ಎಸ್‌ಐಆರ್: ಉಡುಪಿ ಜಿಲ್ಲೆಯಲ್ಲಿ ಹೆಸರು ತೆಗೆಯಲ್ಪಟ್ಟವರ ಸಂಖ್ಯೆಯಲ್ಲಿ ಇಳಿಕೆ

Update: 2026-08-10 21:34 IST

ಉಡುಪಿ, ಆ.10: ಜಿಲ್ಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಮುಂದುವರಿ ದಿದ್ದು, ವಿವಿಧ ಕಾರಣಗಳಿಂದ ಮತದಾರರ ಪಟ್ಟಿಯಿಂದ ಹೊರಬಿದ್ದವರು ದಾಖಲೆಗಳನ್ನು ತಂದು ಹೆಸರನ್ನು ಮತ್ತೆ ಸೇರ್ಪಡೆಗೊಳಿಸುವ ಕಾರ್ಯ ನಡೆಯುತ್ತಿದೆ.

ಬಿಎಲ್‌ಒಗಳು ಜಿಲ್ಲೆಯ ಮತದಾರರಿಗೆ ತಲುಪಿಸಿದ್ದ 10,63,876 ಎನ್ಯೂಮರೇಶನ್ ನಮೂನೆ (ಗಣತಿ ನಮೂನೆ) ಗಳನ್ನು ಮರಳಿ ಪಡೆದು ಅದನ್ನು ಶೇ.100ರಷ್ಟು ಡಿಜಟಲೀಕರಣಗೊಳಿಸುವಾಗ 9,99,675 (ಶೇ. 93.97) ರಷ್ಟು ನಮೂನೆಗಳು ಮಾತ್ರ ಡಿಜಿಟಲೈಸ್ ಮಾಡಲಾಗಿತ್ತು. ಉಳಿದ 64,201 ನಮೂನೆಗಳು ವಿವಿಧ ಕಾರಣಗಳಿಂದ (ಎಎಸ್‌ಡಿಡಿಒ) ಪಟ್ಟಿ ಯಿಂದ ಅನರ್ಹಗೊಂಡಿದ್ದವು.

ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಇದೀಗ ವಿವಿದ ದಾಖಲೆಗಳೊಂದಿಗೆ ಅಧಿಕಾರಿಗಳನ್ನು ಬೇಟಿಯಾಗಿ ತಮ್ಮ ದಾಖಲೆಗಳನ್ನು ತೋರಿಸಿ ಮತ್ತೆ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುತಿದ್ದಾರೆ.

ಈ ಪ್ರಕ್ರಿಯೆಯ ಮೂಲಕ ಅ.10 ಸೋಮವಾರ ಸಂಜೆಯವರೆಗೆ ಡಿಜಿಟಲೈಸ್ ಆದವರ ಸಂಖ್ಯೆ ಇದೀಗ 10,00,260ಕ್ಕೇರಿದೆ. ಅದೇ ರೀತಿ ವಿವಿಧ ಕಾರಣಗಳಿಂದ ಪಟ್ಟಿಯಿಂದ ಹೊರಬಿದ್ದವರ ಸಂಖ್ಯೆ 63,616ಕ್ಕೆ ಇಳಿದಿದೆ. ಈ ಮೂಲಕ ಮೊದಲ ಪಟ್ಟಿಯಿಂದ ಕೈಬಿಡಲಾದ 585 ಮಂದಿಯ ಹೆಸರನ್ನು ಮತ್ತೆ ಪಟ್ಟಿಗೆ ಸೇರಿಸಲಾಗಿದೆ.

ಸದ್ಯ ಜಿಲ್ಲೆಯಲ್ಲಿ 21,215ಮಂದಿ ಮೃತಪಟ್ಟಿದ್ದರೆ, 29,532 ಮಂದಿ ಶಾಶ್ವತವಾಗಿ ಬೇರೆ ಕಡೆಗೆ ವರ್ಗಾವಣೆ ಗೊಂಡಿದ್ದಾರೆ. 4360 ಮಂದಿ ಗೈರಾಗಿದ್ದರೆ, 192 ಮಂದಿ ಇತರರೂ ಈ ಪಟ್ಟಿಯಲ್ಲಿದ್ದಾರೆ. ಗಣತಿ ನಮೂನೆಗಳನ್ನು ಭರ್ತಿ ಮಾಡಿ ಬಿಎಲ್‌ಒಗಳಿಗೆ ತಲುಪಿಸುವ ದಿನಾಂಕವನ್ನು ಆ.17ವರೆಗೆ ವಿಸ್ತರಿಸಲಾಗಿದೆ. ನಮೂನೆ ತುಂಬಿಸಲು ಯಾವುದೇ ತೊಂದರೆ ಅಥವಾ ಗೊಂದಲಗಳಿದ್ದರೆ, ನಿಮ್ಮ ಬಿಎಲ್‌ಒರನ್ನು ಸಂಪರ್ಕಿಸಬಹುದು.

ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲಾದವರ ಹೆಸರು ಗಳನ್ನು ಜಿಲ್ಲೆಯ ಎಎಸ್‌ಡಿಡಿಒ ಪಟ್ಟಿಯಲ್ಲಿ ಅಧಿಕೃತ ವೆಬ್‌ಸೈಟ್- https://udupi.nic.in/en/special-intensive-revision -2026-ನಲ್ಲಿ ಪ್ರಕಟಿಸ ಲಾಗಿದೆ. ಕೂಡಲೇ ಎಲ್ಲರೂ ಎಎಸ್‌ಡಿಡಿಒ ಪಟ್ಟಿಯನ್ನು ವೀಕ್ಷಿಸಿ ಏನಾದರೂ ಬದಲಾವಣೆಗಳು ಅಥವಾ ತಿದ್ದುಪಡಿಗಳು ಇದ್ದಲ್ಲಿ ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳಿಗೆ ಹಾಗೂ ಮತದಾರರ ನೋಂದಣಾಧಿಕಾರಿಯವರ ಗಮನಕ್ಕೆ ಆಗಸ್ಟ್ 17ರ ಒಳಗೆ ತರಬಹುದಾಗಿದೆ.

ಎನ್ಯೂಮರೇಷನ್ ನಮೂನೆಗಳನ್ನು ಮನೆಮನೆಗೆ ತೆರಳಿ ಸಂಗ್ರಹಿಸುವ ಪ್ರಕ್ರಿಯೆಯು ಆಗಸ್ಟ್ 17ರವರೆಗೆ ನಡೆಯಲಿದೆ. ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News