ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್; ನಟ ಚೇತನ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಅಸ್ತು
ಬೆಂಗಳೂರು, ಆ.20: ನ್ಯಾಯಾಂಗ ಮತ್ತು ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಡಿ ನಟ ಚೇತನ್ ಅಹಿಂಸಾ, ತಮಿಳುನಾಡಿನ ‘ತೌಹೀದ್ ಜಮಾತ್' ಅಧ್ಯಕ್ಷ ರಹಮತ್ ಉಲ್ಲಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಕರ್ನಾಟಕದ ಅಡ್ವೊಕೇಟ್ ಜನರಲ್ (ಎಜಿ) ಕೆ.ಶಶಿಕಿರಣ್ ಶೆಟ್ಟಿ ಅವರು ಒಪ್ಪಿಗೆ ನೀಡಿದ್ದಾರೆ.
ನ್ಯಾಯಾಂಗ ಮತ್ತು ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಡಿ ಚೇತನ್ ಅಹಿಂಸಾ, ರಹಮತ್ ಉಲ್ಲಾ, ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಹಾಗೂ "ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ"(ಸಿಎಫ್ಐ) ಅಧ್ಯಕ್ಷ ಅತಾವುಲ್ಲಾ ಪುಂಜಾಲಕಟ್ಟೆ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆಯ ಕಲಂ 15(1)(ಬಿ) ಅಡಿ ಕ್ರಮ ಕೈಗೊಳ್ಳಲು ಅನುಮತಿಸಬೇಕು ಎಂದು ಕೋರಿ ನಗರದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಮನವಿ ಮಾಡಿದ್ದರು.
ಅತ್ಯಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿ, ತೀರ್ಪಿನಲ್ಲಿ ಆಘಾತಕಾರಿ ಹೇಳಿಕೆಯೊಂದನ್ನು ಉಲ್ಲೇಖಿಸಿದ್ದಾರೆ. ಈಗ ಅದೇ ನ್ಯಾಯಮೂರ್ತಿ ಶಾಲೆಗಳಲ್ಲಿ ಹಿಜಾಬ್ ಧರಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ತೀರ್ಮಾನಿಸಲಿದ್ದಾರೆ. ಅವರಿಗೆ ಅಗತ್ಯವಾದ ಸ್ಪಷ್ಟತೆ ಇದೆಯೇ ಎಂದು ನಟ ಚೇತನ್ ಅವರು ಟ್ವೀಟ್ ನಲ್ಲಿ ಪ್ರಶ್ನೆ ಮಾಡಿದ್ದರು.
ಅಡ್ವೊಕೇಟ್ ಜನರಲ್ ಅವರು, ಇದು ದುರುದ್ದೇಶಪೂರಿತ, ವ್ಯಾಪ್ತಿ ಮೀರಿದ ಮತ್ತು ವಿವಾದಾತ್ಮಕ ಹೇಳಿಕೆಯಾಗಿದೆ. ನ್ಯಾಯಮೂರ್ತಿಯೊಬ್ಬರ ಮೇಲಿನ ನಿಷ್ಪಕ್ಷಪಾತದ ಬಗ್ಗೆ ಸಾರ್ವಜನಿಕರಿಗೆ ಸಂಶಯ ಮೂಡಿಸುವಂತಿದೆ. ಹೀಗಾಗಿ, ನಟ ಚೇತನ್ ಅಹಿಂಸಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅರ್ಜಿದಾರರಿಗೆ ಅನುಮತಿಸಿದ್ದೇನೆ ಎಂದು ಅಡ್ವೊಕೇಟ್ ಜನರಲ್ ವಿವರಿಸಿದ್ದಾರೆ.
ಹಿಜಾಬ್ ತೀರ್ಪಿಗೆ ಸಂಬಂಧಿಸಿದಂತೆ, ತಮಿಳುನಾಡಿನ 'ತೌಹೀದ್ ಜಮಾತ್' ಅಧ್ಯಕ್ಷ ಆರ್. ರಹಮತ್ ಉಲ್ಲಾ, 'ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆಯಂತೆ ಹೈಕೋರ್ಟ್ ಹಿಜಾಬ್ ತೀರ್ಪು ನೀಡಿದೆ. ಒಂದು ವೇಳೆ ನ್ಯಾಯಮೂರ್ತಿಗಳು ಕೊಲೆಯಾದರೆ ಅವರ ಸಾವಿಗೆ ಅವರೇ ಜವಾಬ್ದಾರಿ' ಎಂದು ಮಧುರೈನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು.
ಈ ಹೇಳಿಕೆಯು ನ್ಯಾಯಾಂಗ ನಿಂದನೆ ಕಾಯ್ದೆಯ ಕಲಂ 2(ಸಿ) ಅಡಿ ನಿಂದನೆಗೆ ಸಮನಾಗಿದೆ. ಇಂತಹ ಹೇಳಿಕೆಯ ಮೂಲಕ ಅವರು ನ್ಯಾಯಾಂಗದ ಸ್ವಾತಂತ್ರ್ಯ, ಪ್ರಾಮಾಣಿಕತೆ ಮತ್ತು ನ್ಯಾಯಿಕ ಸಾಮಥ್ರ್ಯದ ಹಾಗೂ ನ್ಯಾಯಮೂರ್ತಿಗಳ ನಿಷ್ಪಕ್ಷಪಾತ ನಿಲುವಿನ ಮೇಲೆ ದಾಳಿ ಮಾಡುವುದರ ಜೊತೆಗೆ ನ್ಯಾಯಾಂಗದ ಘನತೆಗೆ ಕುಂದುಂಟು ಮಾಡಿದ್ದಾರೆ ಎಂದು ಎಜಿ ನೀಡಿರುವ ಅನುಮತಿ ಪತ್ರದಲ್ಲಿ ವಿವರಿಸಲಾಗಿದೆ.