಿ ಶಿಂಧೆ ಅವರು, ಪಾಕಿಸ್ತಾನದಲ್ಲಿ ರಹಸ್ಯ ಕಾರ್ಯಾಚರಣೆಗಳಿಗಾಗಿ ತರಬೇತಿ ಪಡೆದಿದ್ದಾಗಿ ಹೇಳಿದ್ದರು. ಭಾರತದಲ್ಲಿ ನಡೆದ ಬಾಂಬ್ ದಾಳಿಗಳ ಹೊಣೆಯನ್ನು ಮುಸ್ಲಿಮರ ಮೇಲೆ ಹೊರಿಸುವ ಯೋಜನೆ ಇತ್ತು ಎಂದೂ ಅವರು ಆರೋಪಿಸಿದ್ದರು. 2003–04ರಲ್ಲಿ ಜಲ್ನಾ, ಪೂರ್ಣ ಮತ್ತು ಪರ್ಭಣಿಯಲ್ಲಿನ ಮಸೀದಿಗಳ ಮೇಲೆ ತಮ್ಮೊಂದಿಗೆ ತರಬೇತಿ ಪಡೆದವರು ಬಾಂಬ್ ದಾಳಿ ನಡೆಸಿದ್ದರು ಎಂದೂ ಶಿಂಧೆ ಆರೋಪಿಸಿದ್ದರು.
ಆರಂಭಿಕ ಸಿಬಿಐ ತನಿಖೆಗಳಲ್ಲಿ ಈ ಆರೋಪಗಳನ್ನು ಬೆಂಬಲಿಸುವ ದೃಢೀಕರಣ ಪುರಾವೆಗಳು ಲಭ್ಯವಿವೆ ಎಂದು ಹೇಳಲಾಗಿತ್ತು. ಆದರೆ ಪ್ರಕರಣಗಳು ನ್ಯಾಯಾಲಯದ ಮುಂದೆ ಬಂದ ಬಳಿಕ, ಪ್ರಸ್ತುತ ಭಾರತೀಯ ಜನತಾ ಪಕ್ಷದ (BJP) ನೇತೃತ್ವದ ಸರಕಾರದ ಅವಧಿಯಲ್ಲಿಯೇ ಎಲ್ಲ ಪ್ರಕರಣಗಳಲ್ಲೂ ಆರೋಪಿಗಳು ಖುಲಾಸೆಗೊಂಡಿದ್ದಾರೆ.
ಶಿಂಧೆ ಅವರ ಆರೋಪಗಳಿಗೆ ಆರ್ಎಸ್ಎಸ್ ಮತ್ತು ವಿಎಚ್ಪಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಾಂದೇಡ್ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿದ ಬಳಿಕ, VHP ಈ ತೀರ್ಪನ್ನು ಕಾಂಗ್ರೆಸ್ಗೆ ದೊಡ್ಡ ಹಿನ್ನಡೆ ಎಂದು ಬಣ್ಣಿಸಿತ್ತು.
RSS ಕುರಿತು ಹೊಸಬಾಳೆ ಹೇಳಿಕೆ
2026ರ ಎಪ್ರಿಲ್ ನಲ್ಲಿ ವಾಷಿಂಗ್ಟನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ RSS ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮಾತನಾಡಿದ್ದರು. ಈ ವೇಳೆ, RSS ಅನ್ನು ಅಮೆರಿಕದ ಬಿಳಿಯರ ಪ್ರಾಬಲ್ಯವಾದಿ ಸಂಘಟನೆಗಳಿಗೆ ಹೋಲಿಸಬಹುದೇ ಎಂದು ಅವರಿಗೆ ಪ್ರಶ್ನಿಸಲಾಯಿತು.
ಇದಕ್ಕೆ ಉತ್ತರಿಸಿದ ಹೊಸಬಾಳೆ, RSSಗೂ ಅಮೆರಿಕದ ಬಿಳಿಯರ ಪ್ರಾಬಲ್ಯವಾದಿ ಸಂಘಟನೆ ‘ಕು ಕ್ಲಕ್ಸ್ ಕ್ಲಾನ್’ಗೂ ಹೋಲಿಕೆ ಸಾಧ್ಯವಿಲ್ಲ ಎಂದು ಹೇಳಿದರು. RSS ಅನ್ನು ಹಿಂದೂ ಪ್ರಾಬಲ್ಯವಾದಿ ಅಥವಾ ಮುಸ್ಲಿಂ ವಿರೋಧಿ ಸಂಘಟನೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದೂ ಅವರು ಪ್ರತಿಕ್ರಿಯಿಸಿದ್ದರು.
ಇತ್ತೀಚಿನ ತಿಂಗಳುಗಳಲ್ಲಿ ಖರ್ಗೆ ಅವರು RSS ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. RSS ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಬರೆದಿದ್ದ ಮುಕ್ತ ಪತ್ರದಲ್ಲಿ, ಸಂಘಟನೆಯ ಕಾನೂನು ಸ್ಥಿತಿ, ಹಣಕಾಸು, ಸಾಂಸ್ಥಿಕ ರಚನೆ ಮತ್ತು ತೆರಿಗೆ ಅನುಸರಣೆ ಸ್ಥಿತಿಗೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸುವಂತೆ ಅವರು ಒತ್ತಾಯಿಸಿದ್ದರು. ಖರ್ಗೆ ಅವರಿಗೆ ಬರೆದಿರುವ ಪತ್ರವು ನ್ಯಾಯಾಲಯದ ಮುಂದೆ ತಾವು ಈ ಹಿಂದೆ ಮಾಡಿದ್ದ ಹಕ್ಕುಗಳನ್ನೇ ಪುನರುಚ್ಚರಿಸುತ್ತದೆ ಎಂದು ಶಿಂಧೆ ಹೇಳಿದ್ದಾರೆ.
ಹಲವು ಪ್ರಕರಣಗಳ ಕುರಿತು ಆರೋಪ
ಅಜ್ಮೀರ್ ಶರೀಫ್ ದರ್ಗಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ RSS ನಾಯಕ ಇಂದ್ರೇಶ್ ಕುಮಾರ್ ವಿರುದ್ಧವೂ ಶಿಂಧೆ ತಮ್ಮ ಪತ್ರದಲ್ಲಿ ಆರೋಪ ಮಾಡಿದ್ದಾರೆ. 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ವಿಚಾರಣೆ ಎದುರಿಸಿ ಅಂತಿಮವಾಗಿ ಖುಲಾಸೆಗೊಂಡಿದ್ದ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ಕರ್ನಲ್ ಪ್ರಸಾದ್ ಪುರೋಹಿತ್ ವಿರುದ್ಧವೂ ಅವರು ಆರೋಪಗಳನ್ನು ಮಾಡಿದ್ದಾರೆ.
1998ರ ಪೋಖ್ರಾನ್ ಪರೀಕ್ಷೆಗಳು, ಕಾರ್ಗಿಲ್ ಯುದ್ಧ, 2002ರ ಗುಜರಾತ್ ಹತ್ಯಾಕಾಂಡ, 2019ರ ಪುಲ್ವಾಮಾ ದಾಳಿ ಹಾಗೂ 370ನೇ ವಿಧಿ ರದ್ದತಿ ಸೇರಿದಂತೆ ಹಲವು ವಿಚಾರಗಳಲ್ಲಿ BJP ಮತ್ತು RSS ನಾಯಕರ ವಿರುದ್ಧವೂ ಶಿಂಧೆ ತಮ್ಮ ಪತ್ರದಲ್ಲಿ ಹಲವು ಆರೋಪಗಳನ್ನು ಮಾಡಿದ್ದಾರೆ.
ಸೌಜನ್ಯ: thewire.in