ಉಡುಪಿ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ
ಕುಂದಾಪುರ, ಸೆ.13: ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯು ಕೆರಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರ ಯೋಗ ನರಸಿಂಹ ಸ್ವಾಮಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷ ಸುದರ್ಶನ್ ಶೆಟ್ಟಿ ವಹಿಸಿದ್ದರು. ಪಂಚಾಯತ್ ಉಪಾಧ್ಯಕ್ಷೆ ಕುಸುಮಾ ಬಿಲ್ಲವ ಹಾಗೂ ಪಂಚಾಯತ್ನ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 10 ಜನ ಬೋಧಕರನ್ನು ಗುರುತಿಸಿ ಗೌರವಿಸಲಾಯಿತು ಹಾಗೂ ಅನಕ್ಷರಸ್ಥರಿಗೆ ಪುಸ್ತಕ ಮತ್ತು ಕಲಿಕಾ ಸಾಧನ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬೈಂದೂರು ಸಾಕ್ಷರತಾ ನೋಡಲ್ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಬಿಆರ್ಪಿ ರಾಮಕೃಷ್ಣ ದೇವಾಡಿಗ ಹಾಗೂ ಜಿಲ್ಲಾ ಸಾಕ್ಷರತಾ ತಂಡದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ ನಿವೃತ್ತ ಶಿಕ್ಷಕ ಚಂದ್ರಶೇಖರ್ ಶೆಟ್ಟಿ ಮಣಿಗೇರಿ ಅವರನ್ನು ಸನ್ಮಾನಿಸಲಾಯಿತು.
ಬೈಂದೂರು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ್ ನಾಯ್ಕ್, ಮಂಜುನಾಥ್ ಆರ್.ದೇವಾಡಿಗ, ರಾಧಿಕಾ ಹಾಗೂ ವಂಡ್ಸೆ ಸಿಆರ್ಪಿ ಎಂ. ನಾಗರಾಜ್ ಶೆಟ್ಟಿ, ಕರ್ಕುಂಜೆ ಸಿಆಪಿರ್ ರವಿಚಂದ್ರ, ಶಿರೂರು ಸಿಆರ್ಪಿ ಗಣೇಶ್ ಪೂಜಾರಿ, ಕಂಬದಕೋಣೆ ಸಿಆರ್ಪಿ ರಾಮನಾಥ ಮೇಸ್ತ ಉಪಸ್ಥಿತರಿದ್ದರು.
ಜಿಲ್ಲಾ ವಯಸ್ಕರ ಶಿಕ್ಷಣ ಕೇಂದ್ರದ ಅಸಿಸ್ಟೆಂಟ್ ಪ್ರೋಗ್ರಾಮರ್ ಉಮೇಶ ಆಚಾರ್ಯ ಸ್ವಾಗತಿಸಿದರು. ಕೆರಾಡಿ ಗ್ರಾಪಂ ಪಿಡಿಒ ನಾರಾಯಣ ಬನಶಂಕರಿ ವಂದಿಸಿದರು.