×
Ad

ಮೋದಿಯವರೇ ಪಾಲಿಸಿ ಪೋಷಿಸುತ್ತಿರುವ ವಿಚಾರಧಾರೆಯು ಸಂವಿಧಾನದ ಮೇಲೆ ನಡೆಸಿದ ದಾಳಿ: ಸಿಜೆಐ ಮೇಲೆ ಶೂ ಎಸೆತ ಘಟನೆಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ

"ಮೋದಿ ಕೆರಳುವುದಕ್ಕೆ ಸುದೀರ್ಘ 9 ಗಂಟೆ ಹಿಡಿಯಿತು"

Update: 2025-10-07 22:15 IST

ಬೆಂಗಳೂರು: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮೇಲಿನ ಶೂ ದಾಳಿಯು ಪ್ರತಿಯೊಬ್ಬ ಭಾರತೀಯರನ್ನೂ ಕೆರಳಿಸಿದೆ ಎಂದಿದ್ದಾರೆ ಪ್ರಧಾನಿ. ಘಟನೆ ನಡೆದಿದ್ದು ಬೆಳಗ್ಗೆ 11.30 ಗಂಟೆ ಸುಮಾರಿಗೆ, ಮೋದಿಯವರು ಕೆರಳಿ ಪ್ರತಿಕ್ರಿಯೆ ನೀಡಿದ್ದು ರಾತ್ರಿ 8.29ಗಂಟೆಗೆ. ಮೋದಿಯವರು ಕೆರಳುವುದಕ್ಕೆ ಸುದೀರ್ಘ 9 ಗಂಟೆಗಳ ಅವಧಿ ಹಿಡಿಯಿತು. ಅದೇ ಕ್ರಿಕೆಟ್ ಪಂದ್ಯದ ವಿಷಯವಾಗಿದ್ದರೆ ಕೆಲವೇ ಕ್ಷಣಗಳಲ್ಲಿ ಟ್ವೀಟ್ ಮಾಡುತ್ತಿದ್ದರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಮಂಗಳವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಪ್ರತಿಯೊಬ್ಬ ಭಾರತೀಯರನ್ನೂ ಕೆರಳಿಸಿದೆ ಎಂದಿದ್ದಾರೆ, ಆದರೆ ದೇಶದ ಗೃಹ ಸಚಿವ ಅಮಿತ್ ಶಾ ಕೆರಳಲಿಲ್ಲ, ಖಂಡಿಸಲಿಲ್ಲ. ಬಿಜೆಪಿ ಪಕ್ಷ ಕೆರಳಲಿಲ್ಲ, ಖಂಡಿಸಲಿಲ್ಲ. ಯಾವೊಬ್ಬ ಕೇಂದ್ರ ಮಂತ್ರಿಯೂ ಕೆರಳಿ ಖಂಡಿಸಲಿಲ್ಲ. ಯಾವೊಬ್ಬ ಬಿಜೆಪಿಗರೂ ಕೆರಳಿ ಬೀದಿಗಿಳಿಯಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬದಲಾಗಿ ಈ ಶೂ ದಾಳಿಯನ್ನು ಬಿಜೆಪಿ ಹಾಗೂ ಸಂಘಪಾರಿವಾರದ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ, ಇವರನ್ನು ನೋಡಿ ಮೋದಿಯವರು ಕೆರಳಲಿಲ್ಲ. ಮತಗಳ್ಳತನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾಗ ಮಳೆಗಾಲದ ಕಪ್ಪೆಗಳಂತೆ ವಟಗುಟ್ಟಿದ್ದ ಬಿಜೆಪಿಯವರು ಈಗೇಕೆ ಮೌನವಾಗಿದ್ದಾರೆ? ಸಂವಿಧಾನದ ಘನತೆ, ನ್ಯಾಯಾಲಯದ ಪಾವಿತ್ರ್ಯತೆ ಬಿಜೆಪಿಗೆ ಮುಖ್ಯವಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಇದು ಕೇವಲ ವ್ಯಕ್ತಿಯೊಬ್ಬ ವ್ಯಕ್ತಿಯ ಮೇಲೆ ನಡೆಸಿದ ದಾಳಿಯಲ್ಲ, ಮೋದಿಯವರೇ ಪಾಲಿಸಿ ಪೋಷಿಸುತ್ತಿರುವ ವಿಚಾರಧಾರೆಯು ಸಂವಿಧಾನದ ಮೇಲೆ ನಡೆಸಿದ ದಾಳಿ. ಮೋದಿಯವರು ನಿಜಕ್ಕೂ ಕೆರಳುವುದಿದ್ದರೆ ತಾವು ಪ್ರತಿನಿಧಿಸುವ ವಿಚಾರಧಾರೆಯ ವಿರುದ್ಧ ಕೆರಳಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News