×
Ad

ಗಂಗೊಳ್ಳಿ ಬಂದರಿನ ಆಧುನೀಕರಣ ಕಾಮಗಾರಿ ಶೀಘ್ರ ಪೂರ್ಣ: ಸಚಿವ ಮಂಕಾಳಿ ವೈದ್ಯ

ಕುಸಿದ ಜಟ್ಟಿ ಪುನರ್‌ ನಿರ್ಮಾಣಕ್ಕೆ ಲೋಕಾಯುಕ್ತ ತನಿಖೆ ಅಡ್ಡಿ

Update: 2025-10-08 20:19 IST

ಕುಂದಾಪುರ, ಅ.8: ಯಾವುದೇ ಸರಕಾರ ಅಭಿವೃದ್ದಿ, ಮೂಲಸೌಕರ್ಯ ಗಳನ್ನು ಒದಗಿಸುವ ಕೆಲಸವನ್ನು ಜನರ ತೆರಿಗೆ ಹಣದಲ್ಲಿ ಮಾಡುತ್ತದೆ. ಗಂಗೊಳ್ಳಿ ಮೀನುಗಾರಿಕಾ ಬಂದರಿನ ಆಧುನೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಶೇ.60-40 ಅನುಪಾತದಲ್ಲಿ ಜಂಟಿಯಾಗಿ ಒದಗಿಸಿದ ಸುಮಾರು 22.18 ಕೋಟಿ ರೂ. ಅನುದಾನದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು, ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಹೇಳಿದ್ದಾರೆ.

ಮೀನುಗಾರಿಕೆ ಇಲಾಖೆ ವತಿಯಿಂದ ಕೇಂದ್ರ ಪುರಸ್ಕೃತ ಪಿ.ಎಂ. ಎಂ.ಎಸ್.ವೈ ಯೋಜನೆಯಡಿ ಗಂಗೊಳ್ಳಿ ಮೀನುಗಾರಿಕೆ ಬಂದರಿನ ಆಧುನೀಕರಣ ಕಾಮಗಾರಿಗೆ ಬುಧವಾರ ಬಂದರಿನಲ್ಲಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಮೀನುಗಾರಿಕೆ ವಿಚಾರದಲ್ಲಿ ಗಂಗೊಳ್ಳಿ ಬಂದರು ಇತಿಹಾಸ ಹೊಂದಿದೆ. ಆದರೆ ಇಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ಇರುವುದರಿಂದ ಮತ್ತು ಕಾಮಗಾರಿಯಲ್ಲಿ ವ್ಯತ್ಯಾಸ ಆಗಿದ್ದರಿಂದ ಸಮಸ್ಯೆ ಉಂಟಾಗಿದೆ. ಬಂದರಿನ ಕುಸಿದ ಜೆಟ್ಟಿಯ ಪುನರ್ ನಿರ್ಮಾಣಕ್ಕೆ 6.5 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದರೂ, ಜೆಟ್ಟಿ ಕುಸಿತದ ಪ್ರಕರಣದ ತನಿಖೆ ಲೋಕಾಯುಕ್ತ ದಲ್ಲಿರುವುದರಿಂದ, ಲೋಕಾಯುಕ್ತ ವರದಿ ಬರುವ ತನಕ ಯಾವುದೇ ಅಭಿವೃದ್ಧಿ ಮಾಡುವಂತಿಲ್ಲ. ಎಷ್ಟು ಬೇಗ ಲೋಕಾಯುಕ್ತ ತನಿಖೆ ನಡೆಸಿ ವರದಿ ನೀಡುತ್ತದೋ, ಅಷ್ಟು ಬೇಗ ಕೆಲಸ ಪ್ರಾರಂಭಿಸಿ ಮೀನುಗಾರರಿಗೆ ಅನುಕೂಲ ಮಾಡಿಕೊಡಲು ಸಾಧ್ಯವಾಗುತ್ತದೆ ಎಂದರು.

ರಾಜ್ಯದಲ್ಲಿ 343 ಕಿ.ಮೀ ಉದ್ದದ ಕರಾವಳಿ ಪ್ರದೇಶದಲ್ಲಿ 13 ಬಂದರು ಗಳಿವೆ. ಮೀನುಗಾರರಿಗೆ ಅನುಕೂಲವಾ ಗುವ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ 2-3 ಬಂದರುಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಇಲ್ಲಿನ ಬಂದರು ಪೂರಕ ಅಭಿವೃದ್ದಿಗೆ ಹಾಲಿ ಶಾಸಕರು, ಮಾಜಿ ಶಾಸಕ ಗೋಪಾಲ ಪೂಜಾರಿ ಪಣತೊಟ್ಟಿದ್ದಾರೆ. 5 ಸಾವಿರ ಕೋಟಿ ಕೊಟ್ಟರೆ ಎಲ್ಲಾ ಬಂದರು ಅಭಿವೃದ್ಧಿ ಮಾಡಬಹುದು. ಬಂದರುಗಳ ಅಭಿವೃದ್ಧಿಗೆ ತೊಡಕಾಗಿದ್ದ ಸಿಆರ್‌ಝಡ್ ಸಮಸ್ಯೆ ಬಗೆಹರಿಸಲು ಒಂದುವರೆ ವರ್ಷ ತಗಲಿದ್ದು, ಇದೇ ಸಮಸ್ಯೆಯಿಂದಾಗಿ ಮರವಂತೆ ಹೊರ ಬಂದರು ಕಾಮಗಾರಿಯ ಸುಮಾರು 68 ಕೋಟಿ ರೂ. ಹಾಗೆ ಬಾಕಿ ಉಳಿದಿತ್ತು ಎಂದರು.

ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಗಂಗೊಳ್ಳಿ ಬಂದರು ಬಹಳ ಹಿಂದು ಳಿದಿದೆ. ಜೆಟ್ಟಿ ಸಮಸ್ಯೆ, ಡ್ರೆಜ್ಜಿಂಗ್ ಸಮಸ್ಯೆಗಳಿವೆ. ಸಾಗರಮಾಲಾ ಮತ್ತು ಮತ್ಸ್ಯಸಂಪದ ಯೋಜನೆ ಯಡಿ ಬಂದರುಗಳನ್ನು ಅಭಿವೃದ್ಧಿಪಡಿಸಲು ವಿಪುಲ ಅವಕಾಶಗಳಿವೆ. ಈ ಭಾಗದಲ್ಲಿ ದೂರದೃಷ್ಟಿಯ ಯೋಜನೆಗಳಿಗೆ ತುಂಬಾ ಅವಕಾಶಗಳಿವೆ. ಕೇಂದ್ರದ ಯೋಜನೆಗಳನ್ನು ತರಲು ಯಾವುದೇ ಕಾರಣಕ್ಕೂ ಹಿಂದೆ ಬೀಳಬಾರದು. ಇರುವ ಅವಕಾಶಗಳನ್ನು ಚೆನ್ನಾಗಿ ಉಪಯೋಗಿಸುವ ದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.

ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ, ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ ಕುಮಾರ್ ಕಳ್ಳೇರ್, ಮೀನುಗಾರಿಕೆ ಅಪರ ನಿರ್ದೇಶಕ ಸಿದ್ಧಯ್ಯ ಡಿ., ಜಂಟಿ ನಿರ್ದೇಶಕ ವಿವೇಕ ಆರ್., ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಸನ್ನ ಕುಮಾರ್ ಶೇಟ್, ಉಪನಿರ್ದೇಶಕ ಸಂಜೀವ ಅರಕೇರಿ, ಸಹಾಯಕ ನಿರ್ದೇಶಕ ಆಶಾಲತಾ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಶೋಭಾ, ಸಹಾಯಕ ನಿರ್ದೇಶಕಿ ಸುಮಲತಾ, ಗುತ್ತಿಗೆದಾರ ಪ್ರಶಾಂತ್ ಮೊಳಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ಸುಂದರ ಜಿ. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮೀನುಗಾರಿಕೆ ಇಲಾಖೆಯ ಗೋಪಾಲಕೃಷ್ಣ ವಂದಿಸಿದರು.

ಬಂದರಿನ ಆಧುನೀಕರಣ

ಗಂಗೊಳ್ಳಿ ಮೀನುಗಾರಿಕಾ ಬಂದರನ್ನು ಆಧುನೀಕರಣಗೊಳಿಸುವ ಸಲುವಾಗಿ ಈ ಕೆಳಗಿನ ಸೌಲಭ್ಯಗಳನ್ನು ಅಳವಡಿಸಲಾಗುತ್ತದೆ.

2 ಹರಾಜು ಮಳಿಗೆಗಳು, ಸಾರ್ವಜನಿಕ ಶೌಚಾಲಯ ಬ್ಲಾಕ್, 2 ಮಹಿಳಾ ವಿಶ್ರಾಂತಿ ಶೆಡ್, ಇಟಿಪಿ ಮತ್ತು ಒಳಚರಂಡಿ, ಕಾಂಕ್ರೀಟ್ ಸರ್ಫೇಸಿಂಗ್, 800 ಮೀ. ಉದ್ದದ ಕಾಂಪೌಂಡ್ ವಾಲ್, 1,25,000 ಲೀ. ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್, 60,000 ಲೀಟರ್ ಸಾಮರ್ಥ್ಯದ ಸಂಪ್ ಟ್ಯಾಂಕ್, ಪ್ರವೇಶ ದ್ವಾರದೊಂದಿಗೆ ಭದ್ರತಾ ಗಾರ್ಡ್ ಹೌಸ್, ಆರ್‌ಓ ಪ್ಲಾಂಟ್ ನೊಂದಿಗೆ ಫಿಶ್ ಹ್ಯಾಂಡ್ಲಿಂಗ್ ವ್ಯವಸ್ಥೆ, ಅತ್ಯುತ್ತಮ ಸಾಮರ್ಥ್ಯದ ಕನ್ವೇಯರ್ ವ್ಯವಸ್ಥೆ, ಲ್ಯಾಂಡ್ ಸ್ಕೇಪಿಂಗ್, ಗಾರ್ಡನಿಂಗ್ ಇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News