ರಾಜ್ಯ ಪ್ರವಾಸಕ್ಕೆ ಬಂದ ಕೇರಳದ ಮಕ್ಕಳಿಗೆ ವಿಧಾನಸೌಧ ವೀಕ್ಷಣೆಗೆ ಅವಕಾಶ ಒದಗಿಸಿದ ಸ್ಪೀಕರ್ ಯು.ಟಿ.ಖಾದರ್
ಬೆಂಗಳೂರು, ಸೆ. 25: ಕೇರಳದ ಕುನ್ನಮಂಗಲಂ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ವಿಧಾನಸೌಧದ ವೀಕ್ಷಣೆಗಾಗಿ ಆಗಮಿಸಿದ ಸಂದರ್ಭದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಇದೇ ವೇಳೆ ಮಾತನಾಡಿದ ವಿಧಾನಸೌಧದ ಸ್ಪೀಕರ್ ಯು.ಟಿ.ಖಾದರ್, ಕೇರಳ ರಾಜ್ಯದ ಕುನ್ನಮಂಗಲಂ ಗ್ರಾಮ ಪಂಚಾಯಿತಿಯ ಸದಸ್ಯರು ಮಕ್ಕಳು ಹಾಗೂ ಸ್ಥಳೀಯರಿಗೆ ವಿಧಾನಸೌಧದ ವೀಕ್ಷಣೆಗಾಗಿ ಅನುಮತಿ ಕೋರಿ ಪತ್ರವನ್ನು ಬರೆದಿದ್ದರು. ಕರ್ನಾಟಕ ರಾಜ್ಯದ ಪ್ರಮುಖ ಪ್ರವಾಸ ತಾಣವಾದ ವಿಧಾನಸೌಧದ ವೀಕ್ಷಣೆಯನ್ನು ಪ್ರತಿಯೊಬ್ಬರೂ ಮಾಡಲಿ ಎಂದು ಮುಕ್ತವಾಗಿ ಒಪ್ಪಿ, ಅನುಮತಿಯನ್ನು ನೀಡಲಾಯಿತು. ವಿಧಾನಸೌಧದ ಇತಿಹಾಸವನ್ನು ಎಲ್ಲರೂ ಅರಿಯಬೇಕು. ಇತರ ರಾಜ್ಯಗಳು ಸೇರಿದಂತೆ ವಿದೇಶದಲ್ಲೂ ಈ ಭವ್ಯ ಸೌಧದ ಕುರಿತು ಮಾಹಿತಿ ಪಸರಿಸಬೇಕುʼʼ ಎಂದು ಹೇಳಿದರು.
"ವಿಧಾನಸೌಧದ ವೀಕ್ಷಣೆಗಾಗಿ ಆಗಮಿಸಿದ ಕೇರಳ ರಾಜ್ಯದ ಈ ಮಕ್ಕಳು ಹಾಗೂ ಸ್ಥಳೀಯರಿಗೆ ಅನುಕೂಲ ಮಾಡಿಕೊಡಲು ಗೈಡ್ ವ್ಯವಸ್ಥೆಯನ್ನು ಸಹ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದುʼʼ ಎಂದು ಸ್ಪೀಕರ್ ತಿಳಿಸಿದರು.
ವಿಮಾನ ಪ್ರಯಾಣವನ್ನು ಮಾಡದಿರುವ ನೂರೈವತ್ತುಕ್ಕೂ ಹೆಚ್ಚು ಮಕ್ಕಳು ಹಾಗೂ ಸ್ಥಳೀಯರಿಗೆ ಕುನ್ನಮಂಗಲಂ ಗ್ರಾಮ ಪಂಚಾಯಿತಿ ಸದಸ್ಯರು ದೇಣಿಗೆ ಮೂಲಕ ಸಂಗ್ರಹಿಸಿದ ಹಣ ಸೇರಿದಂತೆ ಇತರ ವಿಶೇಷ ಅನುದಾನದಲ್ಲಿ ಉಚಿತವಾಗಿ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಒದಗಿಸಿದರು.