×
Ad

ಆಗಸ್ಟ್‌ನಲ್ಲಿ ವಿಶೇಷಚೇತನರಿಗೆ ಉದ್ಯೋಗ ಮೇಳ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್

Update: 2026-05-07 19:53 IST

ಬೆಂಗಳೂರು, ಮೇ 7: ವಿಕಲಚೇತನರಿಗೆ ಉದ್ಯೋಗ ಅವಕಾಶ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡುವ ಸಲುವಾಗಿ ಆಗಷ್ಟ್ ತಿಂಗಳಿನಲ್ಲಿ ವಿಶೇಷಚೇತನರಿಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ಗುರುವಾರ ವಿಕಾಸಸೌಧದ ತಮ್ಮ ಕೊಠಡಿಯಲ್ಲಿ ಉದ್ಯೋಗ ಅವಕಾಶ ಕಲ್ಪಿಸುವ ‘ಆದಿದ್ವಾರ’ ಆ್ಯಪ್ ಹಾಗೂ ಉದ್ಯೋಗ ಮೇಳದ ಅಧಿಕೃತ ಲಾಂಛನ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವಿಶೇಷ ಚೇತನರಿಗೆ ವಿಶೇಷ ಉದ್ಯೋಗ ಮೇಳವನ್ನು ಆಗಸ್ಟ್‌ ನಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.

ವಿಕಲಚೇತನರು ಯಾರಿಗೂ ಕಡಿಮೆ ಇಲ್ಲ. ಅವರಿಗೆ ವಿಶೇಷ ಪ್ರತಿಭೆ ಇರುತ್ತದೆ. ಕಾರ್ಪೊರೇಟ್ ಸಂಸ್ಥೆಗಳು ನೇಮಕಾತಿಯ ಸಮಯದಲ್ಲಿ ಅವರಿಗೆ ಸಮಾನ ಅವಕಾಶ ಮತ್ತು ಚಿಕಿತ್ಸೆಯನ್ನು ನೀಡಬೇಕು. ಉದ್ಯೋಗ ಮೇಳದಲ್ಲಿ ತರಬೇತಿ ಪಾಲುದಾರರು ಮತ್ತು ಸಹಾಯಕ ತಂತ್ರಜ್ಞಾನ ಸ್ಟಾರ್ಟ್‍ಅಪ್‍ಗಳೊಂದಿಗೆ ಸಂಪರ್ಕಿಸಲು ದೊಡ್ಡ ವೇದಿಕೆ ಸಿಗಲಿದೆ. ವೃತ್ತಿ ಮಾರ್ಗದರ್ಶನ ಅವಧಿಗಳು, ಕೌಶಲ್ಯ ಮಾರ್ಗ ಜಾಗೃತಿ ಕಾರ್ಯಕ್ರಮಗಳು ಮತ್ತು ತಂತ್ರಜ್ಞಾನ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ ಎಂದರು.

3,000ಕ್ಕೂ ಹೆಚ್ಚು ವಿಶೇಷ ಚೇತನ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇನ್ನೂ, ಅಸಿಸ್ಟೆಕ್ ಫೌಂಡೇಶನ್ (ಎಟಿಎಫ್) ಸಹಯೋಗದೊಂದಿಗೆ ಆದಿದ್ವಾರ ಆ್ಯಪ್ ಮೂಲಕ ಉದ್ಯೋಗಾವಕಾಶಗಳು, ಇಂಟರ್ನ್‍ಶಿಪ್‍ಗಳು, ಕೌಶಲ್ಯ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸದಸ್ಯ ಸುಧಾಮ್ ದಾಸ್ ಮತ್ತು ಎಟಿಎಫ್ ಸಿಇಒ ಪ್ರತೀಕ್ ಮಾಧವ್ ಸೇರಿದಂತೆ ಪ್ರಮುಖರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News