ಕ್ರೀಡೆಯಿಂದ ಜಾತಿ ಧರ್ಮವನ್ನು ಮೀರಿ ನಿಲ್ಲಲು ಸಾಧ್ಯ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಉಡುಪಿ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟನೆ
ಉಡುಪಿ: ಶಾಲೆ ಎಂಬುದು ಅರಿವಿನ ಹೆಬ್ಬಾಗಿಲು. ನಮ್ಮ ನಡುವಿನ ಮೇಲು ಕೀಳು ಜಾತಿ ಧರ್ಮ ಎಲ್ಲವನ್ನು ಮೀರಿ ನಿಲ್ಲಬೇಕಾದರೆ ಕಲೆ ಮತ್ತು ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್ ಉಡುಪಿ ಸಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಉಡುಪಿ ವಲಯ ಹಾಗೂ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮಂಗಳೂರು ಅಧೀನ ಸಂಸ್ಥೆಯಾದ ಮೂಳೂರು ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಉಡುಪಿ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಂಸ್ಥೆಯು ಹುಟ್ಟಿದರೆ ಸಾಲದು, ಅದನ್ನು ಕಟ್ಟುವ ಕಾಯಕ ನಿರಂತರವಾಗಿ ನಡೆಯಬೇಕು. ಯಾವುದೇ ಒಂದು ಸಂಸ್ಥೆಯು ಊರಿನ ಬಗ್ಗೆ ಚಿಂತನೆ ಮಾಡಿದಾಗ, ಆರೋಗ್ಯಪೂರ್ಣ ಒಗ್ಗಿಕೊಂಡಾಗ, ಸಮಾಜ ಮುಖಿ ಒಲವು ಬೆಳೆಸಿಕೊಂಡಾಗ ಉನ್ನತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಪಥ ಸಂಚಲನದ ಧ್ವಜ ವಂದನೆ ಸ್ವೀಕರಿಸಿ, ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ಉದ್ಯಮಿ ಸಾಧು ಸಾಲ್ಯಾನ್ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಂಪಾರು ದಿನಕರ ಶೆಟ್ಟಿ ಧ್ವಜಾರೋಹಣ ನೆರವೇರಿಸಿ ದರು. ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಯಲ್ಲಮ್ಮ ಕ್ರೀಡಾಜ್ಯೋತಿ ಹಸ್ತಾಂತರಿಸಿದರು.
ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ, ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖ್ ವಹೀದ್ ದಾವೂದ್, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಡುಪಿ ತಾಲೂಕು ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಉದ್ಯಮಿ ಮುಹಮ್ಮದ್ ಇಬ್ರಾಹಿಂ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ಮುಖ್ಯ ಅತಿಥಿಗಳಾಗಿದ್ದರು.
ಕ್ರೀಡಾಕೂಟ ಸಂಘಟನಾ ಸಮಿತಿಯ ಅಧ್ಯಕ್ಷ ಶಭೀ ಅಹ್ಮದ್ ಖಾಝಿ, ಕೋಶಾಧಿಕಾರಿ ಹಾಜಿ ಅಬೂಬಕ್ಕರ್ ನೇಜಾರು, ಸಂಚಾಲಕ ಮುಸ್ತಾಕ್ ಸಾಹೇಬ್ ಕಾಪು, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವೀಂದ್ರ ನಾಯಕ್, ಅಲ್ ಇಹ್ಸಾನ್ ಎಜ್ಯುಕೇಶನಲ್ ಹೆಡ್ ಅನ್ವರ್ ಹುಸೇನ್ ಗೂಡಿನಬಳಿ, ಅಲ್ ಇಹ್ಸಾನ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಮೌಲಾನ ಯು.ಕೆ.ಮುಸ್ತಫಾ ಸಅದಿ, ಆಡಳಿತಾಧಿಕಾರಿ ಪ್ರೊ.ಯುಸೂಫ್, ಮುಖ್ಯೋಪಾಧ್ಯಾಯಿನಿ ಸೈಯದ್ ಶಬಾನ ಉಪಸ್ಥಿತರಿದ್ದರು.
ಅಲ್ ಇಹ್ಸಾನ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಹಬೀಬುರ್ರಹ್ಮಾನ್ ಕೆ.ಎಸ್. ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಶೀರ್ ಎಂ. ವಂದಿಸಿದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟದಲ್ಲಿ ಉಡುಪಿ ವಲಯದ ಒಟ್ಟು 64 ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.