ಬೆಂಗಳೂರು: ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ಧರಣಿ, ತೀವ್ರ ಗದ್ದಲ, ಕೋಲಾಹಲದ ಹಿನ್ನೆಲೆ ವಿಧಾನ ಮಂಡಲದ ಉಭಯ ಸದನಗಳ ಮುಂಗಾರು ಅಧಿವೇಶನವನ್ನು ನಿಗದಿತ ಸಮಯಕ್ಕಿಂತ ಎರಡು ದಿನ ಮುಂಚಿತವಾಗಿ ಸೋಮವಾರವೇ(ಆ.24) ಅನಿರ್ದಿಷ್ಠಾವಧಿಗೆ ಮುಂದೂಡಲಾಗಿದೆ.

ಎಂಟು ದಿನಗಳಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮುಂದಿಟ್ಟುಕೊಂಡು ಉಭಯ ಸದನಗಳಲ್ಲಿ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಹೋರಾಟ ಕೈಗೊಂಡಿದ್ದರು. ಇದರಿಂದ ರಾಜ್ಯದಲ್ಲಿನ ಬರಗಾಲ ಸೇರಿದಂತೆ ಯಾವುದೇ ವಿಚಾರಗಳ ಬಗ್ಗೆ ಚರ್ಚೆಗೆ ಮುಂದಾಗಿರಲಿಲ್ಲ.

ಬಿ.ನಾಗೇಂದ್ರ ರಾಜೀನಾಮೆ ನೀಡಲೇಬೇಕು ಎಂದು ಬಿಜೆಪಿ ಪಟ್ಟು ಹಿಡಿದಿತ್ತು. ರಾಜೀನಾಮೆ ನೀಡದೆ ಬೇರೆ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲು ನಾವು ಸಿದ್ದವಿಲ್ಲ ಎಂಬ ವಿಚಾರವನ್ನು ಸ್ಪಷ್ಟಪಡಿಸಿತ್ತು. ಹಾಗಾಗಿ ಸದನ ಆರಂಭವಾಗುತ್ತಿದ್ದಂತೆ ಘೋಷಣೆ ಮೂಲಕ ಪ್ರತಿನಿತ್ಯ ಸದನ ಕಲಾಪಕ್ಕೆ ಅಡ್ಡಿಪಡಿಸಿತ್ತು.

ಇಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ಬಿ.ನಾಗೇಂದ್ರ ರಾಜೀನಾಮೆಗೆ ಒಪ್ಪಿಗೆ ನೀಡಲಿಲ್ಲ. ಆಡಳಿತ ಪಕ್ಷವೂ ಸಚಿವರನ್ನು ಸಮರ್ಥನೆ ಮಾಡಿಕೊಂಡಿತ್ತು. ಇನ್ನೊಂದೆಡೆ, ಉಭಯ ಸದನದಲ್ಲಿ ಅಹೋರಾತ್ರಿ ಧರಣಿಗೆ ಬಿಜೆಪಿ ಮುಂದಾಗಿತ್ತು. ಅಹೋರಾತ್ರಿ ಧರಣಿಯನ್ನು ತಪ್ಪಿಸುವ ಉದ್ದೇಶದಿಂದ ಆಡಳಿತ ಪಕ್ಷ ಸದನವನ್ನು ಮೊಟಕುಗೊಳಿಸುವ ನಿರ್ಧಾರಕ್ಕೆ ಬಂದಿತ್ತು. ಅದರಂತೆ ಉಭಯ ಸದನಗಳನ್ನು ಅನಿರ್ದಿಷ್ಠಾಧಿಗೆ ಮುಂದೂಡಲಾಗಿದೆ.

ರಾಜ್ಯ ಸರಕಾರದ ನಡೆ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಪೀಕರ್ ಜಿ.ಎಸ್.ಪಾಟೀಲ್ ಅವರು ಸರಿಯಾದ ರೀತಿ ಸದನದ ಕಲಾಪವನ್ನೇ ನಡೆಸಿಲ್ಲ. ಕಾಂಗ್ರೆಸ್ ರಾಜಕೀಯ ಮಾಡಬಹುದು, ನಾವು ಮಾಡುವುದಿಲ್ಲ. ದಲಿತರ ಹಣ ನುಂಗಿದ್ದಾರೆ, ಆ ಹಣ ವಾಪಸಾಗಬೇಕು. ರಾಜ್ಯದಲ್ಲಿನ ಶೇ.5ರಷ್ಟು ಪಾರ್ಕ್‍ಗಳ ಜಾಗವನ್ನು ಲೂಟಿ ಮಾಡುವುದಕ್ಕೆ ಹೊರಟಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಹಿಂಬಾಗಿಲಿನಿಂದ ಓಡಿ ಹೋಗಿದೆ. ಇದು ಭ್ರಷ್ಟರಿಂದ ಭ್ರಷ್ಟರಿಗಾಗಿ ನಡೆಯುತ್ತಿರುವ ಸರಕಾರ ಎಂದು ವಾಗ್ದಾಳಿ ನಡೆಸಿದರು.


ಕೊತ್ವಾಲ್ ಶಿಷ್ಯಂದಿರು: ‘ಸದನದಲ್ಲಿ ಕೊತ್ವಾಲ್ ಶಿಷ್ಯಂದಿರು ಎಂಬ ಭಿತ್ತಿಪತ್ರವನ್ನು ಬಿಜೆಪಿ ಸದಸ್ಯರು ಪ್ರದರ್ಶನ ಮಾಡಿದರು. ಸ್ಪೀಕರ್ ಪೀಠದ ಮುಂದೆ ಭಿತ್ತಿಚಿತ್ರಗಳನ್ನು ಹಿಡಿದು ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದರು. ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಬಿ.ನಾಗೇಂದ್ರ ಇರುವ ಫೋಟೋ ಇದಾಗಿತ್ತು. ಫೋಟೋ ಕಂಡು ಅಸಮಾಧಾನಗೊಂಡ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸ್ಪೀಕರ್ ಅವರ ಮುಖಕ್ಕೆ ಏಕೆ ಹಿಡಿತ್ತಿದ್ದೀಯಾ? ಈ ಕಡೆ ಬಂದು ನಿಂತುಕೊಳ್ಳಿ ಎಂದು ಗದರಿದ ದೃಶ್ಯ ಕಂಡು ಬಂತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor