×
Ad

ಒಂದು ಸಾವಿರ ಕೋಟಿ ರೂ. ವೆಚ್ಚದ ‘ಆರ್ಥಿಕ ವೇಗವರ್ಧಕ’ ಕಾರ್ಯಕ್ರಮಕ್ಕೆ ಪ್ರಿಯಾಂಕ್ ಖರ್ಗೆ ಚಾಲನೆ

Update: 2025-09-22 18:15 IST

 ಪ್ರಿಯಾಂಕ್ ಖರ್ಗೆ

ಬೆಂಗಳೂರು, ಸೆ.22: ಉದ್ಯೋಗ ಸೃಷ್ಟಿ ಹಾಗೂ ರಾಜ್ಯಾದ್ಯಂತ ನಾವೀನ್ಯತೆ ಉತ್ತೇಜಿಸಲು ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದ ಸ್ಥಳೀಯ ಆರ್ಥಿಕ ವೇಗವರ್ಧಕ(ಎಲ್‍ಇಎಪಿ) ಕಾರ್ಯಕ್ರಮಕ್ಕೆ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ(ಎಲ್‍ಇಎಪಿ)ಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಹೊರತು ಪಡಿಸಿ ರಾಜ್ಯಾದ್ಯಂತ ನಾವೀನ್ಯತೆ ಬೆಳೆಸಲು ಹಾಗೂ 5 ಲಕ್ಷ ಉದ್ಯೋಗ ಸೃಷ್ಟಿ, ದೃಢವಾದ ನವೋದ್ಯಮ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸಲು ವಿನ್ಯಾಸಗೊಳಿಸಲಾದ ಮಹತ್ವದ ಕಾರ್ಯಕ್ರಮ ಸ್ಥಳೀಯ ಆರ್ಥಿಕ ವೇಗವರ್ಧಕ(ಎಲ್‍ಇಎಪಿ) ಆಗಿದೆ ಎಂದರು.

ಬೆಂಗಳೂರು ವಿಶ್ವಮಟ್ಟದಲ್ಲಿ ಪ್ರಸಿದ್ಧ ತಂತ್ರಜ್ಞಾನ ಕೇಂದ್ರವಾಗಿದ್ದು, ಸ್ಟಾರ್ಟ್‍ಆ್ಯಪ್ ಬ್ಲಿಂಕ್ ಸೂಚ್ಯಂಕ 2025 ಹಾಗೂ ಸ್ಟಾರ್ಟ್‍ಆ್ಯಪ್ ಜೀನೋಮ್ 2025ರಲ್ಲಿ ವಿಶ್ವದಾದ್ಯಂತ ಕ್ರಮವಾಗಿ 10ನೆ ಮತ್ತು 14 ನೆ ಸ್ಥಾನ ಪಡೆದಿದೆ. ಇದೀಗ ಎಲ್‍ಇಎಪಿ ಅನ್ನು ಮೈಸೂರು-ಚಾಮರಾಜನಗರ, ಮಂಗಳೂರು-ಉಡುಪಿ, ಹುಬ್ಬಳ್ಳಿ-ಬೆಳಗಾವಿ-ಧಾರವಾಡ, ತುಮಕೂರು, ಕಲಬುರಗಿ ಮತ್ತು ಶಿವಮೊಗ್ಗ ಮುಂತಾದ ಕ್ಲಸ್ಟರ್‌ಗಳಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ನವೋತ್ಪಾದನಾ ಹಬ್‍ಗಳಾಗಿ ಪರಿವರ್ತಿಸಿ ರೂಪಾಂತರಗೊಳಿಸಲಿದೆ ಎಂದು ಅವರು ಉಲ್ಲೇಖಿಸಿದರು.

ಬೆಂಗಳೂರು ಜಾಗತಿಕವಾಗಿ ತಾಂತ್ರಿಕತೆಯ ಹಬ್ ಆಗಿದೆ. ಆದರೆ, ಮೈಸೂರು, ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಉದ್ಯಮಿಗಳನ್ನು ಸಬಲೀಕರಣಗೊಳಿಸಿದಾಗ ರಾಜ್ಯದ ನಿಜವಾದ ಸಾಮರ್ಥ್ಯವು ಅನಾವರಣಗೊಳ್ಳುತ್ತದೆ. 1 ಸಾವಿರ ಕೋಟಿ ಮೌಲ್ಯದ ಈ ಕಾರ್ಯಕ್ರಮವು ನಾವೀನ್ಯತೆಯಲ್ಲಿ ಹೂಡಿಕೆಗಿಂತ ಹೆಚ್ಚಿನದಾಗಿದೆ ಎಂದ ಅವರು, ಇದು ಇಡೀ ರಾಜ್ಯಕ್ಕೆ ಸಮತೋಲಿತ, ಸಮಾನ ಮತ್ತು ಸ್ಥಿತಿಸ್ಥಾಪಕ ಆರ್ಥಿಕ ಭವಿಷ್ಯದಲ್ಲಿ ಹೂಡಿಕೆಯಾಗಿದ್ದು, 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಕರ್ನಾಟಕವನ್ನು ವೈವಿಧ್ಯಮಯ ಜಾಗತಿಕ ತಂತ್ರಜ್ಞಾನ ನಾಯಕನನ್ನಾರಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದು ಸಚಿವರು ತಿಳಿಸಿದರು.

ಶಾಲೆಗಳಲ್ಲಿ ಉದ್ಯಮಶೀಲತಾ ಕುತೂಹಲ ಸೃಷ್ಟಿಯ ಹಾದಿಯಿಂದ ಹಿಡಿದು ಪ್ರಬುದ್ಧ ನವೋದ್ಯಮಗಳು ಜಾಗತಿಕ ಮಾರುಕಟ್ಟೆಗಳನ್ನು ಪ್ರವೇಶಿಸಲು ಸಹಾಯ ಮಾಡುವವರೆಗೆ, ನವೋದ್ಯಮದ ಸಂಪೂರ್ಣ ಜೀವನಚಕ್ರವನ್ನು ಬೆಂಬಲಿಸಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಮೂಲಸೌಕರ್ಯ, ಹಣಕಾಸು, ಮಾರ್ಗದರ್ಶನ ಮತ್ತು ಪರಿಸರ ವ್ಯವಸ್ಥೆಯ ಅಭಿವೃದ್ಧಿಯಲ್ಲಿನ ನಿರ್ಣಾಯಕ ಅಂತರವನ್ನು ಪರಿಹರಿಸುವ ಮೂಲಕ, ಎಲ್‍ಇಎಪಿ ರಾಜ್ಯಾದ್ಯಾಂತ ಒಂದು ಸಮಗ್ರ ನಾವೀನ್ಯತೆಯ ನಿರೂಪಣೆಯನ್ನು ರಚಿಸುವ ಗುರಿಯನ್ನು ಹೊಂದಿದೆ ಎಂದು ಅವರು ವಿವರಿಸಿದರು.

ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ಏಕ್‍ರೂಪ್ ಕೌರ್, ಮಾತನಾಡಿ, ಎಲ್‍ಇಎಪಿ ನಮ್ಮ ಬೆಂಗಳೂರಿನಾಚೆಗೂ ದೃಷ್ಟಿಕೋನ ಹೊಂದಿದೆ. ಉದಯೋನ್ಮುಖ ತಂತ್ರಜ್ಞಾನ ಸಮೂಹಗಳಿಗೆ ಸುಸ್ಥಿರ ಬೆಳವಣಿಗೆ ಮತ್ತು ದೀರ್ಘಕಾಲೀನ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಮೂಲಸೌಕರ್ಯ ಮತ್ತು ಬೆಂಬಲ ವ್ಯವಸ್ಥೆಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News