Tumakur | ಗ್ರಾಮ ಆಡಳಿತಾಧಿಕಾರಿ ಸಾವು: ಡಿಸಿಎಂ ಭರವಸೆ ಬಳಿಕ ಕಂದಾಯ ನೌಕರರ ಪ್ರತಿಭಟನೆ ಅಂತ್ಯ
ತುಮಕೂರು : ಗ್ರಾಮ ಆಡಳಿತಾಧಿಕಾರಿಯೊಬ್ಬರ ಸಾವಿನ ಹಿನ್ನೆಲೆಯಲ್ಲಿ, ಸಾವಿಗೆ ಅಧಿಕಾರಿಗಳ ಒತ್ತಡವೇ ಕಾರಣ ಎಂದು ಆರೋಪಿಸಿ ಕಂದಾಯ ಇಲಾಖೆ ನೌಕರರು ನಡೆಸುತ್ತಿದ್ದ ಪ್ರತಿಭಟನೆಯು ಉಪಮುಖ್ಯಮಂತ್ರಿಗಳ ಭರವಸೆಯ ಬಳಿಕ ಕೊನೆಗೊಂಡಿತು.
ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳುವ ವೇಳೆ ಅಪಘಾತಕ್ಕೀಡಾಗಿ ವಿಎಒ ಭುವನ ಸಾವನ್ನಪಿದ್ದರು. ಸಾವಿಗೆ ಅಧಿಕಾರಿಗಳ ಒತ್ತಡವೇ ಕಾರಣ ಎಂದು, ತಹಶೀಲ್ದಾರ್ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಕಂದಾಯ ಇಲಾಖೆಯ ನೌಕರರು ಶನಿವಾರ ಆಹೋ ರಾತ್ರಿ ಪ್ರತಿಭಟನೆ ನಡೆಸಿ, ರಜಾ ದಿನವಾದ ರವಿವಾರವೂ ಪ್ರತಿಭಟನೆ ಮುಂದುವರೆಸಿದ್ದರು.
ಜಿಲ್ಲಾಧಿಕಾರಿಗಳು ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಚಿತ್ರದುರ್ಗ ಜಿಲ್ಲೆಯ ಪ್ರವಾಸದಿಂದ ಹಿಂದುರಿಗಿದ ಡಿಸಿಎಂ ಹಾಗೂ ಕಂದಾಯ ಸಚಿವರು ಸ್ಥಳಕ್ಕೆ ಭೇಟಿ ನೀಡಿ, ನೌಕರರ ಮನವಿ ಆಲಿಸಿ, ಸೂಕ್ತ ಕ್ರಮದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.
ಪ್ರತಿಭಟನಾ ನಿರತ ಕಂದಾಯ ಇಲಾಖೆ ನೌಕರರನ್ನು ಉದ್ದೇಶಿಸಿ ಮಾತನಾಡಿದ ಡಾ.ಜಿ.ಪರಮೇಶ್ವರ, ಘಟನೆ ಒತ್ತಡದಿಂದಾಗಿದ್ದರೆ ಅಥವಾ ಬೇರೆ ಕಾರಣದಿಂದ ಆಗಿದ್ದರೆ ತನಿಖೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಪ್ರತಿಭಟನೆ ರಾಜಕೀಯ ಕಾರಣಕ್ಕೆ ಆಗಬಾರದು, ನನಗೆ ಅನಾರೋಗ್ಯದ ಕಾರಣದಿಂದ ಶನಿವಾರ ಬರಲು ಸಾಧ್ಯವಾಗಿಲ್ಲ. ಗ್ರಾಮ ಆಡಳಿತಾಧಿಕಾರಿ ಚಿಕಿತ್ಸೆಗೆ ಸೂಚನೆ ನೀಡಿದ್ದೆ, ದುರಾದೃಷ್ಟವಶಾತ್ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಎರಡನೇ ಕಂದಾಯ ಸಚಿವ ನಾನು. ನನಗೂ 40 ವರ್ಷದ ಸಾರ್ವಜನಿಕ ಬದುಕಿನ ಜವಾಬ್ಧಾರಿ ಇದೆ. ಎಲ್ಲರನ್ನೂ ಸಮಾನವಾಗಿ ಕಾರಣಬೇಕು ಎಂಬ ಕಲ್ಪನೆಯಿದೆ, ನಿಮಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ನಾನು ಅಧಿಕಾರ ವಹಿಸಿಕೊಂಡ ಒಂದು ವಾರದಲ್ಲಿ ಬಡ್ತಿ ಪ್ರಕ್ರಿಯೆ ಆರಂಭಿಸಿದ್ದೇನೆ. ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ, ಪತಿ, ಪತ್ನಿ ಪ್ರಕರಣದಲ್ಲಿ ವರ್ಗಾವಣೆಗೆ, ಸಿ ಅಂಡ್ ಆರ್ ನಿಯಮ ರೂಪಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ ಎಂದರು.