ಬಿಡದಿ ಟೌನ್‍ಶಿಪ್ ವಿರೋಧಿಸಿ ಜೆಡಿಎಸ್-ಬಿಜೆಪಿ ನೇತೃತ್ವದ ಪಾದಯಾತ್ರೆಗೆ ತಡೆ: ಆ.18ರಂದು ಬೆಂಗಳೂರಿನಲ್ಲಿ ಹೋರಾಟ

Update: 2026-08-10 20:07 IST


ಬೆಂಗಳೂರು : ರಾಜ್ಯ ಸರಕಾರದ ಬಿಡದಿ ಟೌನ್‍ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್-ಬಿಜೆಪಿ ನಡೆಸುತ್ತಿದ್ದ ಪಾದಯಾತ್ರೆಗೆ ಪೊಲೀಸರು ತಡೆ ಹಾಕಿರುವ ಹಿನ್ನೆಲೆ ಆ.18ರಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಜೆಡಿಎಸ್ ಪ್ರಕಟಿಸಿದೆ.

ರವಿವಾರ ಇಲ್ಲಿನ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ವರೆಗಿನ ಪಾದಯಾತ್ರೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ನಾಯಕರು ಚಾಲನೆ ನೀಡಿದ್ದರು. ಒಟ್ಟು ಮೂರು ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಎರಡನೇ ದಿನ ಸೋಮವಾರ ಪಾದಯಾತ್ರೆಯು ಬಿಡದಿಯ ಸಜ್ಜನ್‍ರಾವ್ ವೃತ್ತದಿಂದ ಆರಂಭಗೊಂಡು ಅಲ್ಲಿಂದ ಜೆ.ಕೆ ಟೈರ್ ಗೇಟ್ ಹಾಗೂ ಹೆದ್ದಾರಿ ಮುಖಾಂತರ ನೈಸ್ ರೋಡ್ ಜಂಕ್ಷನ್ ಸಾಗಿತು.

ಅಲ್ಲಿಂದ ಕಣಮಿಣಿಕೆಯ ಬಳಿ ಪೊಲೀಸರು ಪಾದಯಾತ್ರೆಯನ್ನು ತಡೆದ ಹಿನ್ನಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ನಾವು ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ. ಇಂದಿನ ಪ್ರತಿಭಟನೆಯನ್ನು ಶಾಂತಿಯುತವಾಗಿ ಕೈಬಿಡಲಾಗಿದೆ. ಆ.18 ರಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಘೋಷಣೆ ಮಾಡಿದರು.

ಇದಕ್ಕೂ ಮೊದಲು ಮಳೆಯಲ್ಲಿಯೇ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಹೆಜ್ಜೆ ಹಾಕಿ ಗಮನ ಸೆಳೆದರು. ಈ ವೇಳೆ ಮಾತನಾಡಿದ ನಿಖಿಲ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿ ಎಕರೆಗೆ 3 ಕೋಟಿ ರೂ. ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ನೀವು 2 ಕೋಟಿ ರೂ. ಕೊಡಿ. ಅದಕ್ಕೆ ಬೇಕಾಗುವ ಸಾವಿರಾರು ಕೋಟಿ ಪ್ರಾಧಿಕಾರದ ಬಳಿ ಇದೆಯೇ ಎಂಬುದನ್ನು ತೋರಿಸಿ ಎಂದು ಸವಾಲು ಹಾಕಿದರು.

ಪಾದಯಾತ್ರೆಯಲ್ಲಿ ಮಾಜಿ ಸಚಿವ ಪುಟ್ಟರಾಜು, ಶಾಸಕರಾದ ಹರೀಶ್‍ಗೌಡ, ಶರಣಗೌಡ ಕುಂದಪುರ, ಎ.ಮಂಜು, ಜೆಡಿಎಸ್ ಸೇರಿದಂತೆ ಹಲವಾರು ನಾಯಕರು, ರೈತರು ಪಾಲ್ಗೊಂಡಿದ್ದರು.


ರಾಜ್ಯ ಸರಕಾರ ತಕ್ಷಣ ಕೈಬಿಡಬೇಕು: ಎಚ್.ಡಿ.ದೇವೇಗೌಡ

ಅನ್ನದಾತರ ಭೂಮಿ ಸ್ವಾಧೀನಪಡಿಸಿಕೊಂಡು ಬಿಡದಿ ಟೌನ್‍ಶಿಪ್ ನಿರ್ಮಿಸುವ ಯೋಜನೆಯನ್ನು ರಾಜ್ಯ ಸರಕಾರ ತಕ್ಷಣ ಕೈಬಿಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎಚ್ಚರಿಕೆ ನೀಡಿದರು.

