‘ಸೂರ್ಯನ ಕುಣಿತ’ ಭೂಮಿ ಮೇಲಿನ ಪ್ರಾಕೃತಿಕ ವಿಕೋಪಗಳಿಗೆ ಕಾರಣ: ಡಾ.ಎ.ಪಿ.ಭಟ್
ಉಡುಪಿ, ಅ.25: ಇತ್ತೀಚಿನ ದಿನಗಳಲ್ಲಿ ಭೂಮಿಯ ಮೇಲೆ ಕಂಡುಬರುತ್ತಿರುವ ಪ್ರಾಕೃತಿಕ ವಿಕೋಪಗಳಿಗೂ, ವಿಜ್ಞಾನಿಗಳ ಲೆಕ್ಕಾಚಾರ ಮೀರಿ ಮುಂದುವರಿದಿರುವ ಸೂರ್ಯನ ಕುಣಿತ ಅಥವಾ ‘ಸನ್ ಸ್ಪಾಟ್ ಸೈಕಲ್’ಗೂ ನೇರ ಸಂಬಂಧವಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಉಡುಪಿಯ ಖ್ಯಾತ ಖಗೋಳ ವಿಜ್ಞಾನಿ, ನಿವೃತ್ತ ಪ್ರಾಂಶುಪಾಲ ಡಾ.ಎ.ಪಿ.ಭಟ್ ಹೇಳಿದ್ದಾರೆ.
ಭೂಮಿಯ ಮೇಲೀಗ ಎಲ್ಲಿ ಕಂಡರೂ ಭೂಕಂಪ, ಜ್ವಾಲಾಮುಖಿಗಳು, ಪದೇ ಪದೇ ಅಲ್ಲಲ್ಲಿ ಕಾಣಿಸಿಕೊಳ್ಳುವ ಚಂಡ ಮಾರುತಗಳು, ಮುಗಿಯದ ಮಳೆಗಾಲ, ಅತಿವೃಷ್ಟಿ ಎಂಬಷ್ಟು ಮಳೆ, ಎಲ್ಲಾ ಕಡೆಗಳಲ್ಲಿ ಈಗ ಸಾಮಾನ್ಯ ಎನ್ನಿಸುವ ರೀತಿಯಲ್ಲಿ ಕಂಡುಬರುತ್ತಿರುವ ಮೇಘ ಸ್ಪೋಟ ಇವುಗಳಿಗೆಲ್ಲಾ ಸೂರ್ಯನ ಈ ವಿಪರೀತ ನರ್ತನಕ್ಕೂ ಸಂಬಂಧ ವಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ ಎಂದವರು ಹೇಳುತ್ತಾರೆ.
25ನೇ ಆವೃತ್ತಿಯ 11ವರ್ಷದ ಸೂರ್ಯನ ಕುಣಿತ ‘ಸನ್ ಸ್ಫಾಟ್ ಸೈಕಲ್’ ವಿಜ್ಞಾನಿಗಳ ಲೆಕ್ಕಾಚಾರಗಳನ್ನು ಮೀರಿ ಮುಂದುವರಿಯುತ್ತಿದೆ. ಈ ವರ್ಷದ ಜನವರಿಗೆ ಮುಗಿಯುತ್ತದೆ ಎಂದು ವಿಜ್ಞಾನಿಗಳು ತಿಳಿದಿದ್ದ ಸೂರ್ಯನ ಈ ವಿದ್ಯಾ ಮಾನ ಈಗ ಇನ್ನೂ ಬೃಹತ್ ಸೌರ ಜ್ವಾಲೆಗಳ ಉತ್ಸರ್ಜನೆ ಹೆಚ್ಚುತ್ತಾ ಹೆಚ್ಚುತ್ತಾ, ಕಳೆದ ನೂರು ವರ್ಷಗಳಲ್ಲಿ ಕಾಣದ ಶಕ್ತಿಯುತ ಸೌರ ಜ್ವಾಲೆಗಳು (ಕಾಸ್ಮಿಕ್ ಮಾಸ್ ಇಜೆಕ್ಷನ್) ಸಿಡಿಯುತ್ತಲೇ ಇವೆ ಎಂದು ಡಾ.ಭಟ್ ತಿಳಿಸಿದರು.
ಇಂದು ಕಾರ್ತಿಕ ದೀಪೋತ್ಸವದ ಕಾಲದಲ್ಲಿ ದಕ್ಷಿಣ ಭಾರತದ ಇಕ್ಕೆಲೆಗಳಲ್ಲಿ ಎರಡೆರಡು ಚಂಡಮಾರುತಗಳು ಕಂಡುಬಂದಿವೆ. ಬಂಗಾಳಕೊಲ್ಲಿಯಲ್ಲಿ ಹಾಗೂ ಹಿಂದೂ ಮಹಾಸಾಗರದಿಂದ ಹೊರಟು ಭಾರತದ ಪಶ್ಚಿಮ ಕರಾವಳಿಯಲ್ಲಿ ದೀಪಾವಳಿ ಹಬ್ಬದ ನೆಲಚಕ್ರ ಸುರುಸುರು ಸುತ್ತುವಂತೆ ತಿರುಗುತ್ತಾ ಸಾಗುತ್ತಿವೆ. ಬಂಗಾಳ ಕೊಲ್ಲಿಯಲ್ಲಿ ವರ್ಷ ಈ ಸಮಯದಲ್ಲಿ ಚಂಡಮಾರುತ ಕಾಣಿಸಿಕೊಳ್ಳುವುದು ಮಾಮೂಲಿಯಾದರೂ, ಅರಬಿಸಮುದ್ರದಲ್ಲಿ ಚಂಡಮಾರುತ ಕಂಡುಬಂದಿರುವುದು ಮಾತ್ರ ಆಶ್ಚರ್ಯ.
ಈಗ ಇದು ಪ್ರತೀ ವರ್ಷ ಸರ್ವೇ ಸಾಮಾನ್ಯವಾಗುತ್ತಿವೆ. ಒಂದು ಕಾಲದಲ್ಲಿ ದೇಶದ ಪಶ್ಚಿಮ ಕರಾವಳಿ ತೀರದಲ್ಲಿ ಚಂಡಮಾರುತವೇಳುವುದಿಲ್ಲ ಎಂಬ ಪ್ರತೀತಿ ಇತ್ತು. ಆದರೆ ಈಗೀಗ ಎಲ್ಲವೂ ತಲೆಕೆಳಗಾಗಿದೆ. ಅದೇನು ಅದೃಷ್ಟವೊ ಪಶ್ಚಿಮ ಕರಾವಳಿ ತೀರದವರದು. ಪಶ್ಚಿಮ ಘಟ್ಟ, ಪಶ್ಚಿಮ ಸಮುದ್ರದಿಂದ ಬರುವ ಚಂಡಮಾರುತವನ್ನು ಒಳ ಬರಲುಬಿಡದೇ ಉತ್ತರದ ಮುಂಬಯಿ ಹಾಗೂ ಗುಜರಾತಿಗೆ ರಾಚಿಸುತ್ತಿದೆ.
ರಿಂಗ್ ಆಫ್ ಫಯರ್: ಆಸ್ಟ್ರೇಲಿಯಾ ಪೂರ್ವ ಕರಾವಳಿಯಿಂದ ಪ್ರಾರಂಭಿಸಿ ಜಪಾನ್, ಚೀನಾ ಮೇಲಿಂದ ರಶ್ಯ ಸವರಿಕೊಂಡು ಅಲಾಸ್ಕಾದ ಮೂಲಕ ಕೆನಡಾ ಹಾಗೂ ದಕ್ಷಿಣ ಅಮೇರಿಕಾದ ಪಶ್ಚಿಮ ಭಾಗದವರೆಗೆ ಅಬ್ಬಾ ಅದೆಷ್ಟು ಭೂಕಂಪನಗಳು ಈ ವರ್ಷ. ಈ ಪಥವನ್ನು ‘ರಿಂಗ್ ಆಫ್ ಫಯರ್’ ಎನ್ನುವರು. ಇದೊಂದು ತೇಲುವ ಸುಮಾರು 50 ಕಿಮೀ ದಪ್ಪದ ಭೂ ಮೇಲ್ಪದರದ ಪ್ಲೇಟ್ ‘ಪ್ಲೇಟ್ ಟೆಕ್ಟೋನಿಕ್ಸ್. ಹೀಗೆ ಅನೇಕ ಪ್ಲೇಟ್ಗಳಿಂದ ಭೂಮಿ ಆವೃತವಾಗಿದೆ.
ಈ ತೇಲುವ ಪ್ಲೇಟ್ಗಳು ತಾಗಿ ಘರ್ಷಣೆಯಾದಾಗ ಭೂಮಿ ಆ ಸ್ಥಳದಲ್ಲಿ ಕಂಪಿಸುತ್ತದೆ. ಕಂಪನದಿಂದ ಚಿಮ್ಮುವ ಪ್ಲಾಸ್ಮಾದ ಜ್ವಾಲಾಮುಖಿ ದಶ ದಿಶೆಗೆ ಹಾರುವ ಶಕ್ತಿಯುತ ಕಣಗಳ ಪ್ರವಾಹ. ಈ ಪದರಗಳ ಕಂಪನದ ಘರ್ಷಣೆ ಸಮುದ್ರದಲ್ಲಿ ಆದರೆ ಸುನಾಮಿ ಸೃಷ್ಟಿ.
ಭೂಮಿಯ ಮೇಲೆ ನಡೆಯುತ್ತಿರುವ ಈ ಲ್ಲಾ ಕ್ರಿಯೆಗಳಿಗೂ ಸೂರ್ಯನ ಕಲೆಗಳ ಆವರ್ತಕ್ಕೂ ಸಂಬಂಧವಿರಬಹು ದೆಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸೂರ್ಯನ ಕಲೆಗಳು ಹೆಚ್ಚಿದ್ದಾಗ ಭೂಕಂಪನಗಳೂ ಹೆಚ್ಚು. ಸದ್ಯ ಈಗ ಅದು ತೀವ್ರತರವಾಗಿ ನಡೆಯುತ್ತಿದೆ.
ಮೇಘಸ್ಪೋಟಗಳ ಸರಣಿ: ಹಿಂದೆಲ್ಲಾ ಅಪರೂಪಕ್ಕೆಂಬಂತೆ ಕಂಡುಬರುತಿದ್ದ ಮೇಘಸ್ಫೋಟ ಈಗೀಗ ಕಂಡಕಂಡಲ್ಲಿ ಕಾಣಿಸಿಕೊಳ್ಳುತ್ತಿದೆ. ಮೊದಲು ಹಿಮಾಲಯ ತಪ್ಪಲಲ್ಲಿ ಮೇಘಸ್ಫೋಟ ಆಗಾಗ ಕೇಳಿ ಬರುತ್ತಿತ್ತು. ಈಗ ದಕ್ಷಿಣ ಭಾರತ ದಲ್ಲೂ ಅಲ್ಲಲ್ಲಿ ಮೇಘ ಸ್ಫೋಟ ಕಂಡುಬರುತ್ತಿದೆ. ಕುಶಾಲನಗರದಲ್ಲಿ ಮಳೆ ಇಲ್ಲ, ಶಿರಾಡಿ ಘಾಟಿ ಕೆಳಗೂ ಮಳೆ ಇಲ್ಲ, ಘಾಟಿಯ ಮಧ್ಯದಲ್ಲಿ ಧಾರಾಕಾರ ಛಡಿ ಮಳೆ, ರಸ್ತೆಯಲ್ಲಿ ನೆರೆ. ಬರೇ 5 ಕಿಮೀ ಆಚೆ ಈಚೆ ಎಲ್ಲೂ ಮಳೆ ಇರುವುದಿಲ್ಲ ಮಧ್ಯದಲ್ಲಿ ನೀರೇ ನೀರು. ಧಾರಾಕಾರ ಮಳೆ. ಈ ಮೇಘಸ್ಫೋಟಗಳಿಗೆ ಕಾರಣ ಆಶ್ಚರ್ಯ.
ಈಗ ಅಲ್ಲಲ್ಲಿ ನಡೆಯುತ್ತಿರುವ ಜ್ವಾಲಾಮುಖಿಗಳು, ಅವುಗಳಿಂದ ಚಿಮ್ಮಿದ ಕಣಗಳ ಪ್ರವಾಹ. ಅವು ಸಾವಿರ ಸಾವಿರ ಕಿಮೀ ದೂರದಲ್ಲೂ ಗುಂಪು ಗುಂಪಾಗಿದ್ದಲ್ಲಿ ಅಲ್ಲೇ ಮೋಡ ಕೇಂದ್ರೀಕರಿಸಿ ಮೇಘ ಸ್ಫೋಟ ಎರ್ಪಡಿ ಸುತ್ತಿವೆ. ಈ ಎಲ್ಲ ಪೃಕೃತಿಯ ಕುಣಿತದಲ್ಲಿ ಸೂತ್ರಧಾರ ಸೂರ್ಯ, ನಟ ನಮ್ಮ ಭೂಮಿ ಎಂದು ಡಾ.ಎ.ಪಿ.ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.