ಮೂರನೇ ವ್ಯಕ್ತಿಯ ದೂರು ಆಧರಿಸಿ ಜಾತಿ ಪ್ರಮಾಣಪತ್ರ ರದ್ದುಪಡಿಸುವ ಅಧಿಕಾರ ʼಡಿಸಿವಿಸಿʼಗೆ ಇಲ್ಲ : ಹೈಕೋರ್ಟ್

Update: 2026-08-22 19:23 IST

ಬೆಂಗಳೂರು : ಅಪರಿಚಿತ ಅಥವಾ ಮೂರನೇ ವ್ಯಕ್ತಿಯ ದೂರು ಆಧರಿಸಿ ಯಾವುದೇ ವ್ಯಕ್ತಿಯ ಜಾತಿ ಪ್ರಮಾಣಪತ್ರ ರದ್ದುಪಡಿಸುವ ಅಧಿಕಾರ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ (ಡಿಸಿವಿಸಿ) ಇಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಮೂರನೇ ವ್ಯಕ್ತಿಯೊಬ್ಬರು ನೀಡಿದ್ದ ದೂರು ಆಧರಿಸಿ ತಮ್ಮ ಜಾತಿ ಪ್ರಮಾಣಪತ್ರ ರದ್ದುಪಡಿಸಿ 2021ರ ಜುಲೈ 15ರಂದು ಡಿಸಿವಿಸಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಚಿಕ್ಕೇನಹಳ್ಳಿ ಗ್ರಾಮದ ಬೈರಯ್ಯ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಎಂ.ಜಿ.ಎಸ್. ಕಮಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ (ನೇಮಕಾತಿ ಹಾಗೂ ಇತರ ವಿಷಯಕ್ಕಾಗಿ ಮೀಸಲಾತಿ) ಕಾಯ್ದೆ 1990ರ ಸೆಕ್ಷನ್ 4ಎ ಅಡಿ ತಹಶೀಲ್ದಾರ್ ವಿತರಿಸುವ ಜಾತಿ ಪ್ರಮಾಣಪತ್ರವನ್ನು ಮೂರನೇ ವ್ಯಕ್ತಿಯ ದೂರು ಆಧರಿಸಿ ರದ್ದುಪಡಿಸುವ ಅಧಿಕಾರ ಡಿಸಿವಿಸಿಗೆ ಇಲ್ಲ. ಆದರೆ, ಕಾಯ್ದೆಯ ಸೆಕ್ಷನ್ 4ಎಫ್ ಅಡಿ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಪ್ರಕರಣವೇನು?

ಅರ್ಜಿದಾರ ಬೈರಯ್ಯ ಅವರಿಗೆ 1977ರ ಜೂನ್ 8ರಂದು ಸ್ಥಳೀಯ ತಹಶೀಲ್ದಾರ್ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದ 'ಜೇನು ಕುರುಬ' ಜಾತಿ ಪ್ರಮಾಣಪತ್ರ ನೀಡಿದ್ದರು. ಜಾತಿ ಪ್ರಮಾಣಪತ್ರ ವಿತರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸ್ಥಳೀಯ ವ್ಯಕ್ತಿಯೊಬ್ಬರು ನಾಗರಿಕ್ಕ ಹಕ್ಕು ಜಾರಿ ನಿರ್ದೇಶನಾಲಯ ಘಟಕಕ್ಕೆ (ಸಿಆರ್‌ಇ ಸೆಲ್) ದೂರು ಕೊಟ್ಟಿದ್ದರು. ವಿಚಾರಣೆ ನಡೆಸಿದ್ದ, ಸಿ‌ಆರ್‌ಇ ಸೆಲ್ ವರದಿ ಕೊಟ್ಟಿತ್ತು. ಅದನ್ನು ಪರಿಶೀಲಿಸಿದ್ದ ಡಿಸಿವಿಸಿ ಬೈರಯ್ಯ ಅವರ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸಿ ಆದೇಶಿಸಿತ್ತು. ಇದನ್ನು ಬೈರಯ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News