ಸಿಎಂ ಅವರಿಂದಲೇ ರಾಮಚಂದ್ರರಾವ್ ಅಮಾನತು ವಾಪಸ್ ನಿರ್ಧಾರ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು, ಮೇ 7 : ಡಿಜಿಪಿ ರಾಮಚಂದ್ರ ರಾವ್ ಅಮಾನತು ವಾಪಸ್ ನಿರ್ಧಾರ ಮುಖ್ಯಮಂತ್ರಿ ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಚಂದ್ರರಾವ್ ಈ ತಿಂಗಳ ಕೊನೆಗೆ ನಿವೃತ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರ ಅನುಮತಿ ಪಡೆದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಿದರು.
ಅಮಾನತು ವಾಪಸ್ ಪಡೆದಿದ್ದು ಸರಿ ತಪ್ಪು ಎಂದು ನಾನು ಹೇಳಲು ಬರುವುದಿಲ್ಲ. ಅದು ಡಿಪಿಆರ್ ಮತ್ತು ಮುಖ್ಯಮಂತ್ರಿಗಳಿಗೆ ಬರುತ್ತದೆ. ಅವರು ತೀರ್ಮಾನ ಮಾಡಿದ್ದಾರೆ. ಸಿಎಂ ಬಳಿ ರಾಮಚಂದ್ರರಾವ್ ವಿವರಣೆ ನೀಡಿರುವುದು ನನಗೆ ಗೊತ್ತಿತ್ತು. ನಾನು ನಿವೃತ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಅಮಾನತು ನಿರ್ಧಾರ ಪರಿಶೀಲಿಸಿ ಎಂದು ಮನವಿ ಮಾಡಿದ್ದರು. ಮನವಿಯಲ್ಲಿ ತನಿಖೆಯನ್ನು ಮುಂದುವರಿಸಿ ಎಂದು ಕೇಳಿಕೊಂಡಿದ್ದರು. ಪ್ರಕರಣ ಅಂತಿಮ ಆಗುವವರೆಗೂ ತನಿಖೆ ನಡೆಯುತ್ತದೆ. ತನಿಖೆಯಲ್ಲಿ ಬಂದ ವರದಿ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅನೇಕ ಸಮಯದಲ್ಲಿ ನಿವೃತ್ತಿ ಆದ ಮೇಲೂ ಪಿಂಚಣಿ ತಡೆ ಹಿಡಿದಿರುವುದು ನೋಡಿದ್ದೇವೆ ಎಂದು ವಿವರಿಸಿದರು.