ಜೈಲು ಅಧಿಕಾರಿಗಳೇ ಪರೋಲ್ ಅರ್ಜಿ ನಿರ್ಧರಿಸಿದರೆ ನ್ಯಾಯಾಲಯದ ಮೇಲಿನ ಹೊರೆ ಇಳಿಯಲಿದೆ : ಹೈಕೋರ್ಟ್ ಮೌಖಿಕ ಅಭಿಪ್ರಾಯ
ಬೆಂಗಳೂರು : ಸಜಾಬಂದಿಗಳು ಪರೋಲ್ ಕೋರಿ ಸಲ್ಲಿಸುವ ಮನವಿಗಳ ಸಂಬಂಧ ಜೈಲು ಅಧಿಕಾರಿಗಳೇ ಸೂಕ್ತ ಆದೇಶ ಹೊರಡಿಸಿದರೆ, ನ್ಯಾಯಾಲಯದ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.
ಪರೋಲ್ ಮಂಜೂರಾತಿಗೆ ಕೋರಿದ ಸುಮಾರು 60 ಅರ್ಜಿಗಳು ಸೋಮವಾರ ಒಂದೇ ದಿನ ವಿಚಾರಣೆಗೆ ನಿಗದಿಯಾಗಿರುವುದನ್ನು ಗಮನಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರ ಮಧ್ಯಾಹ್ನದ ಕಲಾಪದ ವೇಳೆ ನ್ಯಾಯಮೂರ್ತಿಗಳು ಪರೋಲ್ ಮಂಜೂರಾತಿ ಕೋರಿದ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡರು. ಒಂದೂವರೆ ಗಂಟೆ ಸಮಯದಲ್ಲಿ 25ಕ್ಕೂ ಅಧಿಕ ಪರೋಲ್ ಅರ್ಜಿಗಳ ವಿಚಾರಣೆ ನಡೆಸಿ ವಿಲೇವಾರಿ ಮಾಡಿದರು. ಸಂಜೆ 4.50 ಸಮಯವಾದರೂ ಪೆರೋಲ್ ಅರ್ಜಿಗಳ ವಿಚಾರಣೆ ಅಂತ್ಯವಾಗಿರಲಿಲ್ಲ.
ಈ ಹಂತದಲ್ಲಿ ಇನ್ನೆಷ್ಟು ಅರ್ಜಿಗಳಿವೆ, ಇನ್ನೂ ಮುಗಿದಿಲ್ಲವೇ ಎಂದು ಸರಕಾರಿ ವಕೀಲರನ್ನು ಕೇಳಿದ ನ್ಯಾಯಮೂರ್ತಿಗಳು, ವಿಚಾರಣಾ ಪಟ್ಟಿಯಲ್ಲಿನ ಪರೋಲ್ ಅರ್ಜಿಗಳ ಸಂಖ್ಯೆ ಗಮನಿಸಿದರು. ಆಗ 60 ಅರ್ಜಿಗಳು ವಿಚಾರಣೆ ನಿಗದಿಯಾಗಿರುವುದನ್ನು ಕಂಡ ನ್ಯಾಯಮೂರ್ತಿಗಳು ಸರಕಾರಿ ವಕೀಲರನ್ನು ಕುರಿತು, ಇಷ್ಟೆಲ್ಲ ಅರ್ಜಿಗಳನ್ನು ವಿಚಾರಣೆ ನಡೆಸಬೇಕಾದರೆ ಇಡೀ ದಿನದ ಸಮಯಬೇಕಾಗುತ್ತದೆ. ಜೈಲು ಅಧಿಕಾರಿಗಳೇ, ಪರೊಲ್ ಕೋರಿದ ಅರ್ಜಿಗಳನ್ನು ಪರಿಗಣಿಸಿ ಕಾನೂನು ಪ್ರಕಾರ ಆದೇಶಿಸಬೇಕು. ಇದರಿಂದ, ನ್ಯಾಯಾಲಯಕ್ಕೆ ಬರುವ ಅರ್ಜಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಇಲ್ಲವಾದರೆ ನ್ಯಾಯಾಲಯದ ಮೇಲೆ ಹೆಚ್ಚು ಹೊರೆಯಾಗುತ್ತದೆ. ಈ ಬಗ್ಗೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿ ಎಂದು ಸರಕಾರಿ ವಕೀಲರಿಗೆ ನಿರ್ದೇಶಿಸಿದರು.
11 ವರ್ಷ ನಾಪತ್ತೆಯಾಗಿದ್ದ ಕೈದಿಗೆ ಪರೋಲ್ ನಿರಾಕರಣೆ:
ಸಜಾಬಂದಿಯೊಬ್ಬನಿಗೆ ಪರೋಲ್ ಕೋರಿ ಆತನ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರು ಹಾಜರಾಗಿ, 90 ದಿನಗಳ ಪರೋಲ್ ಮಂಜೂರಾತಿಗೆ ಕೋರಿದರು. ಆಗ ನ್ಯಾಯಮೂರ್ತಿಗಳು, ಜೈಲು ಅಧಿಕಾರಿಗಳು ಏಕೆ ಪರೋಲ್ ನಿರಾಕರಿಸಿದ್ದಾರೆ ಎಂದು ಪ್ರಶ್ನಿಸಿದರು.
ವಕೀಲರು ಉತ್ತರಿಸಿ, ಈ ಹಿಂದೆ 30 ದಿನಗಳ ಕಾಲ ಪರೋಲ್ ಮೇಲೆ ಬಿಡುಗಡೆಯಾಗಿದ್ದ ಕೈದಿ 11 ವರ್ಷ ತಲೆಮರೆಸಿಕೊಂಡಿದ್ದರು. ಕಳೆದ ವರ್ಷವಷ್ಟೇ ಪೊಲೀಸರು ಆತನನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸಿದ್ದಾರೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, 30 ದಿನ ಪರೋಲ್ ನೀಡಿದ್ದಕ್ಕೆ 11 ವರ್ಷ ತಲೆಮರೆಸಿಕೊಂಡಿದ್ದಾನೆ. ಇದೀಗ ಮತ್ತೆ ಪರೋಲ್ ನೀಡಿದರೆ ಮತ್ತೆ 11 ವರ್ಷ ನಾಪತ್ತೆಯಾಗುತ್ತಾನೆ. ಅದಕ್ಕೆ ಅವಕಾಶ ಕೊಡಲಾಗುವುದಿಲ್ಲ. ಈ ಕೈದಿ ಪರೋಲ್ಗೆ ಅರ್ಹನಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದರು.