ಮಟ್ಕಾ ಬುಕ್ಕಿ ಸಹಿತ ನಾಲ್ವರ ಬಂಧನ
ಉಡುಪಿ, ಆ.7: ಜಿಲ್ಲೆಯಾದ್ಯಂತ ಕಳೆದ ಒಂದು ವಾರದಲ್ಲಿ ಮಟ್ಕಾ ಜುಗಾರಿ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಈ ಸಂಬಂಧ ಒಟ್ಟು 3 ಪ್ರಕರಣಗಳನ್ನು ದಾಖಲಿಸಿ, ಮಟ್ಕಾ ಬುಕ್ಕಿ ಸಹಿತ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆ.1ರಂದು ಮಟ್ಕಾ ಜುಗಾರಿಗೆ ಸಂಬಂಧಿಸಿ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಕಳ ಬಸ್ ನಿಲ್ದಾಣದ ಬಳಿ ಮಿಯ್ಯಾರು ಗ್ರಾಮದ ಬೋರ್ಕಟ್ಟೆಯ ವೀರೇಂದ್ರ ಶೆಟ್ಟಿ(42), ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹಂದಾಡಿ ಗ್ರಾಮದ ಗುಡ್ಡಿ ಬಾರ್ ಬಳಿ ಮಣೂರು ಗ್ರಾಮದ ಪಡುಕೆರೆಯ ಕುಶಾಲ್ ಶೆಟ್ಟಿ(66) ಹಾಗೂ ಚಾಂತಾರು ಗ್ರಾಮದ ದಕ್ಷಿಣ್ ಬಾರ್ ಬಳಿ ಚಾಂತಾರಿನ ಚಂದ್ರಶೇಖರ ಶೆಟ್ಟಿ ಎಂಬವರನ್ನು ಪೊಲೀಸರು ಬಂಧಿಸಿದ್ದರು.
ಚಂದ್ರಶೇಖರ ಶೆಟ್ಟಿಯನ್ನು ವಿಚಾರಿಸಿದಾಗ, ಸಂಗ್ರಹಿಸಿದ ಹಣವನ್ನು ಕುಂದಾಪುರ ಕೊರ್ಗಿಯ ರತ್ನಾಕರ ಶೆಟ್ಟಿ ಎಂಬಾತನಿಗೆ ನೀಡುವುದಾಗಿ ತಿಳಿಸಿದ್ದನು. ಈ ಪ್ರಕರಣದ ಆರೋಪಿಗಳ ಮಾಹಿತಿ ಮೇರೆಗೆ ಮಟ್ಕಾ ಬುಕ್ಕಿ ಲೀಯೋ ಕರ್ನೆಲಿಯೋಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.