ಧರ್ಮಸ್ಥಳ ಪ್ರಕರಣದ ಎಸ್ಐಟಿ ತನಿಖೆ ಮಧ್ಯಂತರ ವರದಿ ರಾಜ್ಯದ ಜನತೆ ಮುಂದೆ ಇಡಿ: ಶಾಸಕ ಸುನೀಲ್ ಕುಮಾರ್
ಉಡುಪಿ, ಅ.3: ಧರ್ಮಸ್ಥಳ ಪ್ರಕರಣದ ಎಸ್ಐಟಿ ತನಿಖೆ ತಕ್ಷಣ ಮುಗಿಸಿ ಮಧ್ಯಂತರ ವರದಿ ನೀಡುವಂತೆ ಕೇಳಿದರೂ ಸರಕಾರ ಕೇಳುತ್ತಿಲ್ಲ. ಅಪಪ್ರಚಾರ ಮಾಡುವವರಿಗೆ ಸರಕಾರ ಪರೋಕ್ಷವಾಗಿ ಮನ್ನಣೆ ಕೊಡುತ್ತಿದೆ. ಈ ಬಗ್ಗೆ ಗುಮಾನಿಗಳು ನಿರ್ಮಾಣವಾಗಿವೆ. ತಕ್ಷಣ ಸರಕಾರ ಮಧ್ಯಂತರ ವರದಿಯನ್ನು ರಾಜ್ಯದ ಮುಂದೆ ಇಡಬೇಕು. ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ, ಶಾಸಕ ವಿ.ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವುದು ಶೇ.80 ಸರಕಾರ. ಆದ್ದರಿಂದ ರಸ್ತೆಗಳಲ್ಲಿ ಸಾವಿರಾರು ಗುಂಡಿಗಳು ಬಿದ್ದಿವೆ. ಇವತ್ತು ರಾಜ್ಯದಲ್ಲಿ ಗುಂಡಿಗಳು ಇಲ್ಲದ ರಸ್ತೆಗಳೇ ಇಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ. ಶೇ.80 ಸರಕಾರವೇ ಇದಕ್ಕೆ ಕಾರಣ. ನಾವು ಶಾಸಕರು ಹೊಸ ರಸ್ತೆಯನ್ನು ನಿರ್ಮಾಣ ಕೇಳುತ್ತಿಲ್ಲ. ಹೊಸ ರಸ್ತೆ ನಿರ್ಮಾಣ ಕನಸಿನ ಮಾತು. ಇರುವ ರಸ್ತೆಗಳ ಗುಂಡಿ ಮುಚ್ಚಿಸಲು ಆಗುತ್ತಿಲ್ಲ ಎಂದರು.
ಗಾಂಧಿ ಕುಟುಂಬ ಯಾವತ್ತು ಈ ದೇಶಕ್ಕೆ ನಿಷ್ಟರಾಗಿ ಇರಲಿಲ್ಲ. ವಿದೇಶಕ್ಕೆ ಹೋದಾಗ ಭಾರತವನ್ನು ಟೀಕೆ ಮಾಡು ವುದು ವ್ಯವಸ್ಥೆಯನ್ನು ಟೀಕೆ ಮಾಡುವುದು ಮುಂದುವರಿಸಿದ್ದಾರೆ. ಮೊದಲು ದೇಶದ ಬಗ್ಗೆ ನಿಷ್ಠೆಯನ್ನು ತೋರಿಸ ಬೇಕು. ಈ ನಡವಳಿಕೆ ನಾಯಕತ್ವವನ್ನು ರೂಪಿಸುವುದಿಲ್ಲ. ಮೊದಲು ದೇಶಕ್ಕೆ ನಿಷ್ಠರಾಗಬೇಕು. ಈ ಕುಟುಂಬ ಯಾವತ್ತೂ ದೇಶದ ಬಗ್ಗೆ ನಿಷ್ಠೆ ತೋರಿಸಿಲ್ಲ. ಮನೆಯಲ್ಲಿ ದೇಶದ ಬಗ್ಗೆ ನಿಷ್ಠೆ ಇಲ್ಲದ ಸಂಸ್ಕಾರ ಸಿಕ್ಕಿದೆ. ಆದ್ದರಿಂದ ವಿದೇಶದಲ್ಲಿ ಈ ರೀತಿಯ ಮಾತನಾಡಿದ್ದಾರೆ ಎಂದು ಅವರು ಟೀಕಿಸಿದರು.