ತುಳುವ ಮಹಾಸಭೆ ಮೂಲಕ ತುಳುನಾಡು ಕಟ್ಟುವ ಸಂಕಲ್ಪ: ತಾರಾ ಆಚಾರ್ಯ
ಉಡುಪಿ, ಆ.13: ತುಳುವ ಮಹಾಸಭೆಯನ್ನು ಪ್ರತಿಯೊಬ್ಬ ತುಳುವನೂ ಆಲಂಗಿಸಿಕೊಳ್ಳಬೇಕು. ನಮ್ಮ ಹಿರಿಯರು ಕಟ್ಟಿದ ತುಳುನಾಡಿನ ಕನಸು ನನಸಾಗಲು ಇದು ಅಗತ್ಯ. ಸರಕಾರಗಳಲ್ಲಿ ನಾವು ನಾಡು-ಬೀಡು ಕೇಳಿಲ್ಲ, ನಮ್ಮ ಭಾಷೆಗೆ ಗೌರವ ಕೇಳಿದ್ದೇವೆ. ಅದು ಇನ್ನೂ ದೊರಕದಿದ್ದರೂ, ನಮ್ಮ ಸಂಸ್ಕೃತಿ-ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ತುಳುವರ್ಲ್ಡ್ ಫೌಂಡೇಶನ್ ಉಪಾಧ್ಯಕ್ಷೆ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ತಾರಾ ಆಚಾರ್ಯ ಹೇಳಿದ್ದಾರೆ.
ಉಡುಪಿಯ ಹಿಂದಿ ಭವನದಲ್ಲಿ ಜರಗಿದ ಉಡುಪಿ ತಾಲೂಕು ತುಳುವ ಮಹಾಸಭೆಯ ಸಂಚಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸಭೆಯನ್ನು ತುಳುವರ್ಲ್ಡ್ ಫೌಂಡೇಶನ್ ಕಟೀಲ್ ಇದರ ಕಾರ್ಯದರ್ಶಿ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಲಿಮಿಟೆಡ್ನ ನಿವೃತ್ತ ಮುಖ್ಯ ಪರಿಚರಣ ಪ್ರಬಂಧಕ ವಸಂತ ರೈ ಕುತ್ತೆತ್ತೂರು ಉದ್ಘಾಟಿಸಿದರು. ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ.ರಾಜೇಶ್ ಆಳ್ವ ಬದಿಯಡ್ಕ, ಪ್ರಧಾನ ಸಂಚಾಲಕ ಪ್ರಮೋದ್ ಸಪ್ರೆ, ತುಳುವ ಮಹಾಸಭೆ ಮಂಗಳೂರು ತಾಲೂಕು ಸಂಚಾಲಕರು ಅರವಿಂದ ಬೆಳ್ಚಾಡ, ಕಾರ್ಯನಿರ್ವಾಹಕ ಸಂಚಾಲಕ ರಾಘವೇಂದ್ರ ಶೆಟ್ಟಿ ಅತ್ರಾಡಿ ಮತ್ತು ಹರಿಪ್ರಸಾದ್ ರೈ ಜಿಕೆ ಉಪಸ್ಥಿತರಿದ್ದರು.
ಸಭೆಯಲ್ಲಿ ಉಡುಪಿ ತಾಲೂಕು ಸಂಚಾಲಕ ಸುನಿಲ್ ಸಾಲಿಯಾನ್, ಭಾಸ್ಕರ ಪೂಜಾರಿ, ಅಶೋಕ್ ಶೆಟ್ಟಿ ಉಡುಪಿ, ರಕ್ಷಿತ್ ಆಚಾರ್ಯ, ಮಾಲತಿ ಆಚಾರ್ಯ, ಆದಿತ್ಯ ಭಾಸ್ಕರ್, ಶಿವಪ್ರಸಾದ್ ಆಚಾರ್ಯ ಪೆರ್ಡೂರು, ಉಲ್ಲಾಸ್ ಮೂರೂರು, ರಂಜಿತ್ ಕಾರ್ಕಳ, ಪ್ರಶಾಂತ್ ಹಿರಿಯಡ್ಕ ಮೊದಲಾದವರು ಕಾರ್ಯ ವೈಖರಿ ಕುರಿತು ಸಲಹೆ-ಸೂಚನೆಗಳನ್ನು ನೀಡಿದರು.
ತುಳುವ ಮಹಾಸಭೆಯ ಉಡುಪಿ ತಾಲೂಕು ಪ್ರಧಾನ ಸಂಚಾಲಕ ವಿಶ್ವನಾಥ ಆಚಾರ್ಯ ಸ್ವಾಗತಿಸಿದರು. ಸೌಮ್ಯರಾಣಿ ವಿ.ಆಚಾರ್ಯ ಪೆರ್ಡೂರು ಕಾರ್ಯಕ್ರಮ ನಿರ್ವಹಿಸಿದರು.