ಸಹಕಾರಿ ಕ್ಷೇತ್ರದ ನಿರಂತರ ಬೆಳವಣಿಗೆಗೆ ತರಬೇತಿ ಅಗತ್ಯ: ಜಯಕರ ಶೆಟ್ಟಿ ಇಂದ್ರಾಳಿ
ಉಡುಪಿ, ಜೂ.24: ಸಹಕಾರಿ ಕ್ಷೇತ್ರದ ನಿರಂತರ ಬೆಳವಣಿಗೆಗೆ ತರಬೇತಿ ಅತೀ ಅಗತ್ಯವಾಗಿದೆ. ಸಮಾಜಕ್ಕೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ತರಬೇತಿ ಸಹಕಾರಿಯಾಗಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರಶೆಟ್ಟಿ ಇಂದ್ರಾಳಿ ಹೇಳಿದ್ದಾರೆ.
ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಂಯುಕ್ರ ಆಶ್ರದಲ್ಲಿ ಜಿಲ್ಲೆಯ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯಕಾರ್ಯ ನಿರ್ವಾಹಕರಿಗೆ ಬುಧವಾರ ಬಡಗಬೆಟ್ಟು ಕೋ ಕ್ರೆಡಿಟ್ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ವಿಶೇಷ ಸಹಕಾರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವ್ಯವಹಾರದಲ್ಲಿ ನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಪನ್ಮೂಲ ವ್ಯಕ್ತಿಗಳ ಮೂಲಕ ಪರಿಹರಿಸಿಕೊಳ್ಳಲು ಸದವಕಾಶ ಇದಾಗಿದೆ. ಸಹಕಾರ ಕ್ಷೇತ್ರದಲ್ಲಿ ನಿರಂತರ ಬದಲಾವಣೆ ನಡೆಯುತ್ತಿದೆ. ಆರ್ಥಿಕ ವ್ಯವಹಾರದ ಜೊತೆಗೆ ಜನರಿಗೆ ಉಪಯುಕ್ತ ಸೇವೆಗಳನ್ನು ನೀಡಬಹುದು. ಇದರ ಆದಾಯದಿಂದಲೇ ಸಹಕಾರಿ ಸಂಸ್ಥೆ ಮುನ್ನಡೆಯುತ್ತದೆ ಎಂದರು.
ಸಹಕಾರ ಯೂನಿಯನ್ ನಿರ್ದೇಶಕರಾದ ಗಂಗಾಧರ ಶೆಟ್ಟಿ, ಹರೀಶ್ ಕಿಣಿ, ಸುಧೀರ್ ವೈ., ಹಿರಿಯ ಉಪನ್ಯಾಸಕಿ ಬಿಂದು ನಾಯರ್ ಉಪಸ್ಥಿತರಿದ್ದರು. ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.