×
Ad

ಆದಾಯಕ್ಕಿಂತ ಅಧಿಕ ಸಂಪಾದನೆ ಆರೋಪ: ಸರಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ, ಕೋಟ್ಯಾಂತರ ರೂ. ಆಸ್ತಿ, ಸಂಪತ್ತು ಜಪ್ತಿ

Update: 2025-03-06 20:31 IST

ಬೆಂಗಳೂರು: ನಿಗದಿತ ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪ ಪ್ರಕರಣ ಸಂಬಂಧ ಎಂಟು ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ರಾಜ್ಯದ 30ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಈ ವೇಳೆ ಕೋಟ್ಯಾಂತರ ರೂ.ಅಕ್ರಮ ಸಂಪತ್ತು ಬೆಳಕಿಗೆ ಬಂದಿದ್ದು, ಆಧಾರ ರಹಿತ ಆಸ್ತಿ, ವಸ್ತುಗಳನ್ನು ಜಪ್ತಿ ಮಾಡಿ ನೋಟಿಸ್ ನೀಡಲಾಗಿದೆ.

ಗುರುವಾರ ಬೆಂಗಳೂರಿನ ಬಿಬಿಎಂಪಿಯ ವಲಯ ಮುಖ್ಯ ಇಂಜಿನಿಯರ್ ಟಿ.ಡಿ.ನಂಜುಂಡಪ್ಪ ನಿವಾಸ ಸೇರಿದಂತೆ ವಿವಿಧ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಕೆಲವು ಬಿಬಿಎಂಪಿ ದಾಖಲೆಗಳು ಮನೆಯಲ್ಲಿ ಸಿಕ್ಕಿದ್ದು ಇದರ ಬಗ್ಗೆ ಪ್ರಶ್ನಿಸಲಾಯಿತು. ಜತೆಗೆ, ಚಿನ್ನಾಭರಣ, ನಗದು ವಿವಿಧೆಡೆ ವಾಣಿಜ್ಯ ಸಂಕೀರ್ಣ ಸೇರಿ ಕೃಷಿ ಜಮೀನು ಕೂಡ ಪತ್ತೆಯಾಗಿದೆ.

ಇದೇ ವೇಳೆ ಬಿಬಿಎಂಪಿಯ ಗುಣಮಟ್ಟ ನಿಯಂತ್ರಣ ಮತ್ತು ಗುಣಮಟ್ಟ ಭರವಸೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಬಿ.ಕಲ್ಲೇಶಪ್ಪ ಮನೆಗಳ ಮೇಲೆ ದಾಳಿ ನಡೆದಿದ್ದು ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.

ಬೆಂಗಳೂರು ರಾಜಾಜಿನಗರ ಬೆಸ್ಕಾಂನ ಇಂಜಿನಿಯರ್ ನಾಗರಾಜ್ ಅವರ ಕೆ.ಆರ್.ಪುರಂ ಬಳಿಯ ಪ್ರಿಯದರ್ಶಿನಿ ಬಡಾವಣೆಯಲ್ಲಿನ ಮನೆ, ರಾಜಾಜಿನಗರ ಬೆಸ್ಕಾಂ ಕಚೇರಿ, ಅವರ ಸಂಬಂಧಿಕರೊಬ್ಬರ ಮನೆ ಮೇಲೆ ದಾಳಿ ನಡೆದಿದೆ. ಇವರು ಮೂಲ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಮಲೇ ಮಹದೇಶ್ವರ ಬೆಟ್ಟದವರು. ಕೊಳ್ಳೇಗಾಲ ಬಳಿ 6 ಎಕರೆ ಜಮೀನು, ಬೆಂಗಳೂರಿನಲ್ಲಿ ಒಂದು ಮನೆ, ಎರಡು ನಿವೇಶನಗಳು, ಕೋಲಾರ ತಾಲ್ಲೂಕು ನರಸಾಪುರ ಬಳಿ ಭೂಮಿ ಹೊಂದಿರುವುದು ಗೊತ್ತಾಗಿದೆ.

ಈ ಹಿಂದೆ ಕೋಲಾರದಲ್ಲಿ ಬೆಸ್ಕಾಂ ಇಂಜಿನಿಯರಿಂಗ್ ಕೆಲಸ ಮಾಡುವಾಗ ಭಾರಿ ಭ್ರಷ್ಟಾಚಾರ ದೂರು ಕೇಳಿಬಂದಿತ್ತು. ದಾಳಿ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎನ್ನಲಾಗಿದೆ. ಅದೇ ರೀತಿ, ಶಿರಾ ತಾಲೂಕಿನ ತಾವರೆಕೆರೆಯಲ್ಲಿರುವ ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯನಾಗಿರುವ ಡಾ.ಜಗದೀಶ್ ಅವರು ತುಮಕೂರಿನ ಮಂಜುನಾಥ್ ನಗರದಲ್ಲಿ ಹೊಂದಿರುವ ಜಗದೀಶ್ ಕಾಂಪ್ಲೆಕ್ಸ್, ಶಿರಾ ತಾಲ್ಲೂಕಿನ ಯನಹಳ್ಳಿರುವ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಜಗದೀಶ್ ಪತ್ನಿ ರೂಪಾ, ಸೋದರ ಕಾಂತರಾಜ್ ಮನೆ ಮೇಲೂ ದಾಳಿ ಮಾಡಲಾಗಿದೆ.

ಶಿರಾ ತಾಲೂಕಿನ ಬರಗೂರಿನಲ್ಲಿ ತಾಯಿಯ ಹೆಸರಿನಲ್ಲಿ ಆಸ್ತಿ ಮಾಡಿರುವುದು ದಾಳಿ ವೇಳೆ ಪತ್ತೆಯಾಗಿದೆ. ಬಾಗಲಕೋಟೆಯಲ್ಲಿ ಪಂಚಾಯತ್ ರಾಜ್ ಇಲಾಖೆ ಲೆಕ್ಕಾಧಿಕಾರಿ ಮಲ್ಲೇಶ್ ದುರ್ಗದ್ ಅವರ ಬಾಗಲಕೋಟೆ ಕಚೇರಿ, ಬಾಗಲಕೋಟೆ ಹಳೆ ವೀರಾಪುರ ರಸ್ತೆಯಲ್ಲಿರುವ ಮನೆ .ಬೀಳಗಿ ತಾಲೂಕಿನ ತಳ್ಳಿಕೇರಿಯಲಿ ಮನೆಯಲ್ಲಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಜರುಗಿತು.

ಕಲಬುರಗಿಯಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಘಟಕದ ಅಧಿಕಾರಿ ಜಗನ್ನಾಥ್ ಅವರ ಓಕಳಿ ಕ್ಯಾಂಪ್ ಬಡಾವಣೆಯಲ್ಲಿರುವ ಮನೆ, ಬೆಂಗಳೂರಿನ ಕಚೇರಿ, ಧನ್ನೂರ್ (ಕೆ) ಗ್ರಾಮದಲ್ಲಿರುವ ಮನೆ ಸೇರಿದಂತೆ ಹಲವೆಡೆ ದಾಳಿ ನಡೆದಿದೆ. ಈ ತಿಂಗಳ ಅಂತ್ಯದಲ್ಲಿ ನಿವೃತ್ತರಾಗುತ್ತಿದ್ದ ಜಗನ್ನಾಥ್ ಲೋಕಾಯುಕ್ತ ಬಿಸಿ ಮುಟ್ಟಿಸಿದೆ.

ಇನ್ನೂ, ಇವರ ನಿವಾಸದಲ್ಲಿ ಸುಮಾರು 2 ಕೆ.ಜಿ ಚಿನ್ನಾಭರಣ ಸೇರಿ ಬೆಳ್ಳಿ,ಐಷಾರಾಮಿ ವಾಚ್ ಸೇರಿ ಹಲವು ಬೆಲೆಬಾಳುವ ವಸ್ತುಗಳು ಪತ್ತೆಯಾಗಿದೆ.ಈ ವೇಳೆ ಲಾಕರ್ ಕೀ ಸಿಗದ ಕಾರಣ ಅದನ್ನು ಒಡೆದು ಪರಿಶೀಲಿಸಿದಾಗ ಹಲವಾರು ದಾಖಲೆಗಳು ಭಾರಿ ನಗದು ಪತ್ತೆಯಾಗಿದೆ.

ಹಾಗೇ, ಆಳಂದದಲ್ಲಿ 30 ಎಕರೆ ಜಮೀನು, ಬೀದರ್, ಬಸವ ಕಲ್ಯಾಣದಲ್ಲಿ ಆಸ್ತಿ ಹೊಂದಿರುವುದು ಗೊತ್ತಾಗಿದೆ. ಲೋಕಾಯುಕ್ತ ಅಧಿಕಾರಿಗಳ 8 ತಂಡಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಇನ್ನೊಂದೆಡೆ, ವಿಜಯಪುರದಲ್ಲಿ ಕರ್ನಾಟಕ ಗೃಹ ಮಂಡಳಿ ಎಫ್‍ಡಿಎ ಶಿವಾನಂದ ಕೆಂಬಾವಿ ಅವರ ಮನೆ ಮತ್ತು ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ವಿಜಯಪುರ ನಗರದ ಸುಕೂನ್ ಕಾಲೋನಿಯಲ್ಲಿರುವ ನಿವಾಸ ಮತ್ತು ವಿಜಯಪುರ ಜಿಲ್ಲೆ ತಿಡಗುಂದಿ ಗ್ರಾಮದ ಬಳಿಯಿರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಯಿತು. ಅದೇ ರೀತಿ, ದಾವಣಗೆರೆ ಆಹಾರ ಗುಣಮಟ್ಟ ವಿಭಾಗದ ಅಧಿಕಾರಿ ಜಿ.ಎಸ್.ನಾಗರಾಜು ಅವರ ನಿವಾಸದ ಮೇಲೂ ದಾಳಿ ನಡೆಸಿ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News