ಸಮಾಜದಲ್ಲಿನ ಪಿತೃ ಪ್ರಧಾನ ಮನಸ್ಥಿತಿ ಬದಲಾವಣೆ ಅಗತ್ಯ: ಡಾ.ಭಾರತಿದೇವಿ
ಕುಂದಾಪುರ, ಜೂ.29: ಜಾತಿ, ಧರ್ಮ, ವರ್ಗ ಇವುಗಳ ಅಂತರ್ ಸಂಬಂಧವನ್ನು ಅರ್ಥ ಮಾಡಿಕೊಳ್ಳದೆ ಮಹಿಳಾ ಚಳುವಳಿಯ ಯಶಸ್ಸನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹೆಣ್ಣು ಮಕ್ಕಳ ಸಬಲೀಕರಣವಾಗಬೇಕಾದರೆ ಸಮಾಜದಲ್ಲಿನ ಪಿತೃ ಪ್ರಧಾನ ಮನಸ್ಥಿತಿ ಬದಲಾಗಬೇಕಾಗಿದೆ ಎಂದು ಕನ್ನಡ ಪ್ರಾಧ್ಯಾಪಕಿ ಡಾ.ಭಾರತಿದೇವಿ ಪಿ.ಶಿವಮೊಗ್ಗ ಹೇಳಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಉಡುಪಿ, ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಕುಂದಾಪುರ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ‘ಕನ್ನಡ ಮಹಿಳಾ ಚಳವಳಿಗಳು’ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ನಮ್ಮಲ್ಲಿನ ಮನಸ್ಥಿತಿಗಳನ್ನು ಕಾನೂನುಗಳ ಮೂಲಕವಲ್ಲ, ಬದಲು ಸಮಾಜದಲ್ಲಿರುವ ಲಿಂಗಸೂಕ್ಷ್ಮತೆ ಅರಿವಿ ನೊಂದಿಗೆ ಬದಲಾಯಿಸಿಕೊಳ್ಳ ಬೇಕಾಗಿದೆ. ಮಾಧ್ಯಮ ಯಾವುದಾದರೇನು, ನಮ್ಮ ದೃಷ್ಟಿಕೋನ ಬದಲಾಯಿಸಿ ಕೊಳ್ಳಬೇಕು. ಇವತ್ತು ಹೆಣ್ಣು ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬಂದು ತಮ್ಮ ಧ್ವನಿಯನ್ನು ತಾವೇ ಎತ್ತಬೇಕಾಗಿದೆ ಎಂದರು.
ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ.ರೇಖಾ ಬನ್ನಾಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಹೊರತರಲಾದ ಮಹಿಳಾ ಮುನ್ನಡೆ ಪುಸ್ತಕಗಳನ್ನು ಬಿಡುಗಡೆಗೊಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಮುದಾಯ ಕುಂದಾಪುರ ಅಧ್ಯಕ್ಷ ಡಾ.ಸದಾನಂದ ಬೈಂದೂರು ಮಾತನಾಡಿ, 50ನೇ ವರ್ಷದ ನೆನಪಿನ ಕಾರ್ಯಕ್ರಮಗಳ ಭಾಗವಾಗಿ ಈ ಸರಣಿ ಉಪನ್ಯಾಸಗಳನ್ನು ಆಯೋಜಿಸಲಾಗುತ್ತಿದೆ. ಜನಪರ ವಾದ ಮೌಲ್ಯ ಬಿತ್ತನೆಯಲ್ಲಿ ಸಮುದಾಯ ಸಂಘಟನೆಯು ಮುಂಚೂಣಿ ಯಲ್ಲಿದೆ ಎಂದು ತಿಳಿಸಿದರು.
ಅಕಾಡೆಮಿ ಸದಸ್ಯ ಡಾ.ಜಯಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನ ಹಾಗೂ ಸಮೂಹ ಪ್ರಜ್ಞೆ ಎಂಬುದು ಮಹಿಳೆಯರಲ್ಲಿ ಸದಾ ಜಾಗೃತವಾಗಿರಬೇಕು ಎಂದು ಹೇಳಿದರು.
ಸಮುದಾಯದ ಕಾರ್ಯದರ್ಶಿ ರವಿ ವಿ.ಎಂ. ಸ್ವಾಗತಿಸಿದರು. ಸಮುದಾಯದ ಸದಸ್ಯ ರಮೇಶ್ ಗುಲ್ವಾಡಿ ವಂದಿಸಿದರು. ಚಕೋರ ಜಿಲ್ಲಾ ಸಂಚಾಲಕ ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ಸಂವಾದದಲ್ಲಿ ನಮ್ಮ ಭೂಮಿ ಸಿಡಬ್ಲ್ಯೂಸಿ ಕಾರ್ಯಕರ್ತ ಗಣೇಶ್ ಶೆಟ್ಟಿ, ಶಿಫಾನಾ ಹೊಸಂಗಡಿ ಮೊದಲಾದವರು ಭಾಗವಹಿಸಿದ್ದರು.