×
Ad

ಡಿಸಿ ಮನ್ನಾ ಭೂಮಿ ಮರುಹಂಚಿಕೆ, ನಕಲಿ ಪ್ರಮಾಣಪತ್ರ ವಿರುದ್ಧ ಕ್ರಮ: ದಸಂಸ ನಿಯೋಗದಿಂದ ಸಮಸ್ಯೆಗಳ ಬಗ್ಗೆ ಡಿಸಿ ಜೊತೆ ಸಮಾಲೋಚನೆ

Update: 2025-08-13 19:28 IST

ಉಡುಪಿ, ಆ.13: ಜಿಲ್ಲೆಯಲ್ಲಿ ದಲಿತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ನಿಯೋಗವು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರೊಂದಿಗೆ ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಲೋಚನೆ ನಡೆಸಿತು.

ಉಡುಪಿ ಜಿಲ್ಲೆಯಲ್ಲಿ ಇರುವ ಲಭ್ಯ ಡಿಸಿ ಮನ್ನಾ ಭೂಮಿಗಳನ್ನು ಗುರುತಿಸಿ, ಅರ್ಹ ಭೂ ರಹಿತ ಪರಿಶಿಷ್ಟರಿಗೆ ಮರು ಹಂಚಿಕೆ ಮಾಡುವ ಕಾರ್ಯಕ್ರಮವನ್ನು ಕೂಡಲೇ ಜಾರಿಗೊಳಿಸಬೇಕು. ನಿರುದ್ಯೋಗಿ ಪರಿಶಿಷ್ಟ ಯುವಕರಿಗೆ ಉದ್ಯೋಗ ಕಲ್ಪಿಸಲು ಉಡುಪಿ ಜಿಲ್ಲೆಯ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ವಾರ್ಷಿಕ ಕನಿಷ್ಟ 2 ಕೋಟಿ ಅನುದಾನ ಒದಗಿಸಬೇಕು ಎಂದು ನಿಯೋಗ ಆಗ್ರಹಿಸಿದೆ.

ಉಡುಪಿ ಜಿಲ್ಲೆಯಲ್ಲಿ ಪರಿವಾರ ನಾಯ್ಕ, ಮೊಗೇರ ಮತ್ತು ಭೋವಿ ಸಮುದಾಯಗಳು ಪರಿಶಿಷ್ಟರ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ನೀಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಮತ್ತು ಇವರಿಗೆ ಜಾತಿ ಪ್ರಮಾಣ ಪತ್ರ ವಿತರಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಉಡುಪಿ ಜಿಲ್ಲೆಯಲ್ಲಿ ಪರಿಶಿಷ್ಟೇತರರು ಅಮಾಯಕ ದಲಿತರ ಹೆಸರಿನಲ್ಲಿ ಗುತ್ತಿಗೆ ಪರವಾನಿಗೆಯನ್ನು ಮಾಡಿಕೊಂಡು ಕನಿಷ್ಟ ಮೊತ್ತಕ್ಕೆ ಟೆಂಡರ್ ಸಲ್ಲಿಸಿ, ಪರಿಶಿಷ್ಟರಿಗೆ ಸಿಗಬೇಕಾಗಿರುವ ಟೆಂಡರ್ ಕಾಮಗಾರಿಗಳನ್ನು ಪಡೆದು ಕೊಳ್ಳುತ್ತಿದ್ದಾರೆ ಇಂತಹ ಪ್ರಕರಣಗಳ ಬಗ್ಗೆ ವಿಶೇಷ ತನಿಖೆ ನಡೆಸಿ, ಅಂತಹ ಪರಿಶಿಷ್ಟೇತರ ಗುತ್ತಿಗೆದಾರರ ಗುತ್ತಿಗೆ ಲೈಸನ್ಸ್ ರದ್ದುಗೊಳಿಸಬೇಕು.

ಉಡುಪಿ ಜಿಲ್ಲೆಯಲ್ಲಿ ಪಿಟಿಸಿಎಲ್ ಕಾಯ್ದೆ ನೆಪಮಾಡಿಕೊಂಡು, ಪರಿಶಿಷ್ಟ ಜಾತಿ/ಪಂಗಡದವರ ಮಂಜೂರು ಭೂಮಿ ಗಳನ್ನು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡುವುದನ್ನು ನಿಲ್ಲಿಸಲಾಗಿದೆ. ಇದರಿಂದ ಜಿಲ್ಲೆಯ ದಲಿತ ಸಮುದಾಯಕ್ಕೆ ಉದ್ಯಮ ನಡೆಸಲು ದೊಡ್ಡ ಹಿನ್ನಡೆಯಾಗಿರುತ್ತದೆ. ಜಿಲ್ಲೆಯಲ್ಲಿ ಪೋಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆ/ನಿಮಯದಂತೆ ಕುಂದು ಕೊರತೆ ಸಭೆಯನ್ನು ಕರೆಯುತ್ತಿಲ್ಲ ಎಂದು ನಿಯೋಗ ಆರೋಪಿಸಿತು.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅಕ್ರಮ-ಸಕ್ರಮ ಸಮಿತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಸಮಿತಿಗಳು ಪರಿಶಿಷ್ಟರ ಅರ್ಜಿಗಳನ್ನು ಆಧ್ಯತೆಯ ಮೇರೆಗೆ ಪರಿಗಣಿಸುತ್ತಿಲ್ಲ. ಪರಿಶಿಷ್ಟರಿಗೆ ಮಂಜೂರು ಆಗಿರುವ ದರ್ಖಾಸ್ತು ಭೂಮಿಗಳು ಬಲಾಢ್ಯ ಸಮುದಾಯಗಳ ಸ್ವಾಧೀನತೆಯಲ್ಲಿದ್ದು, ಇನ್ನೂ ಕೆಲವು ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ಅಕ್ರಮವಾಗಿ ಸ್ವಾಧೀನತೆ ಹೊಂದಿರುತ್ತದೆ. ಇನ್ನೂ ಕೆಲವು ಸಾಮಾಜಿಕ ಅರಣ್ಯದ ಹೆಸರಿನಲ್ಲಿ ಅರಣ್ಯ ಇಲಾಖೆಯವರು ಸ್ವಾಧೀನತೆ ಹೊಂದಿರುತ್ತಾರೆ. ಇಂತಹ ಭೂಮಿಗಳನ್ನು ಮಂಜೂರಾತಿದಾರರಿಗೆ ಒದಗಿಸಿಕೊಡಬೇಕು.

ಜಿಲ್ಲೆಯಲ್ಲಿ ಪರಿಬಾವಿತ ಅರಣ್ಯ ಪ್ರದೇಶವೆಂದು ದೋಷಪೂರಿತ ನಿರ್ಣಯಗಳಿಂದ ಸಮುದಾಯಕ್ಕೆ ಮಂಜೂರು ಆಗಿರುವ ಭೂಮಿಗಳು ಮತ್ತು ಮಂಜೂರಾತಿಗಾಗಿ ನಿಗದಿ ಅರ್ಜಿ ನಮೂನೆಯಲ್ಲಿ ಸಲ್ಲಿಸಿರುವ ಪರಿಶಿಷ್ಟರ ಅರ್ಜಿ ಗಳನ್ನು ಪರಿಗಣಿಸುತ್ತಿಲ್ಲ. ಈ ಬಗ್ಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯು ಜಂಟಿ ಸರ್ವೆ ನಡೆಸಬೇಕು.

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂಮಿ ಮತ್ತು ವಸತಿ ಸಮಸ್ಯೆಗಳ ನಿವಾರಣೆಗಾಗಿ ಪ್ರತೀ ತಾಲೂಕು ತಹಶೀಲ್ದಾರರ ವ್ಯಾಪ್ತಿಯಲ್ಲಿ ವಿಶೇಷ ಕಂದಾಯ ಅದಾಲತ್ ನಡೆಸಬೇಕು ಎಂದು ದಸಂಸ ನಿಯೋಗ ಸಭೆಯಲ್ಲಿ ಆಗ್ರಹಿಸಿದೆ.

ನಿಯೋಗದಲ್ಲಿ ದಸಂಸ ಮುಖಂಡರಾದ ಸುಂದರ ಮಾಸ್ತರ್, ಮಂಜುನಾಥ್ ಗಿಳಿಯಾರ್, ಶಾಮರಾಜ ಬಿಡ್ತಿ, ಶ್ಯಾಮಸುಂದರ್ ತೆಕ್ಕಟ್ಟೆ, ಸುರೇಶ್ ಹಕ್ಲಾಡಿ, ಅಣ್ಣಪ್ಪ ನಕ್ರೆ, ಭಾಸ್ಕರ ಮಾಸ್ತರ್, ಮಂಜುನಾಥ್ ನಾಗೂರು, ರಾಜೇಂದ್ರ ಕಾಪು, ರಾಘವ ಕುಕ್ಕುಜೆ, ಶಿವರಾಜ್ ಬೈಂದೂರು, ರಾಜು ಕೆ.ಸಿ., ಹರೀಶ್ಚಂದ್ರ ಕೆ.ಡಿ., ದೇವು ಹೆಬ್ರಿ, ಗೀತಾ ಸುರೇಶ್, ವಿನಯಾ ಮಾಸ್ತಿಕಟ್ಟೆ, ಕುಮಾರ್ ದಾಸ್ ಹಾಲಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News