ಸೋಮವಾರ ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ: ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್ ಸೇರಿದಂತೆ ಹಲವರು ಭಾಗಿ ಸಾಧ್ಯತೆ
ಬೆಂಗಳೂರು, ಜು.16: ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ಮುಂದಾಗಿರುವ ವಿರೋಧ ಪಕ್ಷಗಳು ಉದ್ಯಾನನಗರಿ ಬೆಂಗಳೂರಿನಲ್ಲಿ ಜು.17ರಂದು ಖಾಸಗಿ ಹೊಟೇಲ್ನಲ್ಲಿ ಮಹತ್ವದ ಸಭೆ ನಡೆಸಲಿವೆ. ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ, ಆರ್ಜೆಡಿ, ಡಿಎಂಕೆ, ಸಿಪಿಐ, ಸಿಪಿಎಂ, ಆಪ್ ಸೇರಿದಂತೆ 23 ಪಕ್ಷಗಳಿಗೆ ಈ ಸಭೆಗೆ ಆಹ್ವಾನ ನೀಡಲಾಗಿದೆ.
ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಟಿಎಂಸಿ ಮುಖಂಡರಾದ ಅಭಿಶೇಕ್ ಬ್ಯಾನರ್ಜಿ, ಡೆರೆಕ್ ಒಬೆರೇನ್ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಸಿಪಿಐ ನಾಯಕ ಡಿ.ರಾಜಾ, ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ, ಎನ್ಸಿಪಿ ವರಿಷ್ಠ ಶರದ್ ಪವಾರ್, ಜಿತೇಂದ್ರ ಅಹ್ವಾದ್, ಸಂಸದೆ ಸುಪ್ರಿಯಾ ಸುಳೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಸಂಸದ ಲಲ್ಲನ್ ಸಿಂಗ್, ಸಚಿವ ಸಂಜಯ್ ಕುಮಾರ್ ಝಾ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಸಂಸದ ಟಿ.ಆರ್.ಬಾಲು, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾಗವಹಿಸುವ ಸಾಧ್ಯತೆಯಿದೆ.
ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ, ಮಾಜಿ ಸಚಿವ ಆದಿತ್ಯ ಠಾಕ್ರೆ, ಸಂಸದ ಸಂಜಯ್ ರಾವತ್, ಆರ್ಜೆಡಿ ವರಿಷ್ಠ ಲಾಲುಪ್ರಸಾದ್ ಯಾದವ್, ಬಿಹಾರ ಡಿಸಿಎಂ ತೇಜಸ್ವಿ ಯಾದವ್, ಸಂಸದ ಮನೋಜ್ ಝಾ, ಸಂಜಯ್ ಯಾದವ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಸಂಸದರಾದ ರಾಮಗೋಪಾಲ್ ಯಾದವ್, ಜಾವೇದ್ ಅಲಿ ಖಾನ್, ಮುಖಂಡರಾದ ಲಾಲ್ ಜಿ ವರ್ಮಾ, ರಾಮ್ ಅಚಲ್ ರಾಜ್ಭರ್, ಆಶಿಶ್ ಯಾದವ್ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಜಮ್ಮು ಕಾಶ್ಮೀರದ ಮಾಜಿ ಸಿಎಂಗಳಾದ ಉಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಸಿಪಿಐ(ಎಂಎಲ್) ನಾಯಕ ದೀಪಾಂಕರ್ ಭಟ್ಟಾಚಾರ್ಯ, ಆರ್ಎಲ್ಡಿ ಸಂಸದ ಜಯಂತ್ ಸಿಂಗ್ ಚೌಧರಿ, ಐಯುಎಂಎಲ್ ಮುಖಂಡರಾದ ಕೆ.ಎಂ.ಖಾದರ್ ಮೊಹಿದೀನ್, ಕೇರಳ ಕಾಂಗ್ರೆಸ್(ಎಂ) ಮುಖಂಡ ಜೋಸ್ ಕೆ.ಮಣಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಎಂ.ಡಿ.ಎಂ.ಕೆ ಪಕ್ಷದ ಸಂಸದ ವೈಕೋ, ಜಿ.ರೇಣುಕಾದೇವಿ, ವಿಸಿಕೆ ಪಕ್ಷದ ಅಧ್ಯಕ್ಷ ತೋಲ್ ತಿರುಮಾವಲವನ್, ಸಂಸದ ರವಿ ಕುಮಾರ್, ಆರ್ಎಸ್ಪಿ ಪಕ್ಷದ ಸಂಸದ ಎನ್.ಕೆ.ಪ್ರೇಮಚಂದ್ರನ್, ಕೇರಳ ಕಾಂಗ್ರೆಸ್ ಪಕ್ಷದ ಮುಖಂಡರಾದ ಪಿ.ಜೆ.ಜೋಸೆಫ್, ಫ್ರಾನ್ಸಿಸ್ ಜಾರ್ಜ್ ಕೆ., ಕೆ.ಎಂ.ಡಿ.ಕೆ ಪಕ್ಷದ ಶಾಸಕ ಇ.ಆರ್.ಈಶ್ವರನ್, ಸಂಸದ ಎ.ಕೆ.ಪಿ.ಚಿನ್ನರಾಜ್, ಎಐಎಫ್ಬಿ ಪಕ್ಷದ ಮುಖಂಡ ಜಿ.ದೇವರಾಜನ್ ಅವರಿಗೆ ಆಹ್ವಾನ ನೀಡಲಾಗಿದೆ.
ಜೆಡಿಎಸ್ ಪಕ್ಷಕ್ಕಿಲ್ಲ ಆಹ್ವಾನ: ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳ ಎರಡನೆ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿದ್ದರೂ ಜೆಡಿಎಸ್ ಪಕ್ಷಕ್ಕೆ ಆಹ್ವಾನ ನೀಡಲಾಗಿಲ್ಲ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ನಾಳೆ ಅಥವಾ ನಾಳಿದ್ದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊಸದಿಲ್ಲಿಗೆ ಪ್ರಯಾಣ ಬೆಳೆಸಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಇನ್ನಿತರ ಮುಖಂಡರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.