ಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ : ಪ್ರೊ.ಬರಗೂರು ರಾಮಚಂದ್ರಪ್ಪ
ಕನ್ನಡ ಮಾಧ್ಯಮ ಮೀಸಲಾತಿಗೆ 25 ವರ್ಷ: ಚಿಂತನ ಸಮಾವೇಶ
ತುಮಕೂರು : ಕನ್ನಡ ಉಳಿಸುವ ಪ್ರಶ್ನೆ ಸವಾಲಾಗಿರುವ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಆದ್ಯತೆ ಕನ್ನಡದ ಉಳಿವಿಗೆ ಮುಖ್ಯವಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಕನ್ನಡ ವಿರೋಧಿ ಶಿಕ್ಷಣ ಇಲಾಖೆ, ಇಲಾಖೆಯಲ್ಲಿ ನೌಕರರಶಾಹಿ ಆಡಳಿತ ನಡೆಸುತ್ತಿರುವುದರಿಂದ ಕನ್ನಡ ಸಂಕಷ್ಟದಲ್ಲಿದೆ. ರಾಜ್ಯ ಶಿಕ್ಷಣ ನೀತಿಯನ್ನು ಸರಕಾರ ಬಹಿರಂಗಪಡಿಸಿ ಚರ್ಚೆಗೆ ಅವಕಾಶ ಮಾಡಿ, ಖಚಿತವಾಗಿ ರೂಪಿಸಬೇಕು ಎಂದು ಹಿರಿಯ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಕನ್ನಡ ಮಾಧ್ಯಮ ಜಾರಿಯಾಗಿ 25 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಕನ್ನಡಪರ ಚಿಂತನ ವೇದಿಕೆ ರವಿವಾರ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಚಿಂತನ ಸಮಾವೇಶದಲ್ಲಿ ಆಶಯನುಡಿ ನುಡಿದ ಪ್ರೊ.ಬರಗೂರು ರಾಮಚಂದ್ರಪ್ಪ, ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಶಿಕ್ಷಣ ಇಲಾಖೆಯ ನೌಕರಶಾಹಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಬಾಗಿಲಿನಿಂದ ಅನುಷ್ಠಾನಗೊಳಿಸಲು ಹೊರಟಿದೆ. ರಾಜ್ಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರದೆ, ಉಪಾಯವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತಿರುವುದು ಮಹಾನ್ ವಂಚನೆ ಎಂದು ಹೇಳಿದರು.
ತಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾದ ಸಂದರ್ಭದಲ್ಲಿ ಜಾರಿಗೆ ಬಂದ 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ವೃತ್ತಿ ಶಿಕ್ಷಣದಲ್ಲಿ ಹಾಗೂ ಸರಕಾರಿ ಉದ್ಯೋಗದಲ್ಲಿ ಶೇಕಡ 5ರಷ್ಟು ಮೀಸಲಾತಿ ಜಾರಿಯಾಗಿದೆ. ಇದರಿಂದ ಇದೂವರೆಗೂ ಲಕ್ಷಾಂತರ ಜನ ಈ ಮೀಸಲಾತಿ ಸೌಲಭ್ಯ ಪಡೆದಿದ್ದಾರೆ. ಕಿರಿಯ ಪ್ರಾಥಮಿಕ ಶಾಲೆಗಳನ್ನು ಇಲ್ಲದಂತೆ ಮಾಡುವ ಕೆಪಿಎಸ್ ಶಾಲೆಗಳ ನೀತಿ ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣುತ್ತದೆ. ಹಳ್ಳಿಗಳ ಕಿರಿಯ ಪ್ರಾಥಮಿಕ ಶಾಲೆಗಳು ಕೇವಲ ಶಿಕ್ಷಣ ಕೇಂದ್ರಗಳಲ್ಲ, ಅವು ಸಾಂಸ್ಕೃತಿಕ ಕೇಂದ್ರ. ರಾಷ್ಟ್ರೀಯ, ನಾಡಹಬ್ಬಗಳನ್ನು ಆಚರಿಸುವ ಕೇಂದ್ರ, ಪ್ರಾಥಮಿಕ ಶಾಲೆಗಳನ್ನು ಉಳಿಸಿಕೊಂಡು ಕೆಪಿಎಸ್ ಮಾಡಲು ಸಾಧ್ಯವಿಲ್ಲವೆ? ಚರ್ಚೆ,ಚಿಂತನೆ ನಡೆಯದಿದ್ದರೆ ಅದರ ಬಹುಮುಖತೆ ಹೇಗೆ ಅರ್ಥವಾಗುತ್ತದೆ? ರಾಜ್ಯ ಶಿಕ್ಷಣ ಇಲಾಖೆ ತಮಗೆ ತೋಚಿದಂತೆ ಶಿಕ್ಷಣ ನೀತಿ ಜಾರಿ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
‘ಕನ್ನಡ ಮೀಸಲಾತಿ ಕಲಿಕೆ-ಬಳಕೆ’ ಕೃತಿ ಬಿಡುಗಡೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮನೆ, ಇಂದು ಶಿಕ್ಷಣದ ಮೂಲ ಆಶಯವೇ ಬದಲಾಗಿದೆ. ಬಂಡವಾಳಶಾಹಿಗಳು ಮಕ್ಕಳನ್ನು ವಿನಿಮಯದ ಸರಕು ಮಾಡಿಕೊಂಡಿದ್ದಾರೆ. ಸಾಹಿತಿಗಳು, ಚಿಂತಕರ ಮಾತು ಕೇಳಿಸಿಕೊಳ್ಳದಷ್ಟು ಶಿಕ್ಷಣ ಇಲಾಖೆಯ ಅಧಿಕಾರಿಶಾಹಿ ಬದಲಾಗಿದೆ. ಕನ್ನಡ ಮಾಧ್ಯಮ ಮೀಸಲಾತಿಯನ್ನು ಶೇಕಡ 5ರಿಂದ 20ಕ್ಕೆ ಏರಿಸಬೇಕಾಗುತ್ತದೆ ಎಂದರು.
ಮಾಜಿ ಸಚಿವ, ಶಾಸಕ ಕೆ.ಎನ್. ರಾಜಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಂತರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆಯಲ್ಲಿ ನಡೆದ ಸಂವಾದಗೋಷ್ಠಿಯಲ್ಲಿ ಕನ್ನಡ ಮಾಧ್ಯಮ ಮೀಸಲಾತಿಯ ಫಲಾನುಭವಿಗಳು ಅನುಭವ, ಅಭಿಪ್ರಾಯ ಹಂಚಿಕೊಂಡರು. ಲೇಖಕ ಡಾ. ರಾಜಪ್ಪ ದಳವಾಯಿ ಸಂವಾದ ಸಮನ್ವಯಕಾರರಾಗಿದ್ದರು. ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ನಟರಾಜ್, ಮನೋವೈದ್ಯಾಧಿಕಾರಿ ಡಾ. ಶಮಾ ಬಿ.ಆರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೇವಲ ನಾಯ್ಕ್, ವೈದ್ಯಾಧಿಕಾರಿ ಡಾ.ಟಿಪ್ಪು ಸುಲ್ತಾನ್, ಶಿಕ್ಷಣ ಇಲಾಖೆ ಅಧಿಕಾರಿ ಕೆ.ಎಸ್. ಮಧುಸೂದನ್ ಕನ್ನಡ ಮಾಧ್ಯಮ ಮೀಸಲಾತಿಯ ಅನುಭವ ಹಂಚಿಕೊಂಡರು.
ಸಂಘಟಕರಾದ ಎಚ್. ಗೋವಿಂದಯ್ಯ, ಎ. ರಾಮಚಂದ್ರಪ್ಪ, ಅಶ್ವತ್ಥನಾರಾಯಣ ಗುಟ್ಟೆ, ನಾಗಭೂಷಣ್ ಬಗ್ಗನಡು, ಡಾ. ಶೈಲಾ ನಾಗರಾಜ್, ಡಾ.ಒ.ನಾಗರಾಜು, ಸತೀಶ್ ಸಿ.ಜಿ., ರಂಗದಾಸಪ್ಪ, ಎಂ.ಜೆ. ಶಿವಣ್ಣ, ವಿವಿಧ ಸಾಹಿತಿಗಳು, ಚಿಂತಕರು ಭಾಗವಹಿಸಿದ್ದರು.