ಕುಂದಾಪುರ ಶಾಸ್ತ್ರ ಸರ್ಕಲ್ನಲ್ಲಿ ಕನ್ನಡ ಬಾವುಟ ಹಾರಿಸಲು ಅನುಮತಿಗಾಗಿ ಮನವಿ
ಕುಂದಾಪುರ: ಕುಂದಾಪುರ ಶಾಸ್ತ್ರಿ ಸರ್ಕಲ್ನಲ್ಲಿ ಕನ್ನಡ ಬಾವುಟ ಹಾರಿಸಲು ಅನುಮತಿ ಮತ್ತು ಶಾಶ್ವತ ಧ್ವಜಕಟ್ಟೆ ನಿರ್ಮಾಣಕ್ಕೆ ಅನುವು ಮಾಡಿಕೊಡುವಂತೆ ಆಗ್ರಹಿಸಿ ಕನ್ನಡ ಸಂಘಟನೆಗಳ ಒಕ್ಕೂಟ ಕರ್ನಾಟಕ ರಕ್ಷಣಾ ವೇದಿಕೆ ಕುಂದಾಪುರ ತಾಲೂಕು ಘಟಕದ ವತಿಯಿಂದ ಶುಕ್ರವಾರ ಕುಂದಾಪುರ ಪುರಸಭೆಗೆ ಮನವಿ ಸಲ್ಲಿಸಲಾಯಿತು.
ಕರವೇ ತಾಲೂಕು ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಉಪ್ಪುಂದ ಮಾತನಾಡಿ, ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಕನ್ನಡ ಧ್ವಜ ನಮ್ಮ ಭಾಷಾ ಹೆಮ್ಮೆಯ ಸಂಕೇತವಾಗಿದ್ದು ಸ್ಥಳೀಯ ಜನರಲ್ಲಿ ಕನ್ನಡ ಬಗ್ಗೆ ಗೌರವ ಮತ್ತು ಒಗ್ಗಟ್ಟಿನ ಭಾವನೆ ಬೆಳೆಯಲು ಸಹಕಾರಿಯಾಗಿದೆ. ಇಂತಹ ಧ್ವಜಕಟ್ಟೆಗಳು ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಶಾಶ್ವತವಾಗಿ ಸ್ಥಾಪಿತವಾಗಬೇಕೆಂಬ ನಿಟ್ಟಿನಲ್ಲಿ ಕುಂದಾಪುರದಲ್ಲಿ ಶಾಶ್ವತ ಕನ್ನಡ ಧ್ವಜ ಕಟ್ಟೆ ನಿರ್ಮಾಣಕ್ಕೆ ಅವಕಾಶ ನೀಡುವ ಕುರಿತು ಪುರಸಭೆ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಸಾಮಾನ್ಯ ಸಭೆಯಲ್ಲಿ ತಿರಸ್ಕರಿಸಲಾಗಿದೆ ಎಂದು ದೂರಿದರು.
ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಹಾಗೂ ಮುಖ್ಯಾಧಿಕಾರಿ ಆನಂದ ಜೆ. ಪ್ರತಿಕ್ರಿಯಿಸಿ, ಕನ್ನಡ ಧ್ವಜದ ಕುರಿತು ಯಾವುದೇ ಅಸಹನೆ ಇಲ್ಲ. ಕನ್ನಡ ನಮ್ಮ ಉಸಿರು, ಅನ್ನ. ಹಾಗಿರುವಾಗ ವಿರೋಧ ಮಾಡುವ ಪ್ರಶ್ನೆಯೇ ಇಲ್ಲ. ಸಂಚಾರ ಸಾರಿಗೆಗೆ ತೊಂದರೆ ಆಗದಂತೆ ಹಾಕುವುದು ಆದ್ಯತೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿಲುವು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಅ.ರಾ.ಪ್ರಭಾಕರ ಪೂಜಾರಿ, ಕುಂದಾಪುರ ಘಟಕ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೆ.ಸಿ., ಕುಂದಾಪುರ ಘಟಕದ ಪದಾಧಿಕಾರಿಗಳಾದ ಅಣ್ಣಪ್ಪ ಪೂಜಾರಿ, ರಾಜು ಬಸ್ರೂರು, ಶೇಖ್ ಹಫೀಜ್, ಜೋಯ್ ಜೆ.ಕರ್ವಾಲೋ, ಶಿವಾನಂದ, ದಿನೇಶ್ ಸಾರಂಗ್, ಭುಜಂಗ ಶೆಟ್ಟಿ, ಉಡುಪಿ ಜಿಲ್ಲಾ ಘಟಕದ ಪದಾದಿಕಾರಿಗಳು, ಸದಸ್ಯರು, ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.