ಸೋಮವಾರ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯ ಬಿಜಿಎಸ್ ವೃತ್ತದಿಂದ ಆರಂಭವಾದ 2ನೆ ದಿನದ ಜೆಡಿಎಸ್ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಡಿದ ಅವರು, ರೈತರಿಂದ ಬಲವಂತವಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ನಾವು ಬಿಡುವುದಿಲ್ಲ. ಭೂಮಿಯ ಬೆಲೆ ಹೆಚ್ಚಿಸಿ ರೈತರಿಗೆ ಆಮಿಷವೊಡ್ಡಲಾಗುತ್ತಿದೆ ಎಂದು ಆರೋಪಿಸಿದರು.

ನನ್ನ ದೇಹಕ್ಕೆ ವಯಸ್ಸಾಗಿದೆಯೇ ಹೊರತು ಬುದ್ಧಿಗೆ ವಯಸ್ಸಾಗಿಲ್ಲ. 90ರ ಇಳಿವಯಸ್ಸಿನಲ್ಲೂ ರೈತರ ಪರವಾಗಿ ಹೋರಾಡುವ ಶಕ್ತಿ ನನಗಿದೆ. ಬಿಡದಿಯ ಕಿಂಚಿತ್ತೂ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಅವರು ತಿಳಿಸಿದರು.


ಪಾದಯಾತ್ರೆಯಲ್ಲಿ ಯಾವ ರೈತರೂ ಇಲ್ಲ: ಡಿ.ಕೆ.ಶಿವಕುಮಾರ್

ಬಿಡದಿ ಟೌನ್ ಶಿಪ್ ವಿರೋಧಿಸಿ ಬಿಜೆಪಿ-ಜೆಡಿಎಸ್ ಮಾಡುತ್ತಿರುವ ಪಾದಯಾತ್ರೆಯಲ್ಲಿ ಯಾವ ರೈತರೂ ಇಲ್ಲ. ತಮ್ಮ ಮನೆಯ ಹುಡುಗನ (ನಿಖಿಲ್ ಕುಮಾರಸ್ವಾಮಿ) ರಾಜಕೀಯ ಭವಿಷ್ಯಕ್ಕಾಗಿ ಮಾಡುತ್ತಿರುವ ಹೋರಾಟ ಇದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಸೋಮವಾರ ಮಾಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಕ್ಷೇತ್ರದಲ್ಲಿರುವ ಪಕ್ಷದ ಕಾರ್ಯಕರ್ತರನ್ನು ಕರೆದುಕೊಂಡು ಬಂದು ಪಾದಯಾತ್ರೆ ಕೈಗೊಂಡಿದ್ದಾರೆ. ಹೋರಾಟ ಮತ್ತು ಪ್ರತಿಭಟನೆ ಪ್ರಜಾಪ್ರಭುತ್ವದಲ್ಲಿ ಅವರಿಗಿರುವ ಹಕ್ಕು. ಅದನ್ನು ನಾನು ಬೇಡ ಎನ್ನುವುದಿಲ್ಲ ಎಂದರು.

ನೈಸ್ ಮತ್ತು ಬಿಡದಿ ಯೋಜನೆ ಒಂದೇ ರೀತಿಯ ಯೋಜನೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರೆಡೂ ಯೋಜನೆಗಳಿಗೆ ಅವರೇ ಸಹಿ ಹಾಕಿದ್ದು ಅವರೇ. ನೈಸ್ ಯೋಜನೆ ಮಾಡಿದವರು ಯಾರು? ಅವರೇ ಮಾಡಿದ್ದು. ಆದರೆ ಅದರಿಂದ ಒಳ್ಳೇದಾಗಿದೆ. ರಸ್ತೆ ಆಗಿರುವುದರಿಂದ ಬೆಂಗಳೂರು ಇವತ್ತು ಉಳಿದುಕೊಂಡಿದೆ. ಅವರು ಮಾಡಿದ್ದು ತಪ್ಪು ಎಂದಲ್ಲ. ಆದರೆ ಅದರಲ್ಲಿ ಅವರ ಸ್ವಾರ್ಥವಿದೆ. ಅದನ್ನೆಲ್ಲಾ ಸಮಯ ಬಂದಾಗ ಮಾತನಾಡುವೆ ಎಂದು ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News