Tumakur | ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ಹುದ್ದೆಯಿಂದ ರಂಗಸ್ವಾಮಿ ವಜಾ

Update: 2026-08-21 19:35 IST

ರಂಗಸ್ವಾಮಿ

ತುಮಕೂರು : ಭ್ರಷ್ಟಾಚಾರ ಹಾಗೂ ಲಂಚ ಪ್ರಕರಣದಲ್ಲಿ ತುರುವೇಕೆರೆ ತಾಲೂಕಿನ ಮಾಯಸಂದ್ರ ನಾಡಕಚೇರಿ ವ್ಯಾಪ್ತಿಯ ತುಯಲಹಳ್ಳಿ ವೃತ್ತದ ಗ್ರಾಮ ಸಹಾಯಕ ರಂಗಸ್ವಾಮಿ ಎಂಬಾತ ಕರ್ತವ್ಯಲೋಪ ಎಸಗಿರುವುದು ಕಂಡುಬಂದಿದ್ದು, ಆತನನ್ನು ಹುದ್ದೆಯಿಂದ ವಜಾಗೊಳಿಸಿ ತಹಶೀಲ್ದಾರ್ ಎನ್.ಎ.ಕುಂಞ ಅಹ್ಮದ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ಆರೋಪಿ ರಂಗಸ್ವಾಮಿಯು ಅನಾಮಧೇಯ ವ್ಯಕ್ತಿಯೊಬ್ಬರ 30 ಗುಂಟೆ ಜಮೀನಿನ ಖಾತೆ ಮಾಡಿಕೊಡುವ ವಿಚಾರದಲ್ಲಿ 3 ಲಕ್ಷ ರೂ. ಹಣಕ್ಕಾಗಿ ಬೇಡಿಕೆಯಿಟ್ಟಿರುವ ಕುರಿತು ಹಾಗೂ ಈ ಲಂಚದ ವ್ಯವಹಾರದಲ್ಲಿ ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯಕರ್ತ ಚನ್ನಯ್ಯ ಸಿ. ರನ್ನು ದುರುದ್ದೇಶಪೂರ್ವಕವಾಗಿ ಸಿಲುಕಿಸಲು ಯತ್ನಿಸುತ್ತಿರುವ ಆಡಿಯೋ ವೈರಲ್ ಆಗಿತ್ತು.

ಅಲ್ಲದೆ, ತುಯಲಹಳ್ಳಿ/ಮಲ್ಲೂರು ವ್ಯಾಪ್ತಿಗೆ ಬರುವ ಅಮಾನಿಕೆರೆಯಲ್ಲಿ ಅಕ್ರಮವಾಗಿ ಮಣ್ಣು ಹೊಡೆಯುವವರೊಂದಿಗೆ ಆರೋಪಿ ರಂಗಸ್ವಾಮಿ ಶಾಮೀಲಾಗಿ ಹಣ ಪಡೆದು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಸಮಗ್ರ ತನಿಖೆ ನಡೆಸುವಂತೆ ವಿಡಿಯೋ ಹಾಗೂ ಆಡಿಯೋ ದಾಖಲೆಗಳ ಸಹಿತ ಕೆಆರ್‌ಎಸ್ ಪಕ್ಷದ ಚನ್ನಯ್ಯ ಸಿ. ತಹಶೀಲ್ದಾರರಿಗೆ ದೂರು ಸಲ್ಲಿಸಿದ್ದರು.

ಈ ಸಂಬಂಧ ದೂರಿನನ್ವಯ ಆರೋಪಿ ರಂಗಸ್ವಾಮಿಯನ್ನು ವಿಚಾರಣೆ ನಡೆಸಲಾಗಿದ್ದು, ಆತ ಕರ್ತವ್ಯ ಲೋಪವೆಸಗಿರುವುದು ಕಂಡುಬಂದಿರುವುದರಿಂದ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ರಂಗಸ್ವಾಮಿಯನ್ನು ಮಾಯಸಂದ್ರ ಹೋಬಳಿ ತುಯಲಹಳ್ಳಿ ವೃತ್ತದ ಗ್ರಾಮ ಸಹಾಯಕ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ತಹಶೀಲ್ದಾರ್ ಆದೇಶದಲ್ಲಿ ತಿಳಿಸಿದ್ದಾರೆ.

‘ಮಾಯಸಂದ್ರ ನಾಡಕಚೇರಿಯಿಂದ ದೊಡ್ಡ ಲಂಚಕೋರನ ಬಿಡುಗಡೆಯಾಗಿದೆ. ಗ್ರಾಮಸಹಾಯಕ ರಂಗಸ್ವಾಮಿಗೆ ಲಂಚ ಕೊಟ್ಟು ನೊಂದಿದ್ದ ಸ್ಥಳೀಯ ರೈತರು ನಮಗೆ ಹಲವು ದೂರುಗಳನ್ನು ನೀಡಿದ್ದರು. ಈತ ನನ್ನನ್ನೇ ಲಂಚದ ಪ್ರಕರಣವೊಂದರಲ್ಲಿ ಸಿಲುಕಿಸಲು ಯತ್ನಿಸಿದ್ದ. ರಂಗಸ್ವಾಮಿಯ ಭ್ರಹ್ಮಾಂಡ ಭ್ರಷ್ಟಾಚಾರವನ್ನು ದಾಖಲೆ ಸಮೇತವಾಗಿ ತುರುವೇಕೆರೆ ತಹಶೀಲ್ದಾರರಿಗೆ ಕೆಆರ್‌ಎಸ್ ನಿಯೋಗದಿಂದ ದೂರು ನೀಡಿದ್ದೆವು. ಸದ್ಯ, ಇಲಾಖಾ ವಿಚಾರಣೆಯಲ್ಲಿ ರಂಗಸ್ವಾಮಿ ಭ್ರಷ್ಟಾಚಾರ ಬಯಲಾಗಿದೆ. ಆತನನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, ಇದು ಸಂತ್ರಸ್ತ ರೈತರ ಕಣ್ಣೀರಿನ ಶಾಪ. ನಮ್ಮ ಕೆಆರ್‌ಎಸ್ ಪಕ್ಷದ ಹೋರಾಟದ ಫಲ. ಕೊನೆಗೂ ನ್ಯಾಯ ಸಿಕ್ಕಿದೆ.’

- ಚನ್ನಯ್ಯ ಸಿ., ಎಸ್ಸಿಎಸ್ಟಿ ಘಟಕ, ರಾಜ್ಯ ಕಾರ್ಯದರ್ಶಿ, ಕೆಆರ್‌ಎಸ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News