×
Ad

ಕಾರ್ಕಳ ಕಾಂಗ್ರೆಸ್ ಆಶ್ರಯದಲ್ಲಿ ದಲಿತ ಶಕ್ತಿ ಸಮಾವೇಶ

Update: 2025-11-10 10:49 IST

ಕಾರ್ಕಳ: ಸಂವಿಧಾನ ಆಶಯದಂತೆ ಸರ್ವರಿಗೂ ಸಮಬಾಳು ಸಮಪಾಲು ಸಿಗುವಂತಾಗಲು ಕಾಂಗ್ರೆಸ್ ಪಕ್ಷವು ಮೀಸಲಾತಿಯನ್ನು ಜಾರಿಗೊಳಿಸಿತು, ಅದರ ಪರಿಣಾಮವಾಗಿ ಇಂದು ದಲಿತರು, ಹಿಂದುಳಿದ ವರ್ಗದವರು, ಶೋಷಿತರು ವರ್ಗಗಳು ಸ್ವಾಭಿಮಾನದ ಜೀವನ ನಡೆಸುವಂತಾಯಿತು ಎಂದು ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಹೇಳಿದ್ದಾರೆ.

 

ಅವರು ಬ್ಲಾಕ್ ಕಾಂಗ್ರೆಸ್ ಕಾರ್ಕಳ, ನಗರ ಕಾಂಗ್ರೆಸ್ ಸಮಿತಿ ಮತ್ತು ನಗರ ಪರಿಶಿಷ್ಟ ಜಾತಿ ಘಟಕದ ಜಂಟಿ ಆಶ್ರಯದಲ್ಲಿ ಕಾರ್ಕಳ ಗಾಂಧಿ ಮೈದಾನ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದಲ್ಲಿ ಸಭಾಂಗಣದಲ್ಲಿ ನಡೆದ 'ದಲಿತ ಶಕ್ತಿ ಸಮಾವೇಶ' ಉದ್ಘಾಟಿಸಿ ಮಾತನಾಡುತ್ತಿದ್ದರು.

 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, ಸ್ಪರ್ಶ ಅಸ್ಪರ್ಶ ಮುಂತಾದ ಸಮಾಜದ ಅನಿಷ್ಟಗಳನ್ನು ಹೋಗಲಾಡಿಸಲು ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದಿಂದ ಸಾಧ್ಯವಾಯಿತು, ಇಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಖಿಲ ಭಾರತ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಒಬ್ಬರು ದಲಿತರು ಎನ್ನಲು ಹೆಮ್ಮೆಯಾಗುತ್ತದೆ, ಇದು ಕಾಂಗ್ರೆಸ್ ಪಕ್ಷವು ಶೋಷಿತ ವರ್ಗಗಳಿಗೆ ನೀಡುವ ಗೌರವ ಎಂದರು.

ಉಡುಪಿ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆ ಮಾತನಾಡಿ, ನಾವಿಂದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಭಾರತದ ಸಂವಿಧಾನವೇ ಕಾರಣ, ಅಂಬೇಡ್ಕರ್ ರಚಿತ ಸಂವಿಧಾನವು ದೇಶದ ಪ್ರತಿಯೊಬ್ಬನ ನಾಗರಿಕನಿಗೂ ಹಕ್ಕು ಕರ್ತವ್ಯ ಮತ್ತು ಸ್ವಾತಂತ್ರ್ಯವನ್ನು ನೀಡಿದೆ ಎಂದರು.

ಖ್ಯಾತ ವೈದ್ಯರು ಹಿರಿಯ ಕಾಂಗ್ರೆಸಿಗರು ದಲಿತ ಮುಖಂಡರೂ ಆದ ಡಾ. ಪ್ರೇಮದಾಸ್ ಮಾತನಾಡಿ, ದಲಿತ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷವು ನೀಡಿದಷ್ಟು ಸಹಕಾರವನ್ನು ಬೇರೆ ಯಾವ ಪಕ್ಷವೂ ನೀಡಿಲ್ಲ, ಕೋಮುವಾದಿ ಪಕ್ಷವಾದ ಬಿಜೆಪಿಯು ಇಂದು ದಲಿತ ಸಮುದಾಯದ ಮತಕ್ಕಾಗಿ ನಮ್ಮ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ದಲಿತರೆಲ್ಲರೂ ಬಿಜೆಪಿಯ ಈ ಷಡ್ಯಂತ್ರವನ್ನು ಅರಿತುಕೊಳ್ಳಬೇಕು ಎಂದರು.

ಕರ್ನಾಟಕ ಸರಕಾರದಿಂದ ನಾಮನಿರ್ದೇಶನಗೊಂಡ ರಮೇಶ್ ಪತ್ತೊಂಜಿಕಟ್ಟೆ, ಶೋಭಾ ರಾಣೆ ಮತ್ತು ಮಂಜು ತೆಳ್ಳಾರು ರಸ್ತೆ ಅವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಉಡುಪಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅದ್ಯಕ್ಷ ಅಜಿತ್ ಹೆಗ್ಡೆ ಮಾಳ, ನಗರ ಕಾಂಗ್ರೆಸ್ ಅದ್ಯಕ್ಷ ರಾಜೇಂದ್ರ ದೇವಾಡಿಗ, ಪರಿಶಿಷ್ಟ ಜಾತಿ ಘಟಕದ ರಾಜ್ಯ ಸಮಿತಿ ಸದಸ್ಯೆ ಪ್ರತಿಮಾ ರಾಣೆ, ದಲಿತ ಮುಖಂಡ ಅಣ್ಣಪ್ಪ ನಕ್ರೆ, ಬ್ಲಾಕ್ ಮೀನುಗಾರರ ಘಟಕದ ಅಧ್ಯಕ್ಷ ಮುರಳಿ ರಾಣೆ, ಹೆಬ್ರಿ ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಅದ್ಯಕ್ಷ ರಾಘವ ಕುಕ್ಕುಜೆ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೀನಾ ಡಿಸೋಜ, ಅಕ್ರಮ-ಸಕ್ರಮ ಸಮಿತಿಯ ಸದಸ್ಯ ರಮೇಶ್ ಬಜಕಳ, ಸೇವಾದಳದ ಅಬ್ದುಲ್ ಸಾಣೂರು ಉಪಸ್ಥಿತರಿದ್ದರು.

ಮೇಘನಾ ಪ್ರಾರ್ಥನೆ ಹಾಡಿದರು. ಕಾರ್ಕಳ ಬ್ಲಾಕ್ ಪರಿಶಿಷ್ಟ ಜಾತಿ ಘಟಕಗಳ ಅಧ್ಯಕ್ಷ ದೇವದಾಸ್ ಸ್ವಾಗತಿಸಿದರು, ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ದಾನಶಾಲೆ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News