ಆಯುರ್ವೇದ ದಿನಾಚರಣೆ: ಕಾಲ್ನಡಿಗೆ ಜಾಥಾ, ಬೀದಿ ನಾಟಕ
ಉಡುಪಿ, ಸೆ.25: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಮುದಾಯ ಸೇವಾ ಘಟಕ, ಸಂಹಿತಾ ಸಿದ್ಧಾಂತ ಹಾಗೂ ಸಂಸ್ಕೃತ ವಿಭಾಗದ ವತಿಯಿಂದ ಆಯುರ್ವೇದ ದಿನಾಚರಣೆಯ ಅಂಗವಾಗಿ ಆಯುರ್ವೇದ ಮಾಹಿತಿ ಕುರಿತ ಕಾಲ್ನಡಿಗೆ ಜಾಥಾ ಹಾಗೂ ಬೀದಿ ನಾಟಕಗಳನ್ನು ಸೆ.19ರಂದು ಏರ್ಪಡಿಸಲಾಗಿತ್ತು.
ಕಾಲೇಜು ಆವರಣದಿಂದ ಪ್ರಾರಂಭಗೊಂಡ ಜಾಥಾ ಕಟ್ಟೆಗುಡ್ಡೆ, ಬಲಾಪಾದೆ, ಕಿನ್ನಿಮುಲ್ಕಿ ಮೂಲಕ ಕನ್ನರ್ಪಾಡಿ ಶ್ರೀಜಯದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಮುಕ್ತಾಯಗೊಂಡಿತು. ಆಯುರ್ವೇದ ಕುರಿತಾದ ಮಾಹಿತಿಗಳನ್ನೊಳಗೊಂಡ ಸೂಚನಾ ಫಲಕಗಳನ್ನು ಪ್ರದರ್ಶಿಸಲಾಯಿತು. ಸುಮಾರು 125 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.
ಬಳಿಕ ಕನ್ನರ್ಪಾಡಿ ದೇವಾಲಯದ ಹೊರ ಆವರಣದಲ್ಲಿ ದಿನಚರ್ಯೆ, ಋತುಚರ್ಯೆಗಳ ಮಹತ್ವವನ್ನು ತಿಳಿಸುವ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. ಸಂತಾ ಸಿದ್ಧಾಂತ ಭಾಗಾಧ್ಯಕ್ಷೆ ಹಾಗೂ ಸಮುದಾಯ ಸೇವಾ ಘಟಕದ ಮುಖ್ಯಸ್ಥೆ ಡಾ.ವಿದ್ಯಾಲಕ್ಷ್ಮಿ ಕೆ. ಕಾರ್ಯಕ್ರಮ ಸಂಘಟಿಸಿದರು. ವಿಭಾಗದ ಬೋಧಕ ವರ್ಗದವರು, ಎನ್ನೆಸ್ಸೆಸ್, ರೋಟರ್ಯಾಕ್ಟ್, ರೆಡ್ಕ್ರಾಸ್ ಘಟಕಗಳ ಸದಸ್ಯರು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಆಯುರ್ವೇದದ ಬಗ್ಗೆ ಜಾಗೃತಿ ಮೂಡಿಸಲು ಸಹಕರಿಸಿದರು.