ತುಮಕೂರಲ್ಲೇ ಬೆಂಗಳೂರಿನ 2ನೇ ಏರ್ಪೋರ್ಟ್ ಆದರೆ 20 ಜಿಲ್ಲೆಗಳಿಗೆ ಅನುಕೂಲ : ಜಿ.ಪರಮೇಶ್ವರ್
ಬೆಂಗಳೂರು : ತುಮಕೂರಿನ ಕೆಲವು ತಾಲೂಕುಗಳಲ್ಲಿ ಇನ್ನೂ ಮಳೆಯಾಗದೇ ಇರುವುದರಿಂದ ಗಂಭೀರ ಬರ ಪರಿಸ್ಥಿತಿ ಎದುರಾಗಿದೆ. ಇಂದು ಮತ್ತು ನಾಳೆ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನೆ ನಡೆಸಲಿದ್ದೇನೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದರು.
ಇಂದು ತಮ್ಮ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿಗಳು ಮತ್ತು ನಾನು 3 ವಿಭಾಗಗಳನ್ನು ಮಾಡಿ, ಪ್ರತಿಯೊಂದು ತಾಲೂಕಿನ ಬರ ಪರಿಸ್ಥಿತಿ ಹೇಗಿದೆ ಎಂದು ಅವಲೋಕನೆ ಮಾಡಿದ್ದೇವೆ. ನಾನು ನಾಲ್ಕೈದು ಜಿಲ್ಲೆಗಳಿಗೆ ಭೇಟಿ ಪರಿಶೀಲನೆಯನ್ನು ನಡೆಸಿದ್ದೇನೆ. ತುಮಕೂರು ಜಿಲ್ಲೆಯದ್ದು ಮಾಡಿದ್ದೆ. ಆದರೆ, ಶಿರಾ, ಚಿಕ್ಕನಾಯಕನಹಳ್ಳಿ, ಪಾವಗಡ ಸೇರಿದಂತೆ ಇನ್ನೂ ಕೆಲವು ತಾಲೂಕುಗಳಲ್ಲಿ ಗಂಭೀರ ಬರ ಪರಿಸ್ಥಿತಿ ಏರ್ಪಟ್ಟಿದ್ದು. ಇಂದು ಮತ್ತು ನಾಳೆ ಅಲ್ಲಿಗೆ ತೆರಳಿ ಖುದ್ದು ಪರಿಶೀಲನೆ ನಡೆಸಲಿದ್ದೇನೆ ಎಂದು ಮಾಹಿತಿ ನೀಡಿದರು.
ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳನ್ನು ಬಿಟ್ಟರೆ ಬೇರೆ ಯಾವುದೇ ಕಡೆಗಳಲ್ಲಿ ಹೇಳುವಷ್ಟು ಮಳೆಯಾಗಿಲ್ಲ. ಕೆಆರ್ಎಸ್, ಕಬಿನಿ ಜಲಾಶಯಗಳಲ್ಲಿ ನೀರು ಕೊಂಚ ಹೆಚ್ಚಾಗಿದೆ. ಮಹಾರಾಷ್ಟ್ರ ಭಾಗದಲ್ಲಿ ಮಳೆಯಾದ್ದರಿಂದ ಉತ್ತರ ಕರ್ನಾಟಕದ ಆಲಮಟ್ಟಿ, ನಾರಾಯಣಪುರ ಡ್ಯಾಂಗಳು ಸ್ವಲ್ಪ ಮಟ್ಟಿಗೆ ತುಂಬಿದೆ. ಆದರೆ, ಬಯಲು ಪ್ರದೇಶದಲ್ಲಿ ಗಂಭೀರ ಪರಿಸ್ಥಿತಿ ಇದೆ. ಹೀಗಾಗಿ ಬರ ಪರಿಸ್ಥಿತಿಯ ಸಂಪೂರ್ಣ ಅವಲೋಕನ ನಡೆಸುತ್ತೇವೆ. ಈಗಾಗಲೇ ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಸದನದಲ್ಲೂ ಈ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಎಂದರು.
ಖಾತೆ ಹಂಚಿಕೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ʼಗೊಂದಲ ಅಂತೇನಿಲ್ಲ, ಮುಖ್ಯಮಂತ್ರಿಗಳು ನಿನ್ನೆ ಹೈಕಮಾಂಡ್ ಜೊತೆಗೆ ಚರ್ಚೆ ಮಾಡಿದ್ದಾರೆ. ಹೊಸದಾಗಿ ಸಚಿವರು ಆದವರಿಗೆ ಪ್ರಾರಂಭದಲ್ಲಿ ಗೊಂದಲಗಳು ಆಗುವುದು ಸಹಜ. ನಂತರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿವರಣೆಯನ್ನು ನೀಡುತ್ತಾರೆ. ನಮಗೂ ಕೂಡ ಮೊದಲ ಬಾರಿ ಮಂತ್ರಿಯಾದಾಗ ಹಾಗೆಯೇ ಆಗಿತ್ತು. ಸದನದಲ್ಲೂ ಉತ್ತರ ನೀಡಲು ಅವರು ಸಮರ್ಥರಿದ್ದಾರೆ. ಯಾವುದೇ ರೀತಿಯಲ್ಲೂ ಸಮಸ್ಯೆಯಾಗುವುದಿಲ್ಲʼ ಎಂದು ಸ್ಪಷ್ಟಪಡಿಸಿದರು.
ನೈಸ್ ರಸ್ತೆ ವಿಚಾರವಾಗಿ ಕುಮಾರಸ್ವಾಮಿ ಅವರು ಟೋಲ್ ಕಟ್ಟಬೇಡಿ ಎಂದು ಜನರಿಗೆ ಕರೆ ಕೊಡುತ್ತಿರುವ ಬಗ್ಗೆ ಮಾಧ್ಯಮದರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದೇನು ಹೊಸತಲ್ಲ, ಹಿಂದಿನಿಂದಲೂ ವಿರೋಧಿಸುತ್ತೇ ಬಂದಿದ್ದಾರೆ. ಆದಷ್ಟು ಬೇಗ ಪ್ರಾಜೆಕ್ಟ್ ಅನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ನನ್ನನ್ನೇ ಉಪಸಮಿತಿಯ ಅಧ್ಯಕ್ಷನಾಗಿ ಮಾಡಿದ್ದಾರೆ. ಈಗಾಗಲೇ 7-8 ಸಭೆಗಳನ್ನು ಮಾಡಿದ್ದೇನೆ. ಅಲ್ಲಿ ಎ, ಬಿ, ಸಿ ಎಂದು ಮೂರು ವಿಭಾಗಗಳನ್ನು ಮಾಡಿದ್ದೇವೆ. ಅಲ್ಲಿ ಯಾವ ರೀತಿಯ ಸಮಸ್ಯೆಗಳು ಆಗಿವೆ ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ. ಇಷ್ಟು ವರ್ಷಗಳ ನಂತರ ಯೋಜನೆಯನ್ನು ನಿಲ್ಲಿಸಲು ಆಗುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಇದೆಲ್ಲದರ ಬಗ್ಗೆ ಪರಿಶೀಲಿಸಿ, ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ. ಅದರಲ್ಲಾದ ಉಪಯೋಗ, ದುರುಪಯೋಗದ ಬಗ್ಗೆ ಮುಂದೆ ಪರಿಶೀಲನೆ ಮಾಡುತ್ತಾರೆ. ಈಗ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.
ಕೇಂದ್ರ ಸಚಿವ ಸೋಮಣ್ಣ ಅವರು 2ನೇ ಏರ್ಪೋರ್ಟ್ ತುಮಕೂರಿನಲ್ಲೇ ಮಾಡಬೇಕು ಎಂದು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ನಾನು ಈ ಬಗ್ಗೆ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ತಾಂತ್ರಿಕವಾಗಿ ಮತ್ತು ಅದರ ಉಪಯೋಗ ಎಷ್ಟರ ಮಟ್ಟಿಗೆ ಆಗಲಿದೆ ಎನ್ನುವುದನ್ನು ನೋಡಬೇಕಾಗುತ್ತದೆ. ತುಮಕೂರಿನಲ್ಲೇ ಆದರೆ 20 ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. ಈಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಕನೆಕ್ಟಿವಿಟಿ ಮಾಡಲು ಸುಲಭವಾಗುತ್ತದೆ. ಆದರೆ ಡಿಜಿಸಿಎ ನವರು ತಾಂತ್ರಿಕವಾಗಿ ಇದು ಸಾಧ್ಯನಾ, ಇಲ್ಲವಾ ಎಂಬುದರ ಬಗ್ಗೆ ಪರಿಶೀಲಿಸುತ್ತಾರೆ ಎಂದು ತಿಳಿಸಿದರು.