×
Ad

ಪತ್ರಕರ್ತರ ಸಂಘಗಳು ಗಟ್ಟಿಯಾಗಬೇಕಿವೆ : ಡಾ.ಪಿ.ಸಾಯಿನಾಥ್

Update: 2025-01-20 00:08 IST

ತುಮಕೂರು : ಪತ್ರಕರ್ತರ ಸಮಸ್ಯೆಗಳಿಗೆ ಸೂಕ್ತ ಸಂದರ್ಭದಲ್ಲಿ ಪರಿಹಾರ ಸಿಗಬೇಕಾದರೆ ಪತ್ರಕರ್ತರ ಸಂಘಗಳು ಮತ್ತಷ್ಟು ಗಟ್ಟಿಗೊಳ್ಳಬೇಕಿವೆ. ಆ ಮೂಲಕ ಪತ್ರಿಕಾ ಸ್ವಾತಂತ್ರ್ಯ, ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಡಾ.ಪಿ.ಸಾಯಿನಾಥ್ ತಿಳಿಸಿದ್ದಾರೆ.

ನಗರದ ಶ್ರೀಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಪತ್ರಕರ್ತರ 39ನೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮತನಾಡಿದ ಅವರು, ಪತ್ರಿಕಾ ಒಕ್ಕೂಟಗಳು ಅವನತಿಯಾದರೆ ಸ್ವತಂತ್ರ ಪತ್ರಿಕೋದ್ಯಮ ಸತ್ತ ಹಾಗೆ. ಆದ್ದರಿಂದ ಪತ್ರಕರ್ತರು ಮತ್ತು ಸಂಘಟನೆಗಳು ಸಂಯುಕ್ತವಾಗಿ ಇಂತಹ ವೇದಿಕೆಗಳ ಮೂಲಕ ಹೋರಾಟ ನಡೆಸುವ ಅಗತ್ಯವಿದೆ ಎಂದರು.

ಸಮ್ಮೇಳನಗಳು, ಕಾರ್ಯಾಗಾರಗಳಲ್ಲಿ, ಪತ್ರಕರ್ತರ ಸಮಸ್ಯೆಗಳ, ಹಕ್ಕು ಬಾಧ್ಯತೆಗಳನ್ನು ಚರ್ಚಿಸಲು ಇಂತಹ ವೇದಿಕೆಗಳು ನಿರಂತರವಾಗಿ ನಡೆಯಬೇಕು. ಪತ್ರಿಕೋದ್ಯಮ ಮತ್ತು ಪತ್ರಕರ್ತರ ನಡುವೆ ಸಾಕಷ್ಟು ವೈರುಧ್ಯವಿದೆ. ಉದ್ಯಮ ಬದಲಾವಣೆಗಳನ್ನು ಕಾಣುತ್ತಿದೆ.ವೃತ್ತಿಪರ ಪತ್ರಕರ್ತರ ಬದುಕು ಹಸನಾಗಲು ಸರಕಾರಗಳನ್ನು ಮನವೊಲಿಸುವ ತೀವ್ರ ಹೋರಾಟಗಳನ್ನು ಸಮ್ಮೇಳನಗಳಲ್ಲಿ ರೂಪಿಸಬೇಕೆಂದು ಪಿ.ಸಾಯಿನಾಥ್ ಸಲಹೆ ನೀಡಿದರು.

ಬಂಡವಾಳ ಶಾಹಿ ಮಾಧ್ಯಮ ದೊರೆಗಳು ಪತ್ರಿಕಾ ಕ್ಷೇತ್ರದ ಹಿಡಿತವನ್ನು ಸಾಧಿಸುತ್ತಿದ್ದಾರೆ. ಇದು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವಾಗಿದೆ. ಎಲ್ಲ ಮಾಧ್ಯಮ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಕೆಲಸ ಮಾಡಿಸುವ ಮೂಲಕ ಯುವ ಪತ್ರಕರ್ತ ಸಮೂಹದ ಭವಿಷ್ಯವನ್ನು ಹಾಳು ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದರು.

ಸ್ವತಂತ್ರ ಪತ್ರಿಕೋದ್ಯಮವನ್ನು ಮುಕ್ತವಾಗಿ ಆಸ್ವಾದಿಸುವ ಅವಕಾಶಕ್ಕೆ ಸರಕಾರಗಳು ಕೊಡಲಿ ಪೆಟ್ಟು ನೀಡುತ್ತಿವೆ. ಇದು ಅಭಿವೃದ್ಧಿ ಪತ್ರಿಕೋದ್ಯಮದ ಕತ್ತು ಹಿಸುಕುವ ಕೆಲಸವಾಗಿದೆ ಎಂದು ದೂಷಿಸಿದ ಅವರು, ದೇಶದ ಪತ್ರಿಕೋದ್ಯಮ ಪರಿಸ್ಥಿತಿ ಅವನತ್ತಿಯತ್ತ ಸಾಗಿದೆ. ಇದಕ್ಕೆ ನಮ್ಮನಾಳುವ ಸರಕಾರಗಳು ಜಾರಿಗೆ ತರುತ್ತಿರುವ ಕಾರ್ಪೊರೇಟ್ ಸಂಸ್ಕೃತಿ ಮತ್ತು ಬಂಡವಾಳ ಶಾಹಿ ಹಾಗೂ ವ್ಯಾಣಿಜ್ಯೀಕರಣದ ಪರಿಣಾಮಗಳು ಕಾರಣವಾಗಿವೆ. ಭಾರತದಲ್ಲಿ ನೈಜ ಪತ್ರಿಕೋದ್ಯಮ ಕುಸಿಯುತ್ತಿದೆ.ಇದಕ್ಕೆ ಮೇಲಿನ ಎಲ್ಲವೂ ಕಾರಣವಾಗಿದೆಎಂದು ಸರಕಾರದ ಧೋರಣೆಗಳನ್ನು ಖಂಡಿಸಿದರು.

ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ಸಮ್ಮೇಳನ ಪತ್ರಕರ್ತರ ವೃತ್ತಿ ಬದುಕಿನ ಗುಣಮಟ್ಟ ಹೆಚ್ಚಿಸಲು ಪೂರಕವಾಗಿವೆ. 200 ವರ್ಷಗಳ ಹಿಂದಿನಿಂದಲೂ ಪತ್ರಿಕೋದ್ಯಮ ನಡೆದುಕೊಂಡು ಬಂದಿದೆ. ಹಲವಾರು ಬದಲಾವಣೆಗಳಾಗಿವೆ. ಆದರೆ ಪತ್ರಕರ್ತರ ಸ್ಥಿತಿಗತಿ ಬದಲಾಗಿಲ್ಲ. ಪತ್ರಕರ್ತರ ಸ್ಥಿತಿಗತಿಗಳ ಬದಲಾವಣೆಗೆ ಗಂಭೀರ ಚಿಂತನೆ ಅಗತ್ಯವಿದೆ ಎಂದರು.

ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್ ಪ್ರಕ್ರಿಯೆ ಚಾಲನೆಯಾಗಲಿದೆ. ಮುಂದಿನ 15 ದಿನದಲ್ಲಿ ಜಾರಿಗೆ ಬರಲಿದೆ. ಈಗಾಗಲೇ ಮುಖ್ಯಮಂತಿ ಭರವಸೆ ನೀಡಿದಂತೆ ಆರೋಗ್ಯ ವಿಮೆಗೂ ಚಾಲನೆ ನೀಡಲಾಗಿದೆ. ಎಪಿಎಲ್, ಬಿಪಿಎಲ್ ಇಲ್ಲದೆ ಆರೋಗ್ಯಭಾಗ್ಯ 2 ತಿಂಗಳಲ್ಲಿ ಕೈಗೂಡಲಿದೆ. ಸೂರು ನೀಡುವ ವಿಚಾರದಲ್ಲಿ ಜಿಲ್ಲಾಡಳಿತಗಳು ಜಾಗ ಗುರುತಿಸಿ ಕೊಟ್ಟರೆ ಅದನ್ನು ಪತ್ರಕರ್ತರಿಗೆ ನೀಡಲು ಸಿದ್ಧವಿದೆ ಎಂದು ಕೆ.ವಿ.ಪ್ರಭಾಕರ್ ನುಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಬಿ.ಸುರೇಶಬಾಬು, ಬಿ.ಸುರೇಶಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿದರು. ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್, ಡಾ.ನಾಗಣ್ಣ, ಕಾಯರ್ ಬೋರ್ಡ್‌ನ

ನಟರಾಜು, ಬಾಲಭವನದ ಅಧ್ಯಕ್ಷ ನಾಯ್ಡು, ರಾಷ್ಟ್ರೀಯ ಮಂಡಳಿ ಸದಸ್ಯ ಟಿ.ಎನ್.ಮಧುಕರ್, ಡಿ.ಎಂ.ಸತೀಶ್, ಅನುಶಾಂತರಾಜು ಉಪಸ್ಥಿತರಿದ್ದರು.

ಪ್ರಮುಖ ನಿರ್ಣಯಗಳು :

► ರಾಜ್ಯದ ಪತ್ರಕರ್ತರಿಗೆ ಉಚಿತ ಆರೋಗ್ಯ ವಿಮೆ.

► ಈಗಿರುವ ಪತ್ರಕರ್ತರ ಮಾಸಾಶನವನ್ನು ಹೆಚ್ಚಳ ಮಾಡುವ ಜತೆಗೆ ಮಾಸಾಶನ ಪಡೆಯಲು ವಿಧಿಸಿರುವ ನಿಬಂಧನೆಗಳನ್ನು ಸರಳೀಕರಣಗೊಳಿಸುವುದು.

► ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್ ಒದಗಿಸುವ ಸಂಬಂಧ ರಾಜ್ಯ ಸರಕಾರ ವಿಧಿಸಿರುವ ಮಾರ್ಗಸೂಚಿಗಳನ್ನು ಸರಳೀಕರಣಗೊಳಿಸುವುದು ಹಾಗೂ ಹೋಬಳಿ ಮಟ್ಟದ ಪತ್ರಕರ್ತರಿಗೆ ಗ್ರಾಮೀಣ ಬಸ್‌ಪಾಸ್ ತಲುಪಿಸುವುದು.

► ನೆರೆ ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣದಲ್ಲಿ ಪತ್ರಕರ್ತರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಕರ್ನಾಟಕದ ಪತ್ರಕರ್ತರಿಗೂ ವಿಸ್ತರಿಸುವ ಕುರಿತು ಅಧ್ಯಯನ ಮಾಡಲು ಸಮಿತಿ ರಚನೆ ಮಾಡಿ, ಅಧ್ಯಯಕ್ಕೆ ನಿಯೋಗ ತೆರಳುವುದು.

► ಪತ್ರಕರ್ತರು ನಿಧನರಾದ ಸಂದರ್ಭದಲ್ಲಿ ಬಾರ್ ಕೌನ್ಸಿಲ್ ಸದಸ್ಯರಿಗೆ ನೀಡುವಂತೆ 5 ಲಕ್ಷ ರೂ. ಪರಿಹಾರವನ್ನು ನೀಡುವುದು.

► ರಾಜ್ಯದಲ್ಲಿ ಪ್ರಸ್ತುತ ಈಗಿರುವ ಜಾಹೀರಾತು ದರವನ್ನು ಶೇ.12ರಷ್ಟು ಹೆಚ್ಚಳ ಮಾಡುವ ಕುರಿತು ನಿರ್ಣಯಗಳನ್ನು ಮಂಡಿಸಲಾಯಿತು.

► ಇದೇ ವೇಳೆ ಮುಂದಿನ 2026ರಲ್ಲಿ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ರಾಯಚೂರು ಜಿಲ್ಲೆಯಲ್ಲಿ ನಡೆಸಲು ಸಮ್ಮೇಳನದಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